ಕಾರವಾರ: ಉತ್ತರ ಕನ್ನಡದ ಕರಾವಳಿಯಲ್ಲಿ ಗುರುವಾರ ತಡರಾತ್ರಿಯಿಂದ ಮುಂಜಾನೆಯವರೆಗೂ ಧಾರಾಕಾರ ಮಳೆಯಾಗಿದೆ. ಹಲವು ನದಿಗಳು, ಹಳ್ಳಗಳು ಭರ್ತಿಯಾಗಿದ್ದು, ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗಿದೆ. ನಿವಾಸಿಗಳು ನಿದ್ದೆಯಿಲ್ಲದೆ ರಾತ್ರಿ ಕಳೆದಿದ್ದಾರೆ.
ಭಟ್ಕಳ ತಾಲ್ಲೂಕಿನ ಚೌಥನಿ ನದಿ ತುಂಬಿದ್ದು, ಸೇತುವೆ ಮುಳುಗಡೆಯಾಗಿದೆ. ಹತ್ತಾರು ಮನೆಗಳಿಗೆ ನೀರು ನುಗ್ಗಿದೆ. ಪಟ್ಟಣದಿಂದ ಪುರವರ್ಗಕ್ಕೆ ಹೋಗುವ ರಸ್ತೆಯಲ್ಲಿ ಸಂಪರ್ಕ ಕಡಿತವಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಅಂಚಿನ ಮಾರುತಿ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ. ಸರ್ಪನಕಟ್ಟೆ ಚೆಕ್ ಪೋಸ್ಟ್ ಬಳಿಯ ಹುಲಿದುರ್ಗಿ ದೇವಸ್ಥಾನ ಹತ್ತಿರದ ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯಲ್ಲಿ ಗುಡ್ಡ ಕುಸಿದಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
ಕಾರವಾರದ ಅರಗಾದಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ಮಳೆ ನೀರು ಹರಿದ ಕಾರಣ ವಾಹನಗಳ ಸಂಚಾರ ನಿಧಾನವಾಗಿದೆ. ನಗರದ ಕೆ.ಎಚ್.ಬಿ ಹೊಸ ಬಡಾವಣೆ ಸೇರಿದಂತೆ ವಿವಿದೆಡೆ ಜಲಾವೃತವಾಗಿದ್ದು, ಸ್ಥಳೀಯರು ಸಂಚರಿಸಲು ಪರದಾಡುವಂತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.