ಬೆಂಗಳೂರು: ಲೋಕಸಭೆ ಚುನಾವಣೆಗೆ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ (ಎಎಪಿ), ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರಿದಂತೆ ವಿರೋಧ ಪಕ್ಷಗಳು ಬಿಡುಗಡೆ ಮಾಡಿರುವ ಪ್ರಣಾಳಿಕೆ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಕಿಸಿದ್ದಾರೆ.
ಪ್ರಣಾಳಿಕೆ ವಿಚಾರ ಪ್ರಸ್ತಾಪಿಸಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಕಾಂಗ್ರೆಸ್ ಪಕ್ಷ ಭಾರತವನ್ನು ವೆನೆಜುವೆಲಾ ಮಾಡಲು ಹೊರಟರೆ, ಆಮ್ ಆದ್ಮಿ ಪಕ್ಷ ಭಾರತವನ್ನು ಖಾಲಿಸ್ತಾನ ಮಾಡಲು ಹೊರಟಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
‘ಟಿಎಂಸಿ ಭಾರತವನ್ನು ಬಾಂಗ್ಲಾದೇಶವನ್ನಾಗಿ ಪರಿವರ್ತಿಸಲು ದಾಪುಗಾಲನ್ನಿಟ್ಟಿದೆ. ಸಮಾಜವಾದಿ ಪಕ್ಷ (ಎಸ್ಪಿ) ಭಾರತವನ್ನು ಪಾಕಿಸ್ತಾನವನ್ನಾಗಿ ಮಾಡಲು ಯತ್ನಿಸುತ್ತಿದೆ. ಇದು ಸುಳ್ಳೋ ಅಥವಾ ನಿಜವೋ ಎಂಬುದಕ್ಕೆ ಈ ಪಕ್ಷಗಳು ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ಒಮ್ಮೆ ಓದಿ ನೋಡಿ...’ ಎಂದು ಯತ್ನಾಳ ವಾಗ್ದಾಳಿ ನಡೆಸಿದ್ದಾರೆ.
‘ರಾಷ್ಟ್ರೀಯವಾದ, ಬಡತನ ನಿರ್ಮೂಲನೆ, ಮಹಿಳಾ ಸಬಲೀಕರಣ, ಸಶಕ್ತ, ಸುಭಿಕ್ಷ, ಸ್ವಾವಲಂಬಿ ಭಾರತದ ಕಲ್ಪನೆ ನಮ್ಮ ಭಾರತೀಯ ಜನತಾ ಪಕ್ಷದ್ದು... ಬಿಜೆಪಿಯ ಪ್ರಣಾಳಿಕೆಯನ್ನು ಒಮ್ಮೆ ಓದಿ.. ಭಾರತ ಮಾತೆಗೆ ಜಯವಾಗಲಿ’ ಎಂದು ಬರೆದುಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.