ADVERTISEMENT

HanuMan: ವಿತರಕರಿಂದ ಅಯೋಧ್ಯೆಯ ರಾಮಮಂದಿರಕ್ಕೆ ₹ 2.6 ಕೋಟಿ ಕಾಣಿಕೆ

ಪಿಟಿಐ
Published 22 ಜನವರಿ 2024, 11:28 IST
Last Updated 22 ಜನವರಿ 2024, 11:28 IST
   

ಹೈದರಾಬಾದ್: ಹನುಮ್ಯಾನ್‌ ಚಿತ್ರದ ವಿತರಕರಾದ ಮೈತ್ರಿ ಮೂವಿ ಮೇಕರ್ಸ್‌ ತಂಡವು ಅಯೋಧ್ಯೆಯ ರಾಮಮಂದಿರಕ್ಕೆ ₹ 2.6 ಕೋಟಿ ಕಾಣಿಕೆಯನ್ನು ನೀಡುವುದಾಗಿ ಹೇಳಿದೆ.

‘ಹನುಮ್ಯಾನ್ ಚಿತ್ರ ವೀಕ್ಷಣೆಗೆ ಮಾರಾಟವಾಗುವ ಪ್ರತಿ ಟಿಕೆಟ್‌ನಿಂದ ತಲಾ ₹5 ಅನ್ನು ದೇಗುಲಕ್ಕೆ ಕಾಣಿಕೆಯಾಗಿ ನೀಡಲು ನಿರ್ಧರಿಸಲಾಗಿದೆ. ಈವರೆಗೂ ತೆಲುಗು ಭಾಷೆಯಲ್ಲಿ ಪ್ರದರ್ಶನ ಕಾಣುತ್ತಿರುವ ಚಿತ್ರದ 53.28 ಸಾವಿರ ಟಿಕೆಟ್‌ಗಳು ಮಾರಾಟವಾಗಿವೆ. ಇದರಿಂದ ಬಂದ ₹ 2.66 ಕೋಟಿಯನ್ನು ಕಾಣಿಕೆಯಾಗಿ ನೀಡಲು ಚಿತ್ರತಂಡ ನಿರ್ಧರಿಸಿದೆ’ ಎಂದು ಕಂಪನಿಯು ಮೈಕ್ರೊ ಬ್ಲಾಗಿಂಗ್ ಎಕ್ಸ್‌ ಖಾತೆಯಲ್ಲಿ ತಿಳಿಸಿದೆ

‘ಅಯೋಧ್ಯೆಯ ರಾಮಮಂದಿರಕ್ಕೆ ಕಾಣಿಕೆಯಾಗಿ ₹2.66ಕೋಟಿ ನೀಡಲು ಕಾರಣರಾದ 53.28ಲಕ್ಷ ಜನರಿಗೆ ಧನ್ಯವಾದಗಳು. ಮುಂದೆಯೂ ಈ ಚಿತ್ರ ವೀಕ್ಷಿಸುವ ಪ್ರತಿಯೊಬ್ಬರಿಂದಲೂ ₹ 5ರಷ್ಟು ಕಾಣಿಕೆ ರೂಪದಲ್ಲಿ ಅಯೋಧ್ಯಯ ರಾಮಮಂದಿರಕ್ಕೆ ಸೇರಲಿದೆ’ ಎಂದು ಹೇಳಲಾಗಿದೆ.

ADVERTISEMENT

ಮಿರ್ಜಾ ಸಿನಿಮಾಸ್ ಎಂಬ ಮತ್ತೊಂದು ಸಂಸ್ಥೆಯೂ ಹನುಮ್ಯಾನ್ ಚಿತ್ರ ವೀಕ್ಷಕರಿಗೆ ಕೊಡುಗೆಗಳನ್ನು ಘೋಷಿದ್ದು, ಜ. 22ರಂದು ಒಂದು ಟಿಕೆಟ್ ಖರೀದಿಸಿದರೆ ಒಂದು ಟಿಕೆಟ್‌ ಅನ್ನು ಉಚಿತವಾಗಿ ನೀಡುವುದಾಗಿ ಹೇಳಿದೆ. 

ಪ್ರಶಾಂತ್ ವರ್ಮಾ ಅವರ ಕಥೆ ಹಾಗೂ ನಿರ್ದೇಶನವಿರುವ ಹನುಮ್ಯಾನ್ ಎಂಬ ಸೂಪರ್‌ಹೀರೊ ಚಿತ್ರವು ಕಳೆದ ಶುಕ್ರವಾರ ತೆರೆಕಂಡಿತ್ತು. ಈ ಚಿತ್ರವನ್ನು ಪ್ರೈಂಶೋ ಎಂಟರ್‌ಟೈನ್ಮೆಂಟ್‌ ನಿರ್ಮಿಸಿದೆ. ಈಚಿತ್ರವು ಈವರೆಗೂ ₹150 ಕೋಟಿ ಗಳಿಕೆ ಕಂಡಿದೆ.

ತೇಜ್‌ ಸಜ್ಜಾ ನಟನೆಯ ಹನುಮ್ಯಾನ್ ಚಿತ್ರದ ಬಿಡುಗಡೆ ಸಂದರ್ಭದಲ್ಲಿ ತೆಲುಗು ನಟ ಚಿರಂಜೀವಿ ಅವರು ಪ್ರತಿ ಟಿಕೆಟ್‌ನಿಂದ ₹5 ರಷ್ಟನ್ನು ರಾಮಮಂದಿರಕ್ಕೆ ಕಾಣಿಕೆಯಾಗಿ ನೀಡುವ ಘೋಷಣೆ ಮಾಡಿದ್ದರು. ರಾಮಮಂದಿರ ಉದ್ಘಾಟನೆಗೆ ಆಹ್ವಾನ ಪಡೆದ ಭಾರತೀಯ ಸಿನಿಮಾ ರಂಗದ ಗಣ್ಯರಲ್ಲಿ ಚಿರಂಜೀವಿ ಅವರೂ ಒಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.