ನಟಿ ಸೌಂದರ್ಯ, ಮೋಹನ್ ಬಾಬು
ಬೆಂಗಳೂರು: 2004 ರಲ್ಲಿ ಬೆಂಗಳೂರು ಹೊರವಲಯದಲ್ಲಿ ನಡೆದಿದ್ದ ಲಘು ವಿಮಾನ ಅಪಘಾತದಲ್ಲಿ ‘ಆಪ್ತಮಿತ್ರ’, ‘ಸಿಪಾಯಿ’ ಖ್ಯಾತಿಯ ನಟಿ ಸೌಂದರ್ಯ ತಮ್ಮ 32 ನೇ ವಯಸ್ಸಿನಲ್ಲಿ ಮೃತಪಟ್ಟಿದ್ದರು. ಅಪಘಾತಕ್ಕೆ ಕಾರಣ ಏನು ಎಂಬುದು ಸೇರಿದಂತೆ ಅವರ ಸಾವಿನ ಬಗ್ಗೆ ಇನ್ನೂ ಅನುಮಾನಗಳಿವೆ.
ಏತನ್ಮಧ್ಯೆ ತೆಲಂಗಾಣದಲ್ಲಿ ಯುವಕನೊಬ್ಬ ‘ನಟಿ ಸೌಂದರ್ಯ ಸಾವಿಗೆ ತೆಲುಗು ಹಿರಿಯ ನಟ ಮಂಚು ಮೋಹನ್ ಬಾಬು ಕಾರಣ’ ಎಂದು ಕಮ್ಮಂ ಜಿಲ್ಲೆಯಲ್ಲಿ ಪೊಲೀಸರಿಗೆ ಹಾಗೂ ಅಲ್ಲಿನ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಎಂದು ಹೇಳಲಾಗುತ್ತಿರುವ ಕಮ್ಮಂ ಗ್ರಾಮೀಣ ಪ್ರದೇಶದ ಚಿಟ್ಟಿಬಾಬು ಎಂಬ ವ್ಯಕ್ತಿ ಈ ದೂರು ನೀಡಿದ್ದಾರೆ. ಪೊಲೀಸರು ದೂರು ಸ್ವೀಕರಿಸಿದ್ದಾರೆ. ಆದರೆ, ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
‘ಶಂಶಾಬಾದ್ನ ಜಾಲಪಲ್ಲಿಯಲ್ಲಿ ನಟಿ ಸೌಂದರ್ಯಗೆ ಸೇರಿದ್ದ 6 ಎಕರೆಯಲ್ಲಿನ ಗೆಸ್ಟ್ ಹೌಸ್ ಮೇಲೆ ಮೋಹನ್ ಬಾಬು ಕಣ್ಣಿತ್ತು. ಗೆಸ್ಟ್ ಹೌಸ್ ಸೇರಿದಂತೆ ಆರು ಎಕರೆಯನ್ನು ಖರೀದಿಸಲು ಮೋಹನ್ ಬಾಬು ಪ್ರಯತ್ನಿಸಿದ್ದರು. ಇದಕ್ಕೆ ಸೌಂದರ್ಯ ಸಹೋದರ ಅಮರನಾಥ್ ಅವರ ವಿರೋಧ ಇದ್ದಿದ್ದರಿಂದ ಸೌಂದರ್ಯ ಆಸ್ತಿಯನ್ನು ಮಾರಲು ನಿರಾಕರಿಸಿದ್ದರು. ಹೀಗಾಗಿ ಸಂಚು ನಡೆಸಿ ಹತ್ಯೆ ಮಾಡಲಾಗಿದೆ‘ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
‘ಜಾಲಪಲ್ಲಿಯ ಗೆಸ್ಟ್ ಹೌಸ್ ಹಾಗೂ ಜಾಗವನ್ನು ಸರ್ಕಾರ ವಶಪಡಿಸಿಕೊಂಡು ಅಲ್ಲಿ ಅನಾಥರಿಗೆ, ನಿವೃತ್ತ ಸೈನಿಕರಿಗೆ ಮನೆಗಳನ್ನು ಕಟ್ಟಿಕೊಡಬೇಕು‘ ಎಂದು ಚಿಟ್ಟಿಬಾಬು ಮನವಿ ಮಾಡಿಕೊಂಡಿದ್ದಾರೆ.
‘ಮೋಹನ್ ಬಾಬು ಅವರಿಂದ ನನಗೆ ಜೀವ ಬೆದರಿಕೆ ಇದೆ. ಹಾಗಾಗಿ ನನಗೆ ಭದ್ರತೆ ಒದಗಿಸಬೇಕು ಮತ್ತು ಮೋಹನ್ ಬಾಬು ಅವರಿಂದ ಅವರ ಎರಡನೇ ಹೆಂಡತಿಯ ಮಗ ಮಂಚು ಮನೋಜ್ಗೆ ಸಾಕಷ್ಟು ಅನ್ಯಾಯವಾಗಿದೆ’ ಎಂದು ಆರೋಪಿಸಿದ್ದಾರೆ. ಈ ಕುರಿತು ಇಂಡಿಯಾ ಟುಡೇ ಹಾಗೂ ಎನ್ಡಿಟಿವಿ ವೆಬ್ಸೈಟ್ ವರದಿ ಮಾಡಿದೆ.
2004ರ ಏಪ್ರಿಲ್ 17 ರಂದು ಬೆಂಗಳೂರಿನ ಜಿಕೆವಿಕೆ ಬಳಿ ಲಘು ವಿಮಾನ ಅಪಘಾತ ನಡೆದಿತ್ತು. ಅಂದು ಆಂಧ್ರಪ್ರದೇಶದಲ್ಲಿ ನಡೆಯುತ್ತಿದ್ದ ಚುನಾವಣೆಯ ಪ್ರಯುಕ್ತ ಸೌಂದರ್ಯ ಹಾಗೂ ಅವರ ಸಹೋದರ ಅಮರನಾಥ್ ಅವರು ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಲು ಕರೀಂನಗರಕ್ಕೆ ತೆರಳುತ್ತಿದ್ದರು. ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತ ಸಂಭವಿಸಿ ವಿಮಾನ ಹೊತ್ತಿ ಉರಿದಿತ್ತು. ಪರಿಣಾಮ ಸೌಂದರ್ಯ, ಅಮರನಾಥ್ ಹಾಗೂ ಲಘು ವಿಮಾನದಲ್ಲಿದ್ದವರ ಮೃತದೇಹಗಳು ಗುರುತು ಸಿಗದಂತೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆ ಸಂದರ್ಭದಲ್ಲಿ ಸೌಂದರ್ಯ ಅವರು ಗರ್ಭಿಣಿಯಾಗಿದ್ದರು ಎನ್ನಲಾಗಿತ್ತು.
ಘಟನೆ ನಡೆದ ಸಂದರ್ಭದಲ್ಲಿಯೂ ಕನ್ನಡ ಮೂಲದ ನಟಿ ಸೌಂದರ್ಯ ಸಾವಿನ ಹಿಂದೆ ಆಸ್ತಿ ವಿಚಾರ, ವೃತ್ತಿ ವೈಷಮ್ಯ, ರಾಜಕೀಯ, ಆಕಸ್ಮಿಕ ಘಟನೆ, ‘ನಾಗವಲ್ಲಿ’ ಕಾಟ ಎಂಬುದಾಗಿ ನಾನಾ ಬಗೆಯಲ್ಲಿ ಚರ್ಚೆಯಾಗಿತ್ತು. ತನಿಖೆ ನಡೆದರೂ ಅಪಘಾತಕ್ಕೆ ನಿಖರ ಕಾರಣವೇನು? ಎಂಬುದು ಸ್ಪಷ್ಟವಾಗಲಿಲ್ಲ. ಸೌಂದರ್ಯ ಸಾವು ಇಂದಿಗೂ ನಿಗೂಢವಾಗಿದೆ.
ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ಅನೇಕ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದ ಸೌಂದರ್ಯ ಅವರ ಸಾವು ಇಡೀ ಭಾರತೀಯ ಚಿತ್ರರಂಗಕ್ಕೆ ಬಹುದೊಡ್ಡ ಆಘಾತ ನೀಡಿತ್ತು. ಆಪ್ತಮಿತ್ರ ಚಿತ್ರದಲ್ಲಿನ ಅವರ ‘ನಾಗವಲ್ಲಿ’ ಪಾತ್ರ ಜನಮನ ಸೆಳೆದಿತ್ತು.
ಇನ್ನು, 78 ವರ್ಷದ ನಟ ಮೋಹನ್ ಬಾಬು ಅವರು ಟಾಲಿವುಡ್ನ ಪ್ರಭಾವಿಗಳಲ್ಲಿ ಒಬ್ಬರು. ಅಷ್ಟೇ ಅಲ್ಲದೇ ರಾಜಕೀಯದಲ್ಲಿಯೂ ಗುರುತಿಸಿಕೊಂಡು ಒಂದು ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು. ವೈಎಸ್ಆರ್ಸಿಪಿ ನಂತರ ಟಿಡಿಪಿಯಲ್ಲಿ ಗುರುತಿಸಿಕೊಂಡಿದ್ದರು.
ಇತ್ತೀಚೆಗೆ ಮೋಹನ್ ಬಾಬು ಕುಟುಂಬದಲ್ಲಿ ಬಿರುಗಾಳಿ ಎದ್ದಿದೆ. ಎರಡನೇ ಹೆಂಡತಿಯ ಮಗ ಮಂಚು ಮನೋಜ್ ಅವರು ಆಸ್ತಿ ವಿಚಾರವಾಗಿ ತಂದೆಯ ಜೊತೆ ತಕರಾರು ತೆಗೆದಿದ್ದಾರೆ. ಇದೇ ವಿಚಾರವಾಗಿ ಮನೆ ಬಳಿ ಕ್ಯಾಮೆರಾ ತೆಗೆದುಕೊಂಡು ಹೋಗಿದ್ದ ಸುದ್ದಿವಾಹಿನಿಯ ವರದಿಗಾರರು ಹಾಗೂ ಕ್ಯಾಮೆರಾಮೆನ್ಗಳ ಮೇಲೆ ಮೋಹನ್ ಬಾಬು ಹಲ್ಲೆ ಮಾಡಿದ್ದು ವರದಿಯಾಗಿತ್ತು.
ಸದ್ಯ ಸೌಂದರ್ಯ ವಿಚಾರವಾಗಿ ಬಂದಿರುವ ಆರೋಪಗಳಿಗೆ ಮೋಹನ್ ಬಾಬು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರು ತಮ್ಮ ಮೊದಲ ಹೆಂಡತಿಯ ಮಗ, ನಟ ಮಂಚು ವಿಷ್ಣು ನಿರ್ಮಿಸುತ್ತಿರುವ ‘ಕಣ್ಣಪ್ಪ’ ಎಂಬ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಇನ್ನೊಂದೆಡೆ ಸೌಂದರ್ಯ ಅವರ ಪತಿ ರಘು ಜಿಎಸ್ ಎನ್ನುವರು ಮೋಹನ್ ಬಾಬು ಅವರ ವಿರುದ್ಧ ಬಂದಿರುವ ಆರೋಪಗಳು ಆಧಾರ ರಹಿತ. ನಮಗೂ ಹಾಗೂ ಮೋಹನ್ ಬಾಬು ಅವರಿಗೆ ಉತ್ತಮ ಸಂಬಂಧ ಇದೆ ಎಂದು ಹೇಳಿ ಹಾಳೆಯಲ್ಲಿ ಬರೆದಿರುವ ನೋಟ್ ಒಂದು ಎಕ್ಸ್ ಹಾಗೂ ಫೇಸ್ಬುಕ್ನಲ್ಲಿ ಹರಿದಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.