ADVERTISEMENT

ಬಚ್ಚನ್, ಚಿರಂಜೀವಿ, ಎನ್‌ಟಿಆರ್‌, ಯಶ್‌ ಬಗ್ಗೆ ನಟಿ ಪೂಜಾ ಹೆಗ್ಡೆ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಅಕ್ಟೋಬರ್ 2021, 8:09 IST
Last Updated 19 ಅಕ್ಟೋಬರ್ 2021, 8:09 IST
ಪೂಜಾ ಹೆಗ್ಡೆ
ಪೂಜಾ ಹೆಗ್ಡೆ   

ಹೈದರಾಬಾದ್: ಬಾಲಿವುಡ್‌ ನಟ ಅಮಿತಾಭ್ ಬಚ್ಚನ್, ತೆಲುಗು ನಟರಾದ ಚಿರಂಜೀವಿ, ಜ್ಯೂನಿಯರ್ ಎನ್‌ಟಿಆರ್, ಕನ್ನಡ ಚಿತ್ರನಟ ಯಶ್‌ ಅವರ ಬಗ್ಗೆ ಬಹುಭಾಷಾ ನಟಿ ಪೂಜಾ ಹೆಗ್ಡೆ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಅಖಿಲ್‌ ಅಕ್ಕಿನೇನಿ -ಪೂಜಾ ಹೆಗ್ಡೆ ಅಭಿನಯದ ‘ಮೋಸ್ಟ್ ಎಲಿಜಿಬಲ್ ಬ್ಯಾಚುಲರ್’ ಚಿತ್ರ ಅ.15ರಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದರ ನಡುವೆ ಪೂಜಾ ಹೆಗ್ಡೆ ತಮ್ಮ ಟ್ವಿಟರ್‌ ಖಾತೆಯಲ್ಲಿ ‘ಸ್ವಲ್ಪ ಸಮಯವಿದೆ ಏನಾದರೂ ಕೇಳಿ’ ಎಂದು ಪೋಸ್ಟ್‌ವೊಂದನ್ನು ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಪೂಜಾ ಉತ್ತರಿಸಿದ್ದಾರೆ.

ADVERTISEMENT

ನಿಮ್ಮ ನೆಚ್ಚಿನ ನಟ ಯಾರು? ಎಂಬ ಪ್ರಶ್ನೆಗೆ ಉತ್ತರಿಸಿರುವ ಪೂಜಾ, ‘ನನ್ನ ನೆಚ್ಚಿನ ನಟ ಅಮಿತಾಭ್ ಬಚ್ಚನ್‌, ಅವರೊಂದಿಗೆ ಅಭಿನಯಿಸುವ ಆಸೆ ಒಂದು ದಿನ ನಿಜವಾಗುತ್ತದೆ ಎಂದು ಬಯಸಿದ್ದೇನೆ’ ಎಂದಿದ್ದಾರೆ.

ತೆಲುಗು ಮೆಗಾಸ್ಟಾರ್‌ ಚಿರಂಜೀವಿ ಅವರೊಂದಿಗೆ ಅಭಿನಯಿಸಿದ ಅನುಭವವನ್ನು ಹಂಚಿಕೊಳ್ಳುವಂತೆ ಕೇಳಿದ ಪ್ರಶ್ನೆಗೆ, ‘ಮೋಸ್ಟ್ ಎಲಿಜಿಬಲ್ ಬ್ಯಾಚಲರ್’ ಚಿತ್ರದಲ್ಲಿ ನನ್ನ ಅಭಿನಯವನ್ನು ಗುರುತಿಸಿರುವ ಚಿರಂಜೀವಿ ಅವರು ಸಂದೇಶ ಕಳುಹಿಸುವ ಮೂಲಕ ಶುಭ ಹಾರೈಸಿದ್ದರು. ಇದು ನನಗೆ ಸ್ಫೂರ್ತಿ ನೀಡುತ್ತದೆ’ ಎಂದು ಪೂಜಾ ಉತ್ತರಿಸಿದ್ದಾರೆ.

ಜ್ಯೂ. ಎನ್‌ಟಿಆರ್‌ ಬಗ್ಗೆ ಒಂದು ಪದದಲ್ಲಿ ಉತ್ತರಿಸುವಂತೆ ಕೇಳಿದ ಪ್ರಶ್ನೆಗೆ ‘ರಿಯಲ್‌’ (ನೈಜ) ಎಂದು ಪೂಜಾ ಹೇಳಿದ್ದಾರೆ.

ನಟ ಯಶ್‌ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪೂಜಾ, ‘ಕೆಜಿಎಫ್‌’ ಚಿತ್ರದ ಮೂಲಕ ಯಶ್‌ ಅವರು ಕನ್ನಡ ಚಿತ್ರರಂಗ ಹೆಮ್ಮೆಪಡುವಂತೆ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಉಡುಪಿ ಮೂಲದ ಪೂಜಾ ಹೆಗ್ಡೆ 1990 ಅಕ್ಟೋಬರ್ 13 ರಂದು ಮುಂಬೈನಲ್ಲಿ ಜನಿಸಿದ್ದು, 2012ರಲ್ಲಿ ‘ಮುಗಮುದಿ’ ತಮಿಳು ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು. ಹಿಂದಿಯಲ್ಲಿ ‘ಮೆಹಂಜೊದಾರೋ’, ‘ಹೌಸ್‌ಫುಲ್ 4’ ಚಿತ್ರಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದಾರೆ. ಇಲ್ಲಿವರೆಗೆ 12 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಸದ್ಯ ಪೂಜಾ ಅವರು ತೆಲುಗಿನಲ್ಲಿ ‘ರಾಧೆ ಶ್ಯಾಮ್‌’, ‘ಆಚಾರ್ಯ', ಹಿಂದಿಯಲ್ಲಿ ‘ಸರ್ಕಸ್’ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.