
ನಿರೂಪಕಿ ಅನುಶ್ರೀ
ಚಿತ್ರ: ಇನ್ಸ್ಟಾಗ್ರಾಂ
ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಅವರು ಜೀ ಕನ್ನಡ ವೇದಿಕೆ ಮೇಲೆ ಜೀವನದ ಕಷ್ಟದ ದಿನಗಳ ಬಗ್ಗೆ ಹೇಳಿ ಕಣ್ಣೀರಿಟ್ಟಿದ್ದಾರೆ. ‘ಬಾತ್ರೂಂ ನೀರು ನಮ್ಮ ಮನೆ ಒಳಗೆ ಬರುತ್ತಿತ್ತು. ಆಗ ನಮ್ಮ ತಾಯಿಯನ್ನು ಅದರಿಂದ ಹೊರಗೆ ಕರೆದುಕೊಂಡು ಬರುವುದೇ ನನ್ನ ಉದ್ದೇಶವಾಗಿತ್ತು’ ಎಂದು ಭಾವುಕರಾಗಿ ಮಾತನಾಡಿದ್ದಾರೆ.
ಇತ್ತೀಚೆಗೆ ಕನ್ನಡದ ನಟಿ, ನಿರೂಪಕಿ ಅನುಶ್ರೀ ಅವರು ಈಗ ನಿರೂಪಣೆಯ ಹಾದಿಯಲ್ಲಿ ಬರೋಬ್ಬರಿ 20 ವರ್ಷಗಳ ಸಾರ್ಥಕ ಪಯಣವನ್ನು ಪೂರೈಸಿದ್ದರು. ಹೀಗಾಗಿ ಅಭಿಮಾನಿಗಳು, ಸ್ನೇಹಿತರು, ಸಿನಿ ತಾರೆಯರು ಅನುಶ್ರೀಗೆ ಹಾರೈಸಿದ್ದರು.
ಇದೇ ವೇಳೆ ನಿರೂಪಕ ನಿರಂಜನ್ ದೇಶಪಾಂಡೆ ಅವರು ಅನುಶ್ರೀಗೆ ಮಂಗಳೂರನ್ನು ಬಿಟ್ಟು ಬೆಂಗಳೂರಿಗೆ ಬರೋವಾಗ ಏನನ್ನು ಅಂದುಕೊಂಡು ಬಂದಿದ್ದೀರಿ? ಇಂದು ಏನನ್ನು ಪಡೆದುಕೊಂಡಿದ್ದೀರಿ ಅಂತ ಅನಿಸುತ್ತದೆ ಎಂದು ಪ್ರಶ್ನೆಯೊಂದನ್ನು ಕೇಳಿದ್ದರು. ಆಗ ಅದಕ್ಕೆ ಉತ್ತರಿಸಿದ ಅನುಶ್ರೀ, ‘ನಮ್ಮ ಮನೆಯಲ್ಲಿ ಮಳೆ ಬಂದರೆ ಕೆಸರು ಬರುತ್ತಿತ್ತು. ಗುಡ್ಡಗಾಡು ಪ್ರದೇಶದಲ್ಲಿ ನಮ್ಮ ಮನೆ ಇತ್ತು. ಮಳೆ ಬಂದಾಗೆಲ್ಲಾ ಶೌಚಾಲಯದ ನೀರು ನಮ್ಮ ಮನೆ ಒಳಗಡೆ ಬರುತ್ತಿತ್ತು. ಅಲ್ಲಿಂದ ನಮ್ಮ ತಾಯಿಯನ್ನು ಹೊರಗೆ ಕರೆದುಕೊಂಡು ಬರಬೇಕು ಅನ್ನೋದು ಮಾತ್ರ ನನ್ನ ಉದ್ದೇಶವಾಗಿತ್ತು’ ಎಂದರು.
‘ನನಗೆ ಮಂಗಳೂರು ಭಾಷೆ ಬರುತ್ತಿತ್ತು. ಆದರೆ ಬೆಂಗಳೂರು ಭಾಷೆ ಬರುತ್ತಿರಲಿಲ್ಲ. ಬೆಂಗಳೂರು ಭಾಷೆಗೂ, ಮಂಗಳೂರು ಭಾಷೆಗೂ ವ್ಯತ್ಯಾಸ ಇದೆ. ನನಗೆ ಭಾಷೆ ಕಲಿಯೋದು ಸುಲಭ ಇರಲಿಲ್ಲ. ನನಗೆ ಭಾಷೆ ಬರೋದಿಲ್ಲ ಅಂತ ಕೆಲಸ ಕೊಡದೆ ಇದ್ದಾಗ ಕನ್ನಡ ಕಲಿಸಿಕೊಟ್ಟ ಶ್ರೀಕಾಂತ್, ಸುಕುಮಾರ್ ಸರ್ ನಿಮಗೆ ಧನ್ಯವಾದಗಳು’ ಎಂದಿದ್ದಾರೆ.
‘ನಾನು ನಟ– ನಟಿಯರಿಗೆ ನಟಿಯರಿಗೆ ಬಕೆಟ್ ಹಿಡಿಯುತ್ತೇನೆ ಎಂದೂ ಹೇಳುತ್ತಾರೆ. ಇವಳಿಗೆ ಬೇರೆ ಜೀ ಚಾನೆಲ್ ಬಿಟ್ಟರೆ ಗತಿಯಿಲ್ಲ. ನನ್ನ ನಗು, ನನ್ನ ಅಳು, ನನ್ನ ಸಾವು ವೇದಿಕೆ ಮೇಲೆ ಆಗಬೇಕು. ನಮಗೆ ನಮ್ಮ ಕನ್ನಡ ಕಲಾವಿದರ ಮೇಲೆ ಅಭಿಮಾನ ಇದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.