
ನಟಿ ವಿಜಯಲಕ್ಷ್ಮೀ ಸುಬ್ರಮಣಿ
ಚಿತ್ರ: ಇನ್ಸ್ಟಾಗ್ರಾಂ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಿಂದ ನಟಿ ವಿಜಯಲಕ್ಷ್ಮೀ ಸುಬ್ರಮಣಿ ಆಚೆ ಬಂದಿದ್ದಾರೆ. ಅಲ್ಲದೇ ಲಕ್ಷ್ಮೀ ನಿವಾಸ ಧಾರಾವಾಹಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ನಟಿ ವಿಜಯಲಕ್ಷ್ಮೀ ಸುಬ್ರಮಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ವಿಜಯಲಕ್ಷ್ಮೀ ಸುಬ್ರಮಣಿ ಅವರು ವಿಶ್ವನ ತಾಯಿ ಲಲಿತಾ ಪಾತ್ರದಲ್ಲಿ ನಟಿಸುತ್ತಿದ್ದರು. ಇದೀಗ ದಿಢೀರನೆ ಲಲಿತಾ ಪಾತ್ರವನ್ನು ಸಾಯಿಸಿರೋದಕ್ಕೆ ನಟಿ ವಿಜಯಲಕ್ಷ್ಮೀ ಸುಬ್ರಮಣಿ ಕಿಡಿ ಕಾರಿದ್ದಾರೆ. ನಟಿ ವಿಜಯಲಕ್ಷ್ಮೀ ಸುಬ್ರಮಣಿ ಅವರು ಬರೋದಕ್ಕೆ ಮುಂಚೆ ಅಂಜಲಿ ಸುಧಾಕರ್ ದಿಢೀರನೆ ವಿದಾಯ ಹೇಳಿದ್ದರು.
ಆ ಸಂದರ್ಭದಲ್ಲಿ ನಟಿ ವಿಜಯಲಕ್ಷ್ಮೀ ಸುಬ್ರಮಣಿ, ‘ಗೆಳತಿ ಅಂಜಲಿ ಇಂದು ನೀನು ಹೊರಗೆ ಬಂದಿರುವೆ ಅತೀ ಶೀಘ್ರದಲ್ಲಿ ನಾನೂ ಕೂಡ ಈ ಧಾರಾವಾಹಿಯಿಂದ ಹೊರ ಬರುವೆ’ ಎಂದು ಸಾಮಾಜಿಕ ಮಧ್ಯಮದಲ್ಲಿ ಬರೆದುಕೊಂಡಿದ್ದರು. ಆ ಬೆನ್ನಲ್ಲೇ ಈಗ ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ವಿಜಯಲಕ್ಷ್ಮೀ ಸುಬ್ರಮಣಿ ಆಚೆಬಂದಿದ್ದಾರೆ.
ಈ ಬಗ್ಗೆ ಖುದ್ದು ವಿಜಯಲಕ್ಷ್ಮೀ ಸುಬ್ರಮಣಿ ಅವರೇ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ. ‘ಇದು ಎಷ್ಟು ಸರಿ? ಒಂದು ಒಳ್ಳೆ ಪಾತ್ರವನ್ನ ಸುಖಾಸುಮ್ಮನೆ ಸಾಯಿಸೋದು? ಈ ಧಾರಾವಾಹಿಗೆ ಕಥೆ ಮಾಡುವವರ ಪಾಂಡಿತ್ಯ ನಿಪುಣತೆಗೆ ಕನ್ನಡಿ ಹಿಡಿದಿದೆ. ತಮ್ಮೊಂದಿಗೆ ಯಾವುದೇ ಚರ್ಚೆ ಮಾಡದೆ, ಒಂದು ಮಾತನ್ನೂ ಹೇಳದೆ ಪಾತ್ರವನ್ನೇ ಸಾಯಿಸುತ್ತಿದ್ದಾರೆ’ ಎಂದು ಕಿಡಿ ಹಾರಿದ್ದಾರೆ.
ಜೊತೆಗೆ ಕೊನೆ ದಿನದ ಚಿತ್ರೀಕರಣದ ಬಗ್ಗೆ ‘ಮಾವನ ಜೊತೆ ಲಲಿತಾಳ ಕೊನೆಯ ಮಾತುಗಳು. ಎಷ್ಟು ಆಶ್ಚರ್ಯ ಅಂದರೆ ಲಕ್ಷ್ಮೀ ನಿವಾಸ ಧಾರಾವಾಹಿಯ ಮೊದಲ ದಿನದ ಸೀನ್ನಲ್ಲಿ ಇದೇ ಸೀರೆ ಉಟ್ಟಿದ್ದೆ. ಕೊನೆಯ ಸೀನ್ನಲ್ಲೂ ಅದೇ ಸೀರೆ. ಈ ಸೀರಿಯಲ್ನ ಕಥಾಬ್ರಹ್ಮರು ನನಗೆ ತಿಳಿಸದೇ ಮಾಡಿದ ಷಡ್ಯಂತ್ರಕ್ಕೆ ನನ್ನ ಈ ಹಸಿರು ಸೀರೆ ನಗಬೇಕೋ, ಅಳಬೇಕೋ ತಿಳಿಯದೇ ಸೂಟ್ ಕೇಸ್ನಲ್ಲಿ ಕೂತಿದೆ’ ಎಂದು ಬಹಿರಂಗವಾಗಿ ಬರೆದುಕೊಂಡು ಪೋಸ್ಟ್ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.