
ಅಯ್ಯಪ್ಪ ಸ್ವಾಮಿ ಪ್ರಸಾದ ಅರವಣ ಪಾಯಸಂ
ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಶಬರಿಮಲೆ ಒಂದು. ಕೇರಳದಲ್ಲಿರುವ ಅಯ್ಯಪ್ಪಸ್ವಾಮಿ ದೇವಾಸ್ಥಾನಕ್ಕೆ ಮಾಲೆ ಧರಿಸಿ ಲಕ್ಷಾಂತರ ಭಕ್ತರು ಶಬರಿಮಲೆಗೆ ಭೇಟಿ ನೀಡುತ್ತಾರೆ. ಕೇರಳದ ಪ್ರಸಿದ್ಧ ದೇವಸ್ಥಾನಗಳಲ್ಲಿ ವಿಶೇಷವಾಗಿ ಶಬರಿಮಲೆ ದೇಗುಲದಲ್ಲಿ ಅರ್ಪಿಸುವ ಒಂದು ವಿಶೇಷ ಸಿಹಿ ಖಾದ್ಯ ಎಂದರೆ ಅದು ಅರವಣ ಪಾಯಸಂ.
ಅರವಣ ಪಾಯಸಂ ಅನ್ನು ಮುಖ್ಯವಾಗಿ ಅಕ್ಕಿ, ಬೆಲ್ಲ ಮತ್ತು ತುಪ್ಪವನ್ನು ಬಳಸಿ ತಯಾರಿಸಲಾಗುತ್ತದೆ. ಇದು ದೀರ್ಘಕಾಲ ಬಾಳಿಕೆಗೆ ಬರುವ ಮತ್ತು ಆರೋಗ್ಯಕರ ಪ್ರಸಾದವಾಗಿದೆ. ಇನ್ನು ಈ ಅರವಣ ಪಾಯಸಂ ಅನ್ನು ಮನೆಯಲ್ಲೇ ಸುಲಭವಾಗಿ ಮಾಡುವುದು ಹೇಗೆ ಎಂದು ತಿಳಿಯೋಣ.
ಅಯ್ಯಪ್ಪ ಸ್ವಾಮಿ ಪ್ರಸಾದ ಅರವಣ ಪಾಯಸಂ
ಅರವಣ ಪಾಯಸಂಗೆ ಬೇಕಾಗಿರುವ ಸಾಮಾಗ್ರಿಗಳು:
ಕೆಂಪು ಅಕ್ಕಿ, ಗಾಢ ಬಣ್ಣದ ಬೆಲ್ಲ, ತುಪ್ಪ, ಏಲಕ್ಕಿ ಪುಡಿ, ಒಣ ಶುಂಠಿ ಪುಡಿ, ಕಪ್ಪು ದ್ರಾಕ್ಷಿ, ತೆಂಗಿನಕಾಯಿ ತುಂಡುಗಳು ಮತ್ತು ಗೋಡಂಬಿ.
ಮಾಡುವ ವಿಧಾನ:
ಮೊದಲು ಕೆಂಪು ಅಕ್ಕಿಯನ್ನು ನೀರಿನಲ್ಲಿ ತೊಳೆದಿಟ್ಟುಕೊಳ್ಳಿ. ಬಳಿಕ ಒಂದು ಪಾತ್ರೆಗೆ ತುಪ್ಪವನ್ನು ಹಾಕಿ ಬಿಸಿ ಮಾಡಿ. ಅದಕ್ಕೆ ತೊಳೆದಿಟ್ಟುಕೊಂಡ ಕೆಂಪು ಅಕ್ಕಿಯನ್ನು ಹಾಕಿ ತುಪ್ಪದಲ್ಲಿ ಹುರಿಯಿರಿ. ನಂತರ ಒಂದು ಕಪ್ ಕೆಂಪು ಅಕ್ಕಿಗೆ, ಒಂದು ಕಪ್ ನೀರನ್ನು ಹಾಕಿ ಚೆನ್ನಾಗಿ ಕುದಿಸಿ ಅಕ್ಕಿ ಮೃದುವಾಗಲು ಬಿಡಿ. ಇದಾದ ಬಳಿಕ ಇನ್ನೊಂದು ಪಾತ್ರೆಯಲ್ಲಿ ತುಪ್ಪ ಹಾಕಿ ಅದಕ್ಕೆ ತೆಂಗಿನಕಾಯಿ ತುಂಡುಗಳನ್ನು ಹಾಕಿ ಕೆಂಪು ಬಣ್ಣಕ್ಕೆ ತಿರುಗುವವರೆಗೂ ಹುರಿಯಿರಿ.
ನಂತರ ಅದೇ ಬಾಣಲೆಯಲ್ಲಿ ಗೊಂಡಂಬಿ, ಕಪ್ಪು ದ್ರಾಕ್ಷಿ ಹುರಿದಿಟ್ಟುಕೊಳ್ಳಿ. ನಂತರ ಮತ್ತೊಂದು ಪಾತ್ರೆಗೆ ನೀರು ಹಾಕಿ ಪುಡಿ ಮಾಡಿಕೊಂಡ ಗಾಢ ಬಣ್ಣದ ಬೆಲ್ಲವನ್ನು ಹಾಕಿ. ಬೆಲ್ಲ ಅಂಟು ಬಂದ ಕೂಡಲೇ ಅದಕ್ಕೆ ತುಪ್ಪದಲ್ಲಿ ಹುರಿದು ಇಟ್ಟುಕೊಂಡ ಅಕ್ಕಿಯನ್ನು ಹಾಕಿ ಮಿಶ್ರಣ ಮಾಡಿ. ನಂತರ ಅದರ ಮೇಲೆ ಎರಡು ಚಮಚ ತುಪ್ಪ, ಏಲಕ್ಕಿ ಪುಡಿ, ಒಣ ಶುಂಠಿ ಪುಡಿ ಹಾಕಿ 15ರಿಂದ 25 ನಿಮಿಷದವರೆಗೆ ಕುದಿಸಿ. ಬಳಿಕ ಅದರ ಮೇಲೆ ಹುರಿದಿಟ್ಟುಕೊಂಡ ಗೊಂಡಂಬಿ, ಕಪ್ಪು ದ್ರಾಕ್ಷಿಯನ್ನು ಹಾಕಿ ಮತ್ತೆ ಕುದಿಸಿ. ಈಗ ಅರವಣ ಪಾಯಸಂ ಸವಿಯಲು ಸಿದ್ಧ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.