ADVERTISEMENT

ಋತುಚಕ್ರದ ಬಳಿಕ ಹೃದಯದ ಆರೋಗ್ಯಕ್ಕೆ ಆದ್ಯತೆ ಹೆಚ್ಚಿಸಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಫೆಬ್ರುವರಿ 2026, 9:27 IST
Last Updated 27 ಫೆಬ್ರುವರಿ 2026, 9:27 IST
<div class="paragraphs"><p>ಚಿತ್ರ ಕೃಪೆ: ಗೆಟ್ಟಿ ಚಿತ್ರ</p></div>
   

ಚಿತ್ರ ಕೃಪೆ: ಗೆಟ್ಟಿ ಚಿತ್ರ

ಋತುಚಕ್ರವು ಮಹಿಳೆಯರ ಜೀವನದಲ್ಲಿ ನಡೆಯುವ ನೈಸರ್ಗಿಕ ಬದಲಾವಣೆ. ಆದರೆ ಹೃದ್ರೋಗ ತಜ್ಞರು ಈ ಹಂತವನ್ನು ಹೃದಯ ಆರೋಗ್ಯದಲ್ಲಿ ಬಹುಮುಖ್ಯ ತಿರುವು ಎನ್ನುತ್ತಾರೆ. ಋತುಬಂಧಕ್ಕೂ ಮುನ್ನ ಈಸ್ಟ್ರೋಜನ್ ಎಂಬ ಹಾರ್ಮೋನ್‌ ಆರೋಗ್ಯಕರ ರಕ್ತನಾಳಗಳು ಹಾಗೂ ಉತ್ತಮವಾದ ಕೊಲೆಸ್ಟ್ರಾಲ್‌ ಮಟ್ಟವನ್ನು ಕಾಯ್ದುಕೊಳ್ಳುವ ಮೂಲಕ ಕಾರ್ಡಿಯೋವಾಸ್ಕ್ಯೂಲರ್ ವ್ಯವಸ್ಥೆಗೆ ರಕ್ಷಣೆ ನೀಡುತ್ತದೆ.

ಋತುಬಂಧದ ಬಳಿಕ ಈಸ್ಟ್ರೋಜನ್‌ ಮಟ್ಟ ಕಡಿಮೆಯಾಗುತ್ತದೆ. ಇದರಿಂದ ಒಂದು ರಕ್ಷಣಾ ವ್ಯವಸ್ಥೆಯ ಪರಿಣಾಮವೂ ಕಡಿಮೆಯಾಗುತ್ತದೆ. ಹೀಗಾಗಿ ಸಾಕಷ್ಟು ಮಹಿಳೆಯರಲ್ಲಿ ಋತುಬಂಧದ ಬಳಿಕ ಎಲ್‌ಡಿಎಲ್‌ ಕೆಟ್ಟ ಕೊಲೆಸ್ಟ್ರೊಲ್‌ ಏರಿಕೆ, ರಕ್ತದೊತ್ತಡ, ತೂಕ ಹೆಚ್ಚಳ, ಇನ್ಸುಲಿನ್‌ ಪ್ರತಿರೋಧ ಕೂಡ ಹೆಚ್ಚುತ್ತದೆ. ಇವೆಲ್ಲವೂ ಸೇರಿ ಹೃದಯ ಸಮಸ್ಯೆಯ ಅಪಾಯವನ್ನು ಹೆಚ್ಚಿಸುತ್ತವೆ.

ADVERTISEMENT

ಬಹುಮುಖ್ಯವಾಗಿ, ಪುರುಷರಲ್ಲಿ ಕಂಡುಬರುವಂತಹ ಹೃದಯ ಸಮಸ್ಯೆಯ ಸಾಮಾನ್ಯ ಲಕ್ಷಣಗಳು ಮಹಿಳೆಯರಲ್ಲಿ ಕಂಡುಬರದೇ ಇರಬಹುದು. ಹೀಗಾಗಿ ಮಹಿಳೆಯರಲ್ಲಿ ಋತುಬಂಧದ ಬಳಿಕ ಹೃದಯ ಸಮಸ್ಯೆಗಳು ಗಮನಕ್ಕೆ ಬಾರದೇ ಹೋಗುತ್ತವೆ. ಎದೆ ನೋವು ಕಾಣಿಸಿಕೊಳ್ಳಬಹುದು ಆದರೆ ಸಾಮಾನ್ಯವಾಗಿ ಮಹಿಳೆಯರಲ್ಲಿ ಲಕ್ಷಣಗಳು ಸೌಮ್ಯವಾಗಿರುತ್ತವೆ. ಅಸಾಮಾನ್ಯ ಸುಸ್ತು, ಉಸಿರುಗಟ್ಟುವುದು, ವಾಕರಿಕೆ, ಬೆನ್ನು ಮತ್ತು ದವಡೆಯಲ್ಲಿ ಅಸಹಜತೆ, ತಲೆತಿರುಗುವಿಕೆ, ತೀಕ್ಷ್ಣ ನೋವಿನ ಬದಲು ಒತ್ತಡದ ಅನುಭವ ಕಾಣಿಸುತ್ತದೆ. ಈ ಅಸಾಮಾನ್ಯ ಲಕ್ಷಣಗಳೇ ಚಿಕಿತ್ಸೆ ತಡವಾಗಲು ಕಾರಣವಾಗುತ್ತವೆ. ಹೀಗಾಗಿ ಈ ಬಗ್ಗೆ ಅರಿವು ಮುಖ್ಯ.

ಪದೇ ಪದೇ ಕಂಡುಬರುತ್ತಿರುವ ಯಾವುದೇ ಲಕ್ಷಣಗಳು ಅಥವಾ ಕಾರಣವಿಲ್ಲದೇ ಕಂಡುಬರುತ್ತಿರುವ ಸಮಸ್ಯೆಗಳಿಗೆ ತಕ್ಷಣದ ವೈದ್ಯಕೀಯ ತಪಾಸಣೆ ಅತ್ಯಗತ್ಯ. ಅದರಲ್ಲೂ ಕುಟುಂಬದಲ್ಲಿ ಹೃದಯ ಸಮಸ್ಯೆ ಅಥವಾ ಡಯಾಬಿಟಿಸ್‌, ಹೈಪರ್‍ಟೆನ್ಷನ್‌ ಸಮಸ್ಯೆ ಇರುವವರಲ್ಲಿ ಹೃದಯ ಸಮಸ್ಯೆಯ ಅಪಾಯ ಅಧಿಕವಾಗಿರುತ್ತದೆ.

ಬೆಲ್ಲ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸುಸ್ತು, ನಿಶ್ಯಕ್ತಿಯನ್ನು ನಿವಾರಿಸುತ್ತದೆ. 

ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ಸರಳವಾದ ಹಾಗೂ ನಿರಂತರ ದೈನಂದಿನ ಅಭ್ಯಾಸಗಳು ದೀರ್ಘಕಾಲದ ಪರಿಣಾಮಗಳನ್ನು ತಡೆಯಲು ಸಹಾಯ ಮಾಡುತ್ತವೆ. ನಿತ್ಯ ದೈಹಿಕ ಚಟುವಟಿಕೆಗಳು, ನಿತ್ಯ 30 ನಿಮಿಷಗಳ ವೇಗದ ನಡಿಗೆ ರಕ್ತದೊತ್ತಡವನ್ನು ಉತ್ತಮವಾಗಿಸಲು, ತೂಕ ನಿಯಂತ್ರಿಸಲು, ಜೀರ್ಣಕ್ರಿಯೆ ಆರೋಗ್ಯವಾಗಿಡಲು ನೆರವಾಗುತ್ತವೆ. ಹಣ್ಣು, ತರಕಾರಿ, ಧಾನ್ಯಗಳು, ಪ್ರೊಟೀನ್‌ಯುಕ್ತ ಆಹಾರ ಸೇವನೆ ಉತ್ತಮ. ಸಂಸ್ಕರಿಸಿದ ಆಹಾರ ಸೇವನೆ, ಅತಿಯಾದ ಸಕ್ಕರೆ ಮತ್ತು ಅತಿಯಾಗಿ ಉಪ್ಪಿನ ಬಳಕೆಯನ್ನು ತಗ್ಗಿಸುವುದರಿಂದ ವಾಸ್ಕ್ಯೂಲರ್ ಆರೋಗ್ಯ ಉತ್ತಮವಾಗಿಸಬಹುದು.

ಸೂಕ್ತ ನಿದ್ರೆ, ಒತ್ತಡ ನಿರ್ವಹಣೆ ಅಗತ್ಯ ಹಾಗೇ ತಂಬಾಕು ಬಳಕೆ ಸಂಪೂರ್ಣ ತ್ಯಜಿಸುವುದು ಬಹಳ ಮುಖ್ಯ. ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಹಾಗೂ ಕೊಲೆಸ್ಟ್ರಾಲ್‌ ನಿಯಮಿತ ತಪಾಸಣೆ ಕೂಡ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಅಗತ್ಯ, ಋತುಬಂಧದ ಕುರಿತು ಭಯ ಪಡುವುದು ಬೇಡ, ಆದರೆ ಎಲ್ಲಾ ಬದಲಾವಣೆಗಳ ಬಗ್ಗೆ ಗಮನವಿರಲಿ. ಈ ಹಂತದಲ್ಲಿ ಹೃದಯದ ಆರೋಗ್ಯ ಬಗ್ಗೆ ಗಮನ ಕೊಡುವುದು ಅತ್ಯಗತ್ಯ.

(ಲೇಖಕರು: ಡಾ ನರಸಿಂಹ ಪೈ, ಹೆಚ್‌ಒಡಿ ಮತ್ತು ಕನ್ಸಲ್ಟೆಂಟ್‌ ಕಾರ್ಡಿಯಾಲಾಜಿಸ್ಟ್‌ , ಕೆಎಂಸಿ ಆಸ್ಪತ್ರೆ ಮಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.