ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ನವದೆಹಲಿ: ಅಹಮದಾಬಾದ್ ವಿಮಾನ ದುರಂತದ ತನಿಖೆಗೆ ಕೇಂದ್ರ ಸರ್ಕಾರವು ಗೃಹ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ದುರ್ಘಟನೆಯ ‘ಮೂಲ ಕಾರಣ’ವನ್ನು ಪತ್ತೆ ಹಚ್ಚುವ ಜೊತೆಗೆ ಭವಿಷ್ಯದಲ್ಲಿ ಇಂಥ ಘಟನೆಗಳನ್ನು ಎದುರಿಸಲು ಸಮಗ್ರ ಮಾರ್ಗಸೂಚಿಗಳನ್ನು ಸೂಚಿಸಿ ಎಂದು ನಿರ್ದೇಶಿಸಿದೆ.
ವರದಿ ಸಲ್ಲಿಕೆಗೆ ಮೂರು ತಿಂಗಳ ಕಾಲಾವಾಕಾಶ ನೀಡಲಾಗಿದ್ದು, ವಿಮಾನದ ದತ್ತಾಂಶ, ಕಾಕ್ಪಿಟ್ನ ಧ್ವನಿ ದಾಖಲೆ, ವಿಮಾನ ನಿರ್ವಹಣೆ ದಾಖಲೆಗಳು, ಎಟಿಸಿ ಲಾಗ್ ಹಾಗೂ ಪ್ರತ್ಯಕ್ಷ ಸಾಕ್ಷ್ಯಗಳು ಸೇರಿ ಎಲ್ಲಾ ದಾಖಲೆಗಳನ್ನು ಪರಿಶೀಲನೆ ನಡೆಸುವ ಅಧಿಕಾರ ನೀಡಲಾಗಿದೆ.
ಸ್ಥಳ ಪರಿಶೀಲನೆ, ಸಿಬ್ಬಂದಿ ಹಾಗೂ ವಾಯು ಸಂಚಾರ ನಿಯಂತ್ರಣ ಸಿಬ್ಬಂದಿ ಸಂದರ್ಶನ ಮತ್ತು ಅಂತರರಾಷ್ಟ್ರೀಯ ಏಜೆನ್ಸಿಗಳ ಸಮನ್ವಯದೊಂದಿಗೆ ಕೆಲಸ ಮಾಡಲೂ ಅಧಿಕಾರ ನೀಡಲಾಗಿದೆ.
ಈ ಸಮಿತಿಯು ಬೇರೆ ಸಂಸ್ಥೆಗಳು ನಡೆಸುವ ತನಿಖೆಗೆ ಬದಲಿಯಲ್ಲ. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಮತ್ತು ನಿರ್ವಹಿಸಲು ಪ್ರಮಾಣೀಕೃತ ಕಾರ್ಯವಿಧಾನಗಳನ್ನು ರೂಪಿಸುವತ್ತ ಗಮನಹರಿಸುತ್ತದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸ್ಪಷ್ಟಪಡಿಸಿದೆ. ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಈಗಾಗಲೇ ತನಿಖೆ ನಡೆಸುತ್ತಿದೆ. ಜೊತೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಇತರರ ತಂಡಗಳು ಅಪಘಾತ ಸ್ಥಳಕ್ಕೆ ಭೇಟಿ ನೀಡಿವೆ.
ಶುಕ್ರವಾರ ರಚಿಸಲಾದ ಸಮಿತಿಯಲ್ಲಿ ನಾಗರಿಕ ವಿಮಾನಯಾನ ಕಾರ್ಯದರ್ಶಿ, ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಅಥವಾ ಜಂಟಿ ಕಾರ್ಯದರ್ಶಿ, ಗುಜರಾತ್ ಗೃಹ ಇಲಾಖೆ ಮತ್ತು ಗುಜರಾತ್ ವಿಪತ್ತು ಪ್ರತಿಕ್ರಿಯೆ ಪ್ರಾಧಿಕಾರದ ಪ್ರತಿನಿಧಿಗಳು, ಅಹಮದಾಬಾದ್ ಪೊಲೀಸ್ ಆಯುಕ್ತರು ಮತ್ತು ವಾಯುಪಡೆ (ತಪಾಸಣೆ ಮತ್ತು ಸುರಕ್ಷತೆ), ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯದ ಮಹಾನಿರ್ದೇಶಕರು ಸೇರಿದ್ದಾರೆ.
ಗುಪ್ತಚರ ಬ್ಯೂರೋ ವಿಶೇಷ ನಿರ್ದೇಶಕ, ವಿಧಿವಿಜ್ಞಾನ ಸೇವೆಗಳ ನಿರ್ದೇಶನಾಲಯದ ನಿರ್ದೇಶಕ, ವಾಯುಯಾನ ತಜ್ಞರು, ಅಪಘಾತ ತನಿಖಾಧಿಕಾರಿಗಳು ಮತ್ತು ಕಾನೂನು ಸಲಹೆಗಾರರು ಸೇರಿದಂತೆ ಸಮಿತಿಯು ಸೂಕ್ತವೆಂದು ಪರಿಗಣಿಸುವ ಯಾವುದೇ ಇತರರು ಸದಸ್ಯರಾಗಿರಲಿದ್ದಾರೆ.
ಸಮಿತಿಯು ಕೇಂದ್ರ ಮತ್ತು ರಾಜ್ಯದ ತುರ್ತು ಪ್ರತಿಕ್ರಿಯೆ ಹೇಗಿತ್ತು ಎನ್ನುವುದನ್ನು ಪರಿಶೀಲಿಸದೆ. ರಕ್ಷಣಾ ಕಾರ್ಯಾಚರಣೆಗಳು ಮತ್ತು ಅವರ ನಡುವಿನ ಸಮನ್ವಯ ಹೇಗಿತ್ತು ಎನ್ನುವುದನ್ನೂ ಗಮನಿಸಲಿದೆ. ಇಂತಹ ಘಟನೆಗಳನ್ನು ನಿರ್ವಹಿಸುವ ಬಗ್ಗೆ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳನ್ನು ಪರಿಶೀಲಿಸಲಿದೆ. ಮತ್ತು ಸಮಗ್ರ ಪ್ರಮಾಣಿಕೃತ ಕಾರ್ಯವಿಧಾನವನ್ನು ರೂಪಿಸಲು ಹಿಂದಿನ ಅಪಘಾತಗಳ ದಾಖಲೆಗಳನ್ನು ಪರಿಶೀಲಿಸಲಿದೆ. ಅಪಘಾತದ ನಂತರದ ನಿರ್ವಹಣೆ ಮತ್ತು ನಿರ್ವಹಣೆಯನ್ನು ಎದುರಿಸಲು ಎಲ್ಲಾ ಏಜೆನ್ಸಿಗಳ ಪಾತ್ರಗಳ ಬಗ್ಗೆಯೂ ಅದು ಶೋಧನೆ ನಡೆಸಲಿದೆ.
ಇತ್ತೀಚಿನ ಅಂತಹ ಘಟನೆಗಳಿಗೆ ಮತ್ತು ಅಪಘಾತದ ನಂತರದ ಪರಿಸ್ಥಿತಿಯನ್ನು ನಿರ್ವಹಿಸಲು ಅಗತ್ಯವಿರುವ ನೀತಿಗಳಲ್ಲಿ ಬೇಕಾದ ಬದಲಾವಣೆಗಳು, ಕಾರ್ಯಾಚರಣೆಯ ಸುಧಾರಣೆಗಳು ಮತ್ತು ತರಬೇತಿ ವರ್ಧನೆಗಳ ಬಗ್ಗೆ ಇದು ಸಲಹೆಗಳನ್ನು ನೀಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.