ADVERTISEMENT

ಅಜಿತ್ ಪವಾರ್ ವಿಮಾನ ದುರಂತದ ಮತ್ತಷ್ಟು ವಿವರ ಬಹಿರಂಗಪಡಿಸುತ್ತೇವೆ: ರೋಹಿತ್

ಪಿಟಿಐ
Published 25 ಫೆಬ್ರುವರಿ 2026, 6:48 IST
Last Updated 25 ಫೆಬ್ರುವರಿ 2026, 6:48 IST
<div class="paragraphs"><p>ಅಜಿತ್ ಪವಾರ್ ಮತ್ತು&nbsp;ರೋಹಿತ್ ಪವಾರ್</p></div>

ಅಜಿತ್ ಪವಾರ್ ಮತ್ತು ರೋಹಿತ್ ಪವಾರ್

   

–ಪಿಟಿಐ ಚಿತ್ರಗಳು 

ಮುಂಬೈ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ದುರಂತದ ಕುರಿತು ಮತ್ತಷ್ಟು ವಿವರಗಳನ್ನು ಬಹಿರಂಗಪಡಿಸುತ್ತೇವೆ ಎಂದು ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್‌ ಪವಾರ್ ಹೇಳಿದ್ದಾರೆ.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಮಾನ ದುರಂತದ ಕುರಿತು ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ವಿಎಸ್ಆರ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್‌ನ 4 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ. ಇದು ಕೇವಲ ಕಣ್ಣೊರೆಸುವ ತಂತ್ರವಾಗಿದ್ದು, ಈ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುತ್ತೇವೆ’ ಎಂದು ತಿಳಿಸಿದ್ದಾರೆ.

‘ವಿಎಸ್‌ಆರ್‌ ವೆಂಚರ್ಸ್‌ ಕಂಪನಿಯು ಯಾವುದೇ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ. ಅಸುರಕ್ಷಿತ ರೀತಿಯಲ್ಲಿ ವಿಮಾನಗಳನ್ನು ನಿರ್ವಹಿಸುತ್ತಿದೆ ಎಂಬ ವಿಷಯವನ್ನು ನಾವು ಪದೇ ಪದೇ ಹೇಳುತ್ತಿದ್ದೇವೆ. ಇದೀಗ ವಿಮಾನಯಾನ ಮಹಾನಿರ್ದೇಶನಾಲಯವು ವಿಎಸ್ಆರ್‌ನ ನಾಲ್ಕು ವಿಮಾನಗಳನ್ನು ಸ್ಥಗಿತಗೊಳಿಸಿದೆ’ ಎಂದು ಅಜಿತ್ ಪವಾರ್ ಅವರ ಸೋದರಳಿಯ ರೋಹಿತ್ ಹೇಳಿದ್ದಾರೆ.

‘ನಮ್ಮ ಹೋರಾಟಕ್ಕೆ ಯಶಸ್ಸು ಸಿಕ್ಕಿದೆಯಾದರೂ, ಇದು ಆರಂಭಿಕವಷ್ಟೇ. ಇನ್ನೂ ಹೆಚ್ಚಿನ ವಿವರಗಳು ಬಹಿರಂಗವಾಗಬೇಕಿದೆ. ಈ ವಿಷಯದ ಬಗ್ಗೆ ನಾನು ವಿವರವಾಗಿ ಮಾತನಾಡುತ್ತೇನೆ’ ಎಂದಿದ್ದಾರೆ.

ಅಜಿತ್ ಪವಾರ್‌ ಹಾಗೂ ಇತರ ನಾಲ್ವರು ಸಾವಿಗೀಡಾದ ವಿಮಾನ ಪತನದ ಕುರಿತು ಕೇವಲ ಶೇಕಡ 20ರಿಂದ 30ರಷ್ಟು ಮಾಹಿತಿಯನ್ನು ಮಾತ್ರವೇ ನಾವು ಹಂಚಿಕೊಂಡಿದ್ದೇವೆ. ಪ್ರಾಥಮಿಕ ತನಿಖಾ ವರದಿಯಲ್ಲಿ ದೋಷ ಕಂಡುಬಂದರೆ ಉಳಿದ ಶೇ 70ರಷ್ಟು ಮಾಹಿತಿಯನ್ನೂ ನಾವು ಸಾರ್ವಜನಿಕವಾಗಿ ಹಂಚಿಕೊಳ್ಳುತ್ತೇವೆ ಎಂದು ರೋಹಿತ್‌ ಹೇಳಿದ್ದಾರೆ.

ಅಪಘಾತಕ್ಕೀಡಾದ ವಿಎಸ್‌ಆರ್‌ ವೆಂಚರ್ಸ್‌ನ ‘ಲಿಯರ್‌ಜೆಟ್‌–45’ ವಿಮಾನದ ‘ಬ್ಲಾಕ್‌ಬಾಕ್ಸ್‌’ ಸುಟ್ಟು ಹೋಗಿರುವುದನ್ನು ಪ್ರಶ್ನಿಸಿದ ಅವರು ‘ಬ್ಲಾಕ್‌ಬಾಕ್ಸ್‌’ನ ಚಿತ್ರಗಳು ನನ್ನ ಬಳಿ ಇವೆ. ಘಟನೆಯಲ್ಲಿ ಯಾವುದೇ ಕೈವಾಡವಿರುವುದು ಪತ್ತೆಯಾದರೆ ಈ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಸರ್ಕಾರ ಭಾರಿ ಬೆಲೆ ತೆರಬೇಕಾಗುತ್ತದೆ’ ಎಂದು ಕಿಡಿಕಾರಿದ್ದಾರೆ.

‘ತನಿಖೆಯ ವಿವರವಾದ ವರದಿಯನ್ನು ಬಿಡುಗಡೆ ಮಾಡದೇ ಹೋದರೆ, ವಿಎಸ್‌ಆರ್‌ ವೆಂಚರ್ಸ್‌ ಹಾಗೂ ಸರ್ಕಾರದ ನಡುವೆ ಸಂಬಂಧವಿದ್ದು, ಬೇಕಂತಲೇ ತನಿಖೆಯನ್ನು ವಿಳಂಬ ಮಾಡಲಾಗುತ್ತಿದೆ ಎಂಬ ನಿರ್ಧಾರಕ್ಕೆ ಬರಲಾಗುವುದು. ಅಪಘಾತದ ಹಿಂದಿನ ಸತ್ಯ ಹೊರಬರುವವರೆಗೆ ನನ್ನ ಹೋರಾಟವನ್ನು ಮುಂದುವರಿಸುತ್ತೇನೆ’ ಎಂದಿದ್ದಾರೆ.

ಎನ್‌ಸಿಪಿ ಎಂಎಲ್‌ಸಿ ಅಮೋಲ್ ಮಿಟ್ಕರಿ ಮಾತನಾಡಿ, ಅಜಿತ್ ಪವಾರ್ ವಿಮಾನ ದುರಂತ ಸಂಬಂಧ ಕ್ಯಾಪ್ಟನ್ ಸುಮಿತ್ ಕಪೂರ್ ಆತ್ಮಹತ್ಯಾ ಬಾಂಬರ್ ಆಗಿದ್ದಾರೋ ಇಲ್ಲವೋ ಎಂಬುದರ ಬಗ್ಗೆ ಕೂಲಂಕಷವಾಗಿ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.