
ಬಿಹಾರ ಚುನಾವಣೆ
ನಿತೀಶ್ ಕುಮಾರ್ ಅವರು ದಾಖಲೆಯ ಐದನೇ ಬಾರಿಗೆ ಮುಖ್ಯಮಂತ್ರಿಯಾಗುವರೋ ಅಥವಾ ಬದಲಾವಣೆ ಬಯಸಿರುವ ಜನರು, ನಿತೀಶ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ‘ಇಂಡಿಯಾ’ ಒಕ್ಕೂಟದ ಕೈಗೆ ಅಧಿಕಾರದ ಚುಕ್ಕಾಣಿ ನೀಡುವರೋ ಎಂಬುದು ಶುಕ್ರವಾರ ನಿಚ್ಚಳವಾಗಲಿದೆ.
ಬಿಜೆಪಿ ನೇತೃತ್ವದ ಎನ್ಡಿಎ ಹಾಗೂ ವಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ಗೆಲುವು ತಮ್ಮದೇ ಎಂಬ ವಿಶ್ವಾಸ ವ್ಯಕ್ತಪಡಿಸಿವೆ. ಭಾರಿ ಪ್ರಮಾಣದಲ್ಲಿ ಮತ ಚಲಾವಣೆ ಆಗಿರುವುದು ತನ್ನ ಉತ್ತಮ ಆಡಳಿತಕ್ಕೆ ಮತ್ತೊಮ್ಮೆ ಜನಾದೇಶ ಸಿಕ್ಕಿರುವುದರ ಸಂಕೇತ ಎಂದು ಆಡಳಿತಾರೂಢ ಎನ್ಡಿಎ ಹೇಳುತ್ತಿದೆ.
‘ಇಂಡಿಯಾ’ ಕೂಟ ಈ ಮಾತನ್ನು ತಳ್ಳಿಹಾಕುತ್ತಿದೆ. ರಾಜ್ಯದ ಜನರು ಬದಲಾವಣೆ ಬಯಸಿದ್ದಾರೆ. ಜನರ ಈ ಇರಾದೆಯು ದಾಖಲೆಯ ಮತ ಚಲಾವಣೆ ಮೂಲಕ ವ್ಯಕ್ತವಾಗಿದೆ ಎಂದು ‘ಇಂಡಿಯಾ’ ನಾಯಕರು ವಿಶ್ಲೇಷಿಸುತ್ತಿದ್ದಾರೆ.
ಎನ್ಡಿಎ ಸರಳ ಬಹುಮತ ಪಡೆದು, ಮತ್ತೆ ಅಧಿಕಾರಕ್ಕೇರಲಿದೆ ಎಂದು ಎಲ್ಲ ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ಇದು ವಿಪಕ್ಷ ಪಾಳಯದಲ್ಲಿ ಕಿರಿಕಿರಿಯನ್ನುಂಟು ಮಾಡಿದೆ. ವಿರೋಧ ಪಕ್ಷಗಳು ಸಮೀಕ್ಷೆಗಳನ್ನು ತಳ್ಳಿಹಾಕಿವೆ. ಚುನಾವಣಾ ತಂತ್ರಗಾರ ಪ್ರಶಾಂತ ಕಿಶೋರ್ ನೇತೃತ್ವದ ಜನ ಸುರಾಜ್ ಪಕ್ಷದ ಸಾಧನೆ ನಿರಾಶಾದಾಯಕವಾಗಿರಲಿದೆ ಎಂದೂ ಸಮೀಕ್ಷೆಗಳು ಹೇಳಿವೆ.
ಬಿಹಾರದಲ್ಲಿ ಮತ್ತೆ ಅಧಿಕಾರಕ್ಕೇರುವ ಪ್ರಯತ್ನದಲ್ಲಿರುವ ಎನ್ಡಿಎ ಮೈತ್ರಿಕೂಟವು, ತನ್ನ ಪ್ರಣಾಳಿಕೆಯಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿ ಮತ್ತು ‘ಲಖ್ಪತಿ ದೀದಿ’ ಯೋಜನೆಯಡಿ ಒಂದು ಕೋಟಿ ಮಹಿಳೆಯರಿಗೆ ತರಬೇತಿ ಸೇರಿದಂತೆ ಹಲವು ಭರವಸೆ ನೀಡಿದೆ. ರಾಜ್ಯದ ನಾಲ್ಕು ನಗರಗಳಲ್ಲಿ ಮೆಟ್ರೊ ರೈಲು ಸೇವೆ ಆರಂಭಿಸುವುದು ಮತ್ತು ಏಳು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡುವ ಘೋಷಣೆ ಮಾಡಲಾಗಿದೆ.
ಏಳು ಎಕ್ಸ್ಪ್ರೆಸ್ವೇಗಳ ನಿರ್ಮಾಣ, 10 ಕೈಗಾರಿಕಾ ಪಾರ್ಕ್ಗಳ ಅಭಿವೃದ್ಧಿ, ಬಡ ಕುಟುಂಬಗಳ ಮಕ್ಕಳಿಗೆ ಕೆ.ಜಿಯಿಂದ ಪಿ.ಜಿವರೆಗೆ ಉಚಿತ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಕ್ಕಳಿಗೆ ತಿಂಗಳಿಗೆ ₹2000 ನೆರವು ನೀಡುವುದಾಗಿ ಪ್ರಕಟಿಸಿದೆ.
ಮಹಾಮೈತ್ರಿ ಭರವಸೆ ಮಹಾಪೂರ
ಮಹಾಮೈತ್ರಿಕೂಟ ಸರ್ಕಾರ ರಚನೆಯಾದ 20 ದಿನಗಳಲ್ಲೇ, ರಾಜ್ಯದ ಪ್ರತಿ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಲು ಕಾಯ್ದೆ ಅಂಗೀಕರಿಸಲಾಗುವುದು. ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದೆ.
‘ಮಾಯ್-ಬೆಹಿನ್ ಮಾನ್’ ಯೋಜನೆಯಡಿ ಡಿಸೆಂಬರ್ 1ರಿಂದ ಮಹಿಳೆಯರು ತಿಂಗಳಿಗೆ ₹2,500 ಮತ್ತು ಮುಂದಿನ ಐದು ವರ್ಷಗಳವರೆಗೆ ವರ್ಷಕ್ಕೆ ₹30,000 ಆರ್ಥಿಕ ಸಹಾಯ ಪಡೆಯಲಿದ್ದಾರೆ. ಬಡವರ ಪ್ರತಿ ಕುಟುಂಬವು 200 ಯೂನಿಟ್ ಉಚಿತ ವಿದ್ಯುತ್ ಪಡೆಯಲಿದೆ. ₹500ಕ್ಕೆ ಅಡುಗೆ ಅನಿಲ ಒದಗಿಸಲಾಗುವುದು. ಎಂದು ಮೈತ್ರಿಕೂಟವು ಭರವಸೆ ನೀಡಿದೆ.
ಪ್ರಣಾಳಿಕೆಯು ಐಟಿ ಪಾರ್ಕ್, ವಿಶೇಷ ಆರ್ಥಿಕ ವಲಯಗಳು (ಎಸ್ಇಜೆಡ್ಗಳು), ಡೇರಿ ಆಧಾರಿತ ಕೈಗಾರಿಕೆಗಳು, ಐದು ಎಕ್ಸ್ಪ್ರೆಸ್ವೇಗಳ ನಿರ್ಮಾಣ ಮತ್ತು ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ 25 ಅಂಶಗಳನ್ನು ಒಳಗೊಂಡಿದೆ.
ವಿಧಾನಸಭೆ ಚುನಾವಣೆಯಲ್ಲಿ ಎನ್ಡಿಎ ಹಾಗೂ ‘ಇಂಡಿಯಾ’ ಕೂಟಗಳ ನಡುವೆ ನೇರ ಹಾಗೂ ತುರುಸಿನ ಸ್ಪರ್ಧೆ ಕಂಡುಬಂದಿತ್ತು. ನಿತೀಶ್ ಕುಮಾರ್ ನೇತೃತ್ವದ ಎನ್ಡಿಎಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಎಲ್ಲ ಮತಗಟ್ಟೆ ಸಮೀಕ್ಷೆಗಳು ಹೇಳಿವೆ.
ಆರ್ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಮಾತ್ರ ಎಲ್ಲ ಮತಗಟ್ಟೆ ಸಮೀಕ್ಷೆ ಗಳನ್ನು ತಳ್ಳಿಹಾಕಿದ್ದಾರೆ. ‘ಎರಡನೇ ಹಂತದ ಮತದಾನದ ವೇಳೆ, ಜನರು ಮತ ಚಲಾಯಿಸಲು ಇನ್ನೂ ಸರದಿಯಲ್ಲಿ ನಿಂತಿದ್ದರು. ಅದೇ ವೇಳೆ ಮತಗಟ್ಟೆ ಸಮೀಕ್ಷೆಯ ವಿವರಗಳನ್ನು ಬಹಿರಂಗಪಡಿಸಲಾಗಿದೆ’ ಎನ್ನುವ ಮೂಲಕ ತಮ್ಮ ಸಮರ್ಥನೆ ನೀಡುತ್ತಾರೆ.
ಆರ್ಜೆಡಿ, ಕಾಂಗ್ರೆಸ್, ಸಿಪಿಐ–ಎಂಎಲ್,ಸಿಪಿಐ, ಸಿಪಿಎಂ ಹಾಗೂ ವಿಐಪಿ ‘ಇಂಡಿಯಾ’ ಮೈತ್ರಿಕೂಟದ ಅಂಗಪಕ್ಷಗಳು. ಜೆಡಿಯು, ಬಿಜೆಪಿ, ಎಲ್ಜೆಪಿ, ಎಚ್ಎಂ,ಆರ್ಎಲ್ಎಂ ಪಕ್ಷಗಳು ಎನ್ಡಿಎ ಭಾಗವಾಗಿದೆ.
ಬಿಹಾರದಲ್ಲಿ ಯಾರ ಕೈಗೆ ಅಧಿಕಾರದ ಚುಕ್ಕಾಣಿ ಸಿಗಲಿದೆ ಎಂಬ ಕುತೂಹಲಕ್ಕೆ ಶುಕ್ರವಾರ ತೆರೆ ಬೀಳಲಿದೆ. ಅದರೆ, ಎಲ್ಲರ ಚಿತ್ತ ರಾಘೋಪುರ ಹಾಗೂ ತಾರಾಪುರದ ಫಲಿತಾಂಶದತ್ತ ಇರಲಿದೆ.
ಈ ಕ್ಷೇತ್ರಗಳಲ್ಲಿ ಕ್ರಮವಾಗಿ ತೇಜಸ್ವಿ ಯಾದವ್ ಹಾಗೂ ಡಿಸಿಎಂ, ಬಿಜೆಪಿಯ ಸಾಮ್ರಾಟ್ ಚೌಧರಿ ಸ್ಪರ್ಧಿಸಿರುವುದು ಈ ಕುತೂಹಲಕ್ಕೆ ಕಾರಣ.
ಬೇರೆ ಬೇರೆ ಕಾರಣಗಳಿಂದಾಗಿ, ಪ್ರಸಕ್ತ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಲಾಲೂ ಪ್ರಸಾದ್ ಹಾಗೂ ರಾಬ್ಡಿ ದೇವಿ ಅವರು ಸ್ಪರ್ಧಿಸಿರಲಿಲ್ಲ.
ನಿತೀಶ್ ಕುಮಾರ್ ಹಾಗೂ ರಾಬ್ಡಿ ದೇವಿ ಅವರು ಈಗಾಗಲೇ ವಿಧಾನ ಪರಿಷತ್ತಿನ ಸದಸ್ಯರಾಗಿದ್ದಾರೆ. ಮೇವು ಹಗರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಲಾಲೂ ಪ್ರಸಾದ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.
ಬಿಹಾರ ವಿಧಾನಸಭೆ ಚುನಾವಣೆಗೆ ಎರಡು ಹಂತಗಳಲ್ಲಿ ನಡೆದ ಮತದಾನಗಳಲ್ಲಿ ಒಟ್ಟಾರೆ ಶೇ 66.91ರಷ್ಟು ಮತದಾನವಾಗಿದೆ. ಇದು ರಾಜ್ಯದ ಚುನಾವಣಾ ಇತಿಹಾಸದಲ್ಲೇ ಅತ್ಯಧಿಕ ಎಂದು ಭಾರತೀಯ ಚುನಾವಣಾ ಆಯೋಗವು (ಇಸಿಐ) ತಿಳಿಸಿದೆ.
ಮೊದಲ ಹಂತದಲ್ಲಿ ಶೇ 65.08 ಹಾಗೂ ಎರಡನೇ ಹಂತದಲ್ಲಿ ಶೇ 68.76ರಷ್ಟು ಮತದಾನವಾಗಿದೆ.
ಅಲ್ಲದೆ ರಾಜ್ಯದ ಇತಿಹಾಸದಲ್ಲಿ ಮಹಿಳಾ ಮತದಾರರು ದಾಖಲೆ ಪ್ರಮಾಣದಲ್ಲಿ ಮತ ಚಲಾಯಿಸಿದ್ದಾರೆ ಎಂದು ಇಸಿಐ ತಿಳಿಸಿದೆ.
2020ರ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇ 57.29ರಷ್ಟು ಮತದಾನವಾಗಿತ್ತು.
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಬಿಜೆಪಿ-ಜೆಡಿಯು ನೇತೃತ್ವದ ಎನ್ಡಿಎ ಮೈತ್ರಿಕೂಟವು ಈಗಿನ ಟ್ರೆಂಡ್ ಪ್ರಕಾರ 160 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಆ ಮೂಲಕ ಮ್ಯಾಜಿಕ್ ಸಂಖ್ಯೆ ಆದ 122 ಅನ್ನು ದಾಟಿ ಬಹುಮತ ಗಳಿಸುವುದು ನಿಚ್ಚಳವೆನಿಸಿದೆ.
ಮತ್ತೊಂದೆಡೆ ಆರ್ಜೆಡಿ-ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ ಮೈತ್ರಿಯು ಹಿನ್ನಡೆಯಲ್ಲಿದ್ದು, 79 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ.
ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷವು ಎರಡು ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.
ಇಂಡಿಯಾ ಮೈತ್ರಿಯ ಸಿಎಂ ಅಭ್ಯರ್ಥಿ, ಆರ್ಜೆಡಿ ನಾಯಕ ತೇಜಸ್ವಿ ಯಾದವ್, ರಘೋಪುರ ವಿಧಾನಸಭಾ ಕ್ಷೇತ್ರದಿಂದ 893 ಮತಗಳ ಮುನ್ನಡೆಯಲ್ಲಿದ್ದಾರೆ.
ಬಿಜೆಪಿ 72, ಜೆಡಿ(ಯು) 71 ಸೇರಿದಂತೆ ಎನ್ಡಿಎ 166 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಮತ್ತೊಂದೆಡೆ ಆರ್ಜೆಡಿ 42, ಕಾಂಗ್ರೆಸ್ 8 ಸೇರಿದಂತೆ ಇಂಡಿಯಾ ಮೈತ್ರಿಯು 56 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.
ಬೆಳಿಗ್ಗೆ 11 ಗಂಟೆಯ ಟ್ರೆಂಡ್ ಪ್ರಕಾರ, ಎನ್ಡಿಎ ಮೈತ್ರಿಯು 190 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಭರ್ಜರಿ ಗೆಲುವಿನತ್ತ ದಾಪುಗಾಲು ಇಟ್ಟಿದೆ.
ಅತ್ತ ಮಹಾಘಟಬಂಧನ ಮೈತ್ರಿಯು 50 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭಾರಿ ಬಹುಮತದೊಂದಿಗೆ ಗೆಲುವು ದಾಖಲಿಸಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಕುಮಾರ್ ಜೈಸ್ವಾರ್ ಹೇಳಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದು, ಈಗಿನ ಟ್ರೆಂಡ್ (12 ಗಂಟೆ) ಬಿಜೆಪಿ-ಜೆಡಿಯು ನೇತೃತ್ವದ ಎನ್ಡಿಎ ಮೈತ್ರಿಕೂಟ 190ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು ಬೇಕಾಗಿರುವ ಮ್ಯಾಜಿಕ್ ಸಂಖ್ಯೆ 122.
ಈ ಮ್ಯಾಜಿಕ್ ಸಂಖ್ಯೆಯನ್ನು ಈಗಾಗಲೇ ದಾಟಿರುವ ಬಿಜೆಪಿ ಭಾರಿ ಬಹುಮತದತ್ತ ಮುನ್ನಡೆದಿದೆ.
ಬಿಹಾರದಲ್ಲಿ ಮತ್ತೆ ಎನ್ಡಿಎ ಸರ್ಕಾರ ರಚನೆಯಾಗಲಿದ್ದು, ನಿತೀಶ್ ಕುಮಾರ್ ದಾಖಲೆ ಐದನೇ ಬಾರಿ ಸಿಎಂ ಆಗುವ ಸಾಧ್ಯತೆ ಇದೆ. ಪಟ್ನಾ ಸೇರಿದಂತೆ ರಾಜ್ಯದಲ್ಲಿ ಜೆಡಿಯು ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ.
ಆರ್ಜೆಡಿ ಪೈಪೋಟಿ, ಕಾಂಗ್ರೆಸ್ ಕಳಪೆ ಸಾಧನೆ....
ಅತ್ತ ಮಹಾಘಟಬಂಧನ ಮೈತ್ರಿ ಪಕ್ಷಗಳ ಪೈಕಿ ಆರ್ಜೆಡಿ ನಿಕಟ ಪೈಪೋಟಿ ಒಡ್ಡಿದ್ದರೂ ಕಾಂಗ್ರೆಸ್ ಕಳಪೆ ಸಾಧನೆ ಮಾಡಿದೆ.
ಸದ್ಯದ ಮಾಹಿತಿ ಪ್ರಕಾರ ಬಿಜೆಪಿ 84, ಜೆಡಿಯು 76, ಆರ್ಜೆಡಿ 43, ಎಲ್ಜೆಪಿಆರ್ವಿ 22, ಸಿಪಿಐ (ಎಂಎಲ್) (ಎಲ್) 6, ಕಾಂಗ್ರೆಸ್ 5 ಮತ್ತು ಎಚ್ಎಎಂಎಸ್ 5 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ರಘೋಪುರ ವಿಧಾನಸಭಾ ಕ್ಷೇತ್ರದಲ್ಲಿ ನಿಕಟ ಪೈಪೋಟಿ: ಬಿಜೆಪಿಯ ಸತೀಶ್ ಕುಮಾರ್ ಅವರಿಂದ ಕೇವಲ 219 ಮತಗಳ ಮುನ್ನಡೆ ಕಾಯ್ದುಕೊಂಡ ತೇಜಸ್ವಿ ಯಾದವ್
ಪಟ್ನಾದಲ್ಲಿ ಬಿಹಾರ ಕಾರ್ಯಕರ್ತರ ಸಂಭ್ರಮ
ಬಿಹಾರ ವಿಧಾಸನಭೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದು, ಎನ್ಡಿಎ ಮೈತ್ರಿಕೂಟ ಭಾರಿ ಗೆಲುವಿನತ್ತ ಮುನ್ನಡೆದಿದೆ.
ಅಲ್ಲದೆ ರಾಜ್ಯದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಹಾದಿಯಲ್ಲಿದೆ ಎಂದು ಚುನಾವಣಾ ಆಯೋಗದ ಫಲಿತಾಂಶ ವರದಿಯು ಸೂಚಿಸುತ್ತದೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ 190ಕ್ಕೂ ಅಧಿಕ ಸ್ಥಾನಗಳಲ್ಲಿ ಎನ್ಡಿಎ ಮುನ್ನಡೆ ಕಾಯ್ದುಕೊಂಡಿದೆ.
2025ರ ಚುನಾವಣೆಯಲ್ಲಿ ಬಿಜೆಪಿ 101 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಈ ಪೈಕಿ 80ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ರಾಜ್ಯದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಆ ಮೂಲಕ ಪ್ರಬಲ ರಾಜಕೀಯ ಶಕ್ತಿಯಾಗಿ ತನ್ನ ಬಲ ಪ್ರದರ್ಶನ ಮಾಡಿದೆ.
ದೆಹಲಿ, ಮಹಾರಾಷ್ಟ್ರ, ಹರಿಯಾಣದ ಬಳಿಕವೀಗ ಬಿಹಾರದಲ್ಲಿ ಬಿಜೆಪಿ ಅತ್ಯುತ್ತಮ ಸಾಧನೆ ಮಾಡಿದೆ.
ಅತ್ತ ಜೆಡಿಯು 70ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಗಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ. 2020ರಲ್ಲಿ ಜೆಡಿಯು 43 ಸ್ಥಾನಗಳನ್ನು ಪಡೆದಿತ್ತು.
ಇದರೊಂದಿಗೆ ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್ ನಾಯಕತ್ವಕ್ಕೆ ವ್ಯಾಪಕ ಮನ್ನಣೆ ಸಿಕ್ಕಂತಾಗಿದೆ.
ಮಹಾಘಟಬಂಧನ ಮೈತ್ರಿಯ ಪ್ರಮುಖ ಪಕ್ಷವಾಗಿರುವ ಆರ್ಜೆಡಿ 140ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೂ 32 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಗಳಿಸುವ ಮೂಲಕ ಕಳಪೆ ಸಾಧನೆ ಮಾಡಿದೆ.
ಕಾಂಗ್ರೆಸ್ನ ಸಾಧನೆ ಇದಕ್ಕೂ ಕಳಪೆ ಮಟ್ಟದಲ್ಲಿದೆ. 61 ಸ್ಥಾನಗಳಲ್ಲಿ ಸ್ಪರ್ಧಸಿದ್ದ ಕಾಂಗ್ರೆಸ್, 5ಕ್ಕೂ ಕಡಿಮೆ ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ.
ಒಟ್ಟಾರೆಯಾಗಿ ಬಿಹಾರದಲ್ಲಿ ಎನ್ಡಿಎ ಸರ್ಕಾರದ ಅಧಿಕಾರ ಮುಂದುವರಿಯುವುದು ನಿಚ್ಚಳವೆನಿಸಿದೆ.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್ಡಿಎ ಅಭೂತಪೂರ್ವ ಗೆಲುವಿನತ್ತ ದಾಪುಗಾಲು ಇಟ್ಟಿದ್ದು, ಈಗಿನ ಟ್ರೆಂಡ್ (ಮಧ್ಯಾಹ್ನ 1.30) ಪ್ರಕಾರ 201 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ.
ಮಹಾಘಟಬಂಧನ ಮೈತ್ರಿಯು 36 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ.
ಬೆಂಗಳೂರು: ಬಿಹಾರದಲ್ಲೂ ಮತಕಳವು ನಡೆದಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಶುಕ್ರವಾರ) ಆರೋಪಿಸಿದ್ದಾರೆ.
ಮಧ್ಯಾಹ್ನ 3 ಗಂಟೆಯ ಟ್ರೆಂಡ್: ಬಿಜೆಪಿ 95, ಜೆಡಿಯು 84 ಸ್ಥಾನಗಳಲ್ಲಿ ಮುನ್ನಡೆ
ಬಿಜೆಪಿ: 95
ಜೆಡಿಯು: 84
ಆರ್ಜೆಡಿ: 24
ಎಲ್ಜೆಪಿಆರ್ವಿ: 20
ಎಐಎಂಐಎಂ: 6
ಎಚ್ಎಎಂಎಸ್: 5
ಕಾಂಗ್ರೆಸ್: 2
ಇತರೆ: 9
(ಮಾಹಿತಿ: ಚುನಾವಣಾ ಆಯೋಗ, ಮಧ್ನಾಹ್ನ 3 ಗಂಟೆ)
ಬಿಹಾರ ಚುನಾವಣೆ: ಪಕ್ಷಗಳ ಸಾಧನೆ (ಮುನ್ನಡೆ)
ಬಿಜೆಪಿ: 92
ಜೆಡಿಯು: 81
ಆರ್ಜೆಡಿ: 26
ಎಲ್ಜೆಪಿಆರ್ವಿ: 22
ಎಐಎಂಐಎಂ: 5
ಎಚ್ಎಎಂಎಸ್: 5
ಕಾಂಗ್ರೆಸ್: 4
ಇತರೆ: 10
(ಮಾಹಿತಿ: ಚುನಾವಣಾ ಆಯೋಗ, ಮಧ್ನಾಹ್ನ 2 ಗಂಟೆ)
7 ಕ್ಷೇತ್ರಗಳಲ್ಲಿ ಎನ್ಡಿಎ ಗೆಲುವು ಘೋಷಣೆಯಾಗಿದೆ. ಜೆಡಿಯುವಿನ ಮೂವರು ಅಭ್ಯರ್ಥಿಗಳು ಮತ್ತು ಬಿಜೆಪಿಯ ಇಬ್ಬರು ಗೆದ್ದಿದ್ದಾರೆ ಎಂದು ಚುನಾವಣಾ ಆಯೋಗ ಘೋಷಣೆ ಮಾಡಿದೆ. ಎನ್ಡಿಎ 197 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಮಹಾಘಟಬಂಧನ್ 32 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಬಿಹಾರದಲ್ಲಿ ಎನ್ಡಿಎ ಐತಿಹಾಸಿಕ ಗೆಲುವು ಸಾಧಿಸಿರುವುದು ಪ್ರಧಾನಿ ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ ಸರ್ಕಾರದ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳ ಮೇಲಿನ ಜನರ ನಂಬಿಕೆಯ ಮುದ್ರೆ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಸಚಿವ ಜೆ.ಪಿ. ನಡ್ಡಾ ಹೇಳಿದ್ದಾರೆ.
ಬಿಹಾರದ ಅಭಿವೃದ್ಧಿಗೆ ಎನ್ಡಿಎ ಬದ್ಧವಾಗಿದೆ ಎನ್ನುವುದನ್ನು ಅನುಮೋದಿಸಿ ಜನರು ಮುದ್ರೆ ಒತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಬಿಹಾರದಲ್ಲಿ ಉತ್ತಮ ಆಡಳಿತದ ಗೆಲುವು, ಅಭಿವೃದ್ಧಿಯ ಗೆಲುವು, ಸಾರ್ವಜನಿಕ ಕಲ್ಯಾಣದ ಗೆಲುವು . ಸಾಮಾಜಿಕ ನ್ಯಾಯದ ಗೆಲುವು ಎಂದು ಪ್ರಧಾನಿ ನರೆಂದ್ರ ಮೋದಿ ಹೇಳಿದ್ದಾರೆ.
2025ರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎಗೆ ಐತಿಹಾಸಿಕ ಮತ್ತು ಅಭೂತಪೂರ್ವ ಗೆಲುವಿನಿಂದ ಆಶೀರ್ವದಿಸಿದ ಬಿಹಾರದ ಕುಟುಂಬ ಸದಸ್ಯರಿಗೆ ನನ್ನ ಹೃತ್ಪೂರ್ವಕ ಧನ್ಯವಾದ. ಈ ಸಾರ್ವಜನಿಕ ತೀರ್ಪು ನಮಗೆ ಜನರಿಗೆ ಸೇವೆ ಸಲ್ಲಿಸಲು ಮತ್ತು ಬಿಹಾರಕ್ಕಾಗಿ ಹೊಸ ಸಂಕಲ್ಪದೊಂದಿಗೆ ಕೆಲಸ ಮಾಡಲು ಶಕ್ತಿ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮೈಥಿಲಿ ಠಾಕೂರ್
25 ವರ್ಷದ ಗಾಯಕಿ ಮೈಥಿಲಿ ಠಾಕೂರ್ 12 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅಲಿನಗರ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಬಿಹಾರದ ಉಪಮುಖ್ಯಮಂತ್ರಿಯಾಗಿದ್ದ ಸಾಮ್ರಾಟ್ ಚೌದರಿ ತಾರಾಪುರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಸಾಮ್ರಾಟ್ 45,843 ಮತಗಳ ಅಂತರದಿಂದ ಗೆದ್ದಿದ್ದಾರೆ.
ಎರಡು ಹಂತಗಳಲ್ಲಿ ನಡೆದಿದ್ದ ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಸದ್ಯ ಅಧಿಕಾರದಲ್ಲಿರುವ ಎನ್ಡಿಎ ಮೈತ್ರಿಕೂಟ 202 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿಸುವ ಮೂಲಕ ಅಧಿಕಾರ ಉಳಿಸಿಕೊಂಡಿದೆ. ವಿರೋಧ ಪಕ್ಷಗಳ ಮೈತ್ರಿಕೂಟ 'ಮಹಾಘಟಬಂಧನ'ಕ್ಕೆ ಕೇವಲ 35 ಸ್ಥಾನಗಳಲ್ಲಿ ಜಯ ಒಲಿದಿದೆ. ಉಳಿದ 6 ಕ್ಷೇತ್ರಗಳಲ್ಲಿ ಇತರರು ಗೆದ್ದಿದ್ದಾರೆ.
ಎನ್ಡಿಎ ಕೂಟದಲ್ಲಿರುವ ಬಿಜೆಪಿ (89), ಜೆಡಿಯು (85) ಕ್ರಮವಾಗಿ ಅತಿಹೆಚ್ಚು ಸ್ಥಾನಗಳನ್ನು ಪಡೆದ ಪಕ್ಷಗಳಾಗಿವೆ. ಪ್ರಮುಖ ವಿರೋಧ ಪಕ್ಷ ಆರ್ಜೆಡಿ, 25 ಸ್ಥಾನಗಳಲ್ಲಿ ಗೆದ್ದಿದೆ. ಕಾಂಗ್ರೆಸ್ ಗೆದ್ದಿರುವುದು ಆರು ಕಡೆ ಮಾತ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.