ADVERTISEMENT

ನಿತೀಶ್‌ ಸಂಪುಟಕ್ಕೆ 31 ಮಂದಿ ಸೇರ್ಪಡೆ: ಆರ್‌ಜೆಡಿಗೆ ಸಿಂಹಪಾಲು

ಪಿಟಿಐ
Published 16 ಆಗಸ್ಟ್ 2022, 8:39 IST
Last Updated 16 ಆಗಸ್ಟ್ 2022, 8:39 IST
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಲಾಲು ಪುತ್ರನನ್ನು ಅಭಿನಂದಿಸುತ್ತಿರುವ ರಾಜ್ಯಪಾಲರು
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಲಾಲು ಪುತ್ರನನ್ನು ಅಭಿನಂದಿಸುತ್ತಿರುವ ರಾಜ್ಯಪಾಲರು    

ಪಟ್ನಾ: ನಿತೀಶ್‌ ಕುಮಾರ್‌ ಮತ್ತು ತೇಜಸ್ವಿ ಯಾದವ್‌ ಅವರ ನೇತೃತ್ವದಲ್ಲಿ ರಚನೆಯಾಗಿರುವ ಬಿಹಾರ ಸರ್ಕಾರದ ನೂತನ ಸಚಿವರಾಗಿ 31 ಮಂದಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು.

ಹೆಚ್ಚಿನ ಶಾಸಕರನ್ನು ಹೊಂದಿರುವ ಆರ್‌ಜೆಡಿಯು ಸಹಜವಾಗಿಯೇ ಸಚಿವ ಸ್ಥಾನದಲ್ಲಿಯೂ ಸಿಂಹಪಾಲು ಪಡೆದಿದೆ. ಅಲ್ಪಸಂಖ್ಯಾತರು ಸೇರಿದಂತೆ ಸಮಾಜದ ಎಲ್ಲಾ ವರ್ಗದವರಿಗೂ ಪ್ರಾತಿನಿಧ್ಯ ನೀಡುವತ್ತ ಸರ್ಕಾರ ಗಮನ ಹರಿಸಿದೆ.

ಆರ್‌ಜೆಡಿಯಿಂದ 16, ಜೆಡಿಯುನಿಂದ 11, ಕಾಂಗ್ರೆಸ್‌ನಿಂದ ಇಬ್ಬರು, ಮಾಜಿ ಸಿಎಂ ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್‌ಎಎಂ)ದ ಒಬ್ಬರು ಮತ್ತು ಒಬ್ಬ ಪಕ್ಷೇತರ ಶಾಸಕ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ADVERTISEMENT

ಹೊಸ ಕ್ಯಾಬಿನೆಟ್‌ನಲ್ಲಿ ಐವರು ಮುಸ್ಲಿಮರಿಗೆ ಸ್ಥಾನ ಸಿಕ್ಕಿದೆ. ಹಿಂದಿನ ಎನ್‌ಡಿಎ ಸರ್ಕಾರದಲ್ಲಿ ಮುಸ್ಲಿಂ ಸಮುದಾಯದಿಂದ ಒಬ್ಬರಷ್ಟೇ ಸಚಿವರಾಗಿದ್ದರು.

ಲಾಲು ಪ್ರಸಾದ್ ಯಾದವ್‌ ಅವರ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಸೇರಿದಂತೆ ಯಾದವ ಸಮುದಾಯದ ಒಟ್ಟು ಏಳು ಮಂದಿಗೆ ಆರ್‌ಜೆಡಿ ಸಚಿವ ಸ್ಥಾನ ನೀಡಲಾಗಿದೆ.

ಆರ್‌ಜೆಡಿ ಕೋಟಾದಿಂದ ಭೂಮಿಹಾರ ಸಮುದಾಯಕ್ಕೆ ಸೇರಿದ ಕಾರ್ತಿಕೇಯ ಸಿಂಗ್ ಮತ್ತು ರಜಪೂತ ಸಮುದಾಯಕ್ಕೆ ಸೇರಿದ ಸುಧಾಕರ್ ಸಿಂಗ್ ಅವರಿಗೂ ಸ್ಥಾನ ಸಿಕ್ಕಿದೆ.

ಜೆಡಿಯು ತನ್ನ ಹಿಂದಿನ ಸಚಿವರನ್ನೇ ಉಳಿಸಿಕೊಂಡಿದೆ.

ಕಾಂಗ್ರೆಸ್‌ಗೆ ಎರಡು ಸ್ಥಾನ ಸಿಕ್ಕಿದ್ದು, ದಲಿತ ಮತ್ತು ಮುಸ್ಲಿಮರಿಗೆ ಪ್ರಾತಿನಿಧ್ಯ ಸಿಕ್ಕಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.