
ರೋಹಿಣಿ ಆಚಾರ್ಯ
ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳ (ಆರ್ಜೆಡಿ)-ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ಸೋತ ಬೆನ್ನಲ್ಲೇ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ಮತ್ತು ತೇಜಸ್ವಿ ಯಾದವ್ ಅವರ ಸಹೋದರಿ ರೋಹಿಣಿ ಆಚಾರ್ಯ ಅವರು ರಾಜಕೀಯ ಮತ್ತು ಕುಟುಂಬವನ್ನು ತ್ಯಜಿಸುತ್ತಿರುವುದಾಗಿ ಘೋಷಿಸಿದ್ದಾರೆ.
‘ನಾನು ರಾಜಕೀಯ ಮತ್ತು ನನ್ನ ಕುಟುಂಬವನ್ನು ತ್ಯಜಿಸುತ್ತಿದ್ದೇನೆ. ತೇಜಸ್ವಿ ಅವರ ಆಪ್ತರಾದ ಸಂಜಯ್ ಯಾದವ್ ಮತ್ತು ರಮೀಜ್ ಅವರು ನನ್ನನ್ನು ಕೇಳಿಕೊಂಡಿದ್ದು ಇದನ್ನೇ. ನಾನೇ ಎಲ್ಲಾ ಆಪಾದನೆಗಳನ್ನು ಹೊರುತ್ತಿದ್ದೇನೆ’ ಎಂದು ರೋಹಿಣಿ ಆಚಾರ್ಯ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಿಹಾರದ ರಾಜಕೀಯಕಣದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್– ಪ್ರಧಾನಿ ನರೇಂದ್ರ ಮೋದಿ (ನಿ–ಮೋ) ಜೋಡಿಯ ಸುನಾಮಿಯ ಅಲೆಗೆ ಎನ್ಡಿಎ ಮೈತ್ರಿಕೂಟವು ಪ್ರಚಂಡ ದಿಗ್ವಿಜಯ ಸಾಧಿಸಿದೆ. ವಿಪಕ್ಷ ನಾಯಕ ರಾಹುಲ್ ಗಾಂಧಿ– ತೇಜಸ್ವಿ ಯಾದವ್ ಜೋಡಿ ನೇತೃತ್ವದ ಮಹಾಮೈತ್ರಿಕೂಟ ತರಗೆಲೆಯಂತೆ ದೂಳೀಪಟಗೊಂಡಿದೆ.
ಮೋದಿ–ನಿತೀಶ್ ಜೋಡಿಯ ಪ್ರಭಾವಳಿಯ ನೆರವಿನಿಂದ ಮೈತ್ರಿಕೂಟವು 203 ಸ್ಥಾನಗಳನ್ನು ಗೆದ್ದು ಬೀಗಿದೆ. ಇತ್ತ ಮಹಾಘಟಬಂಧನ್ 34 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಷ್ಟೇ ಶಕ್ತವಾಗಿದೆ.
2010ರಲ್ಲಿ ನಿತೀಶ್– ಬಿಜೆಪಿಯ ಸುಶೀಲ್ ಕುಮಾರ್ ಜೋಡಿ ಮಾಡಿದ ಸಾಧನೆಯನ್ನು ಪುನರಾವರ್ತಿಸಿದೆ. ಕಳೆದ ಚುನಾವಣೆಯಲ್ಲಿ 12 ಸಾವಿರ ಮತಗಳ ಕಿರು ಅಂತರದಿಂದ ಸೋತ ಬಿಹಾರವನ್ನು ಈ ಸಲ ಗೆಲ್ಲಲೇಬೇಕೆಂಬ ಛಲದಿಂದ ಹೋರಾಡಿದ ಮಹಾಮೈತ್ರಿಯ ಮಹದಾಸೆ ಭಗ್ನಗೊಂಡಿದೆ.
ಎನ್ಡಿಎ–ಮಹಾಮೈತ್ರಿಯ ನೇರ ಸ್ಪರ್ಧೆಯ ಕಣದಲ್ಲಿ ತ್ರಿಕೋನ ಸ್ಪರ್ಧೆಯ ಭರವಸೆ ಮೂಡಿಸಿದ್ದ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷವು ನೀರಗುಳ್ಳೆಯಂತೆ ಒಡೆದು ಹೋಗಿದೆ. 10ನೇ ಬಾರಿಗೆ ಮುಖ್ಯಮಂತ್ರಿ ಗಾದಿಗೆ ಏರಲು ನಿತೀಶ್ ಅಣಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.