ADVERTISEMENT

Bihar Elections | ಮೊದಲ ಹಂತದ ಪ್ರಚಾರಕ್ಕೆ ತೆರೆ: ಕೊನೆಯ ದಿನ ಅಬ್ಬರದ ಪ್ರಚಾರ

ಪಿಟಿಐ
Published 4 ನವೆಂಬರ್ 2025, 15:30 IST
Last Updated 4 ನವೆಂಬರ್ 2025, 15:30 IST
<div class="paragraphs"><p>ಚುನಾವಣಾ ಕರ್ತವ್ಯಕ್ಕೆ ನಿಯೋಜಗೊಂಡಿರುವ ಸಿಬ್ಬಂದಿ ಪಟ್ನಾದ ಮಸ್ಟರಿಂಗ್‌ ಕೇಂದ್ರದಿಂದ ಅಗತ್ಯ ಸಾಮಗ್ರಿಗಳೊಂದಿಗೆ ಮಂಗಳವಾರ ಮತಗಟ್ಟೆಯತ್ತ ತೆರಳಿದರು </p></div>

ಚುನಾವಣಾ ಕರ್ತವ್ಯಕ್ಕೆ ನಿಯೋಜಗೊಂಡಿರುವ ಸಿಬ್ಬಂದಿ ಪಟ್ನಾದ ಮಸ್ಟರಿಂಗ್‌ ಕೇಂದ್ರದಿಂದ ಅಗತ್ಯ ಸಾಮಗ್ರಿಗಳೊಂದಿಗೆ ಮಂಗಳವಾರ ಮತಗಟ್ಟೆಯತ್ತ ತೆರಳಿದರು

   

–ಪಿಟಿಐ ಚಿತ್ರ

ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಮತದಾನ ನಡೆಯಲಿರುವ 121 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರ ಮಂಗಳವಾರ ಸಂಜೆ ಕೊನೆಗೊಂಡಿತು.

ADVERTISEMENT

ಆಡಳಿತಾರೂಢ ಎನ್‌ಡಿಎ ಮತ್ತು ವಿರೋಧ ಪಕ್ಷಗಳ ‘ಇಂಡಿಯಾ’ ಕೂಟದ ನಾಯಕರು ಕೊನೆಯ ದಿನ ಮತದಾರರನ್ನು ಸೆಳೆಯಲು ಬಿರುಸಿನ ಪ್ರಚಾರ ನಡೆಸಿದರು. ಮೊದಲ ಹಂತದ ಮತದಾನ ಗುರುವಾರ ನಡೆಯಲಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮೂರು ಪ‍್ರಚಾರ ರ್‍ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದರೆ, ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಐದು ಕಡೆ ಸಾರ್ವಜನಿಕ ಸಭೆಗಳನ್ನು ನಡೆಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ರೋಡ್ ಶೋನಲ್ಲಿ ಪಾಲ್ಗೊಂಡರು. ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಮೂರು ಪ್ರಚಾರ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಬಿಜೆಪಿಯ ಮಹಿಳಾ ಕಾರ್ಯಕರ್ತರೊಂದಿಗೆ ವರ್ಚುವಲ್ ಆಗಿ ಸಂವಾದ ನಡೆಸಿದರು. ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಹಲವು ರ‍್ಯಾಲಿಗಳಲ್ಲಿ ಪಾಲ್ಗೊಂಡು ಮತದಾರರನ್ನು ಸೆಳೆಯಲು ಅಂತಿಮ ಹಂತದ ಕಸರತ್ತು ನಡೆಸಿದರು.

ಕೊನೆಯ ದಿನದಂದು ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ನಾಯಕರಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ ಸೇರಿದ್ದಾರೆ.

243 ಸದಸ್ಯ ಬಲದ ವಿಧಾನಸಭೆಯ ಉಳಿದ 122 ಸ್ಥಾನಗಳಿಗೆ ನವೆಂಬರ್ 11ರಂದು ಮತದಾನ ನಡೆಯಲಿದ್ದು, ನವೆಂಬರ್ 14ರಂದು ಫಲಿತಾಂಶ ಹೊರಬೀಳಲಿದೆ.

ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಎಲ್ಲಾ ರೈತರಿಗೆ ಎಂಎಸ್‌ಪಿ ಮೇಲೆ ಹೆಚ್ಚುವರಿಯಾಗಿ ಪ್ರತಿ ಕ್ವಿಂಟಲ್ ಭತ್ತಕ್ಕೆ ₹300 ಮತ್ತು ಗೋಧಿಗೆ ₹400 ನೀಡಲಾಗುವುದು
ತೇಜಸ್ವಿ ಯಾದವ್ ಆರ್‌ಜೆಡಿ ನಾಯಕ‌
ಬಿಹಾರದ ಎನ್‌ಡಿಎ ಸರ್ಕಾರವು ಮಹಿಳೆಯರನ್ನು ಅಸಹಾಯಕತೆ ಮತ್ತು ಭಯದ ನೆರಳಿನಿಂದ ಹೊರಬರುವಂತೆ ಮಾಡಿದೆಯಲ್ಲದೆ ಅವರ ಸಬಲೀಕರಣಕ್ಕೆ ಹಾದಿ ಕಲ್ಪಿಸಿಕೊಟ್ಟಿದೆ
ಸ್ಮೃತಿ ಇರಾನಿ ಬಿಜೆಪಿ ನಾಯಕಿ
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ಒಂದೇ ಒಂದು ಭ್ರಷ್ಟಾಚಾರ ಪ್ರಕರಣವಿಲ್ಲ. ಎನ್‌ಡಿಎಯಿಂದ ಮಾತ್ರ ಬಿಹಾರದ ಅಭಿವೃದ್ಧಿ ಸಾಧ್ಯವಾಗಲಿದೆ
ರಾಜನಾಥ ಸಿಂಗ್ ರಕ್ಷಣಾ ಸಚಿವ

ಸರ್ವತೋಮುಖ ಅಭಿವೃದ್ಧಿ:ಶಾ ಭರವಸೆ

ದರ್ಭಂಗಾ: ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೇರಿದರೆ ಬಿಹಾರದ ಸರ್ವತೋಮುಖ ಅಭಿವೃದ್ಧಿಗೆ ಕೆಲಸ ಮಾಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದರು. ‘ಆರ್‌ಜೆಡಿಯ 15 ವರ್ಷಗಳ ಆಳ್ವಿಕೆಯಲ್ಲಿ ಬಿಹಾರವನ್ನು ಧ್ವಂಸಗೊಳಿಸಿದ ‘ಜಂಗಲ್‌ರಾಜ್’ ಮರುಕಳಿಸುವುದನ್ನು ತಡೆಯಲು ‘ಕಮಲ’ದ ಚಿಹ್ನೆಯ ಬಟನ್‌ ಒತ್ತಿ’ ಎಂದು ದರ್ಭಂಗಾ ಮತ್ತು ಮೋತಿಹಾರಿಯಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಮನವಿ ಮಾಡಿದರು. ‘ಮತದಾನ ದಿನವಾದ ನವೆಂಬರ್ 6ರಂದು ನೀವು ತಪ್ಪು ಮಾಡಿದರೆ ಬಿಹಾರದಲ್ಲಿ ಕೊಲೆ ಲೂಟಿ ಅಪಹರಣ ಮತ್ತು ಸುಲಿಗೆ ಪ್ರಕರಣಗಳು ಮತ್ತೆ ಸಾಮಾನ್ಯವಾಗಿ ಬಿಡುತ್ತವೆ’ ಎಂದು ಹೇಳಿದರು. ‘ಎನ್‌ಡಿಎ ಅಧಿಕಾರಕ್ಕೆ ಬಂದರೆ ಕೋಸೀ ನದಿ ನೀರನ್ನು ನೀರಾವರಿಗೆ ಬಳಸಿ ಪ್ರವಾಹ ತಡೆಗಟ್ಟುವ ಯೋಜನೆಗೆ ₹26 ಸಾವಿರ ಕೋಟಿ ಖರ್ಚು ಮಾಡಲಾಗುವುದು’ ಎಂದರು.

‘ರೀಲ್ಸ್’ ಚಟ ಹತ್ತಿಸಿದ ಮೋದಿ: ರಾಹುಲ್

ಔರಂಗಾಬಾದ್: ಶಿಕ್ಷಣ ಆರೋಗ್ಯ ಮತ್ತು ನಿರುದ್ಯೋಗ ಸಮಸ್ಯೆಗಳ ಬಗ್ಗೆ ಯುವಜನರು ಮಾತನಾಡಬಾರದು ಎಂಬ ಕಾರಣದಿಂದ ಅವರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ಸ್ ಮಾಡುವ ಚಟವನ್ನು ಪ್ರಧಾನಿ ನರೇಂದ್ರ ಮೋದಿ ಹತ್ತಿಸಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟೀಕಿಸಿದರು. ಔರಂಗಾಬಾದ್‌ ಜಿಲ್ಲೆಯಲ್ಲಿ ಮಂಗಳವಾರ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು ‘ನೀವು (ಯುವಜನರು) ಇನ್‌ಸ್ಟಾಗ್ರಾಂ ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ಸ್‌ ಮಾಡುವುದರಲ್ಲಿ ನಿರತರಾಗಬೇಕು ಎಂದು ಪ್ರಧಾನಿ ಬಯಸುತ್ತಾರೆ. ಶಿಕ್ಷಣ ಆರೋಗ್ಯ ಹಾಗೂ ನಿರುದ್ಯೋಗ ಸಮಸ್ಯೆಗಳ ಬಗ್ಗೆ ನೀವು ಮಾತನಾಡಬಾರದು. ಈ ವಿಚಾರದಲ್ಲಿ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಬಾರದು ಎಂಬುದು ಇದರ ಉದ್ದೇಶ’ ಎಂದು ಹೇಳಿದರು. ‘ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರು ಬಿಹಾರದಲ್ಲಿ ಮತ ಕಳ್ಳತನದಲ್ಲಿ ತೊಡಗಿದ್ದಾರೆ. ಏಕೆಂದರೆ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಗೆಲ್ಲುವುದಿಲ್ಲ ಎಂಬುದು ಅವರಿಗೆ ಖಚಿತವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.