ADVERTISEMENT

ಚೆನ್ನೈ: ರಾಮಮಂದಿರ ನಿರ್ಮಾಣಕ್ಕೆ ಒಂದು ಲಕ್ಷ ದೇಣಿಗೆ ನೀಡಿದ ಮುಸ್ಲಿಂ ಉದ್ಯಮಿ

ಪಿಟಿಐ
Published 16 ಫೆಬ್ರುವರಿ 2021, 6:42 IST
Last Updated 16 ಫೆಬ್ರುವರಿ 2021, 6:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚೆನ್ನೈ: ಉತ್ತರ ಪ್ರದೇಶದಲ್ಲಿ ದೇಗುಲ ನಿರ್ಮಾಣಕ್ಕೆ ತಮಿಳುನಾಡಿನ ಭಕ್ತರಿಂದ ಸ್ವಯಂಪ್ರೇರಿತ ಕೊಡುಗೆ ಹೆಚ್ಚುತ್ತಿರುವ ಬೆನ್ನಲ್ಲೇ ಕೋಮು ಸೌಹಾರ್ದತೆಯನ್ನು ಗುರಿಯಾಗಿಟ್ಟುಕೊಂಡು, ನಗರದ ಮುಸ್ಲಿಂ ಉದ್ಯಮಿಯೊಬ್ಬರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.

ಭವ್ಯವಾದ ರಾಮ ಮಂದಿರ ನಿರ್ಮಾಣಕ್ಕೆ ಸಹಾಯ ಮಾಡುವವರಲ್ಲಿ ದೈನಂದಿನ ವೇತನ ಪಡೆಯುವವರು, ಚಮ್ಮಾರರು ಮತ್ತು ಸಣ್ಣ ವ್ಯಾಪಾರಿಗಳು ಸೇರಿದ್ದಾರೆ.

'ದೇವಾಲಯ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರವು ಸ್ಥಾಪಿಸಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ (ಎಸ್‌ಆರ್‌ಜೆಟಿಕೆ) ಟ್ರಸ್ಟ್‌ 10, 100 ಮತ್ತು 1,000 ರೂ.ಗಳ ದೇಣಿಗೆ ಕೂಪನ್‌ಗಳೊಂದಿಗೆ ಜನರ ಮುಂದೆ ಬರುತ್ತಿದ್ದು, ಹೆಚ್ಚಿನ ಸಂಖ್ಯೆಯ ಜನರು ದೇಣಿಗೆ ನೀಡಲು ಮುಂದಾಗಿದ್ದಾರೆ' ಎಂದು ದೇವಾಲಯಕ್ಕೆ ಹಣ ಸಂಗ್ರಹಿಸುವಲ್ಲಿ ತೊಡಗಿರುವ ರಾಜ್ಯದ ವಿಎಚ್‌ಪಿ ಸಂಘಟನಾ ಕಾರ್ಯದರ್ಶಿ ಎಸ್‌.ವಿ. ಶ್ರೀನಿವಾಸನ್ ಹೇಳಿದ್ದಾರೆ.

ADVERTISEMENT

'ನಾವು ಸಂಪರ್ಕಿಸಿದವರೆಲ್ಲರೂ ಉದಾತ್ತ ಉದ್ದೇಶಕ್ಕಾಗಿ ದಾನ ಮಾಡುವಲ್ಲಿ ಉದಾರರಾಗಿದ್ದಾರೆ. ಹಿಂದೂ ಮುನ್ನಾಣಿ ಸಂಘಟನೆಯ ಸದಸ್ಯರು, ಎಸ್‌ಆರ್‌ಜೆಟಿಕೆ ಸ್ವಯಂಸೇವಕರೊಂದಿಗೆ ಅವರನ್ನು ಸಂಪರ್ಕಿಸಿದಾಗ, ಡಬ್ಲ್ಯೂ.ಎಸ್. ಹಬೀಬ್ ₹ 1,00,008 ಗಳ ಚೆಕ್ ಅನ್ನು ಉಡುಗೊರೆಯಾಗಿ ನೀಡಿದರು' ಎಂದು ತಿಳಿಸಿದ್ದಾರೆ.

'ನಾನು ಮುಸ್ಲಿಮರು ಮತ್ತು ಹಿಂದೂಗಳ ನಡುವೆ ಕೋಮು ಸೌಹಾರ್ದತೆಯನ್ನು ಬೆಳೆಸಲು ಬಯಸುತ್ತೇನೆ. ನಾವೆಲ್ಲರೂ ದೇವರ ಮಕ್ಕಳು. ಈ ನಂಬಿಕೆಯೊಂದಿಗೆ ನಾನು ಈ ಮೊತ್ತವನ್ನು ದಾನ ಮಾಡಿದ್ದೇನೆ'. ಕೆಲವು ಕಡೆಗಳಿಂದ ಮುಸ್ಲಿಮರನ್ನು ಹಿಂದೂ ವಿರೋಧಿ ಅಥವಾ ಭಾರತ ವಿರೋಧಿ ಎಂದು ಚಿತ್ರಿಸುವುದನ್ನು ನೋಡಿ ನೋವು ಅನುಭವಿಸಿದ್ದೇನೆ ಎಂದು ಪ್ರಾಪರ್ಟಿ ಡೆವಲಪರ್‌ ಹಬೀಬ್ ಪಿಟಿಐಗೆ ತಿಳಿಸಿದ್ದಾರೆ.

ಒಳ್ಳೆಯ ಕಾರಣಕ್ಕಾಗಿ ದಾನ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎನ್ನುವ ಹಬೀಬ್, "ನಾನು ಬೇರೆ ಯಾವುದೇ ದೇವಸ್ಥಾನಕ್ಕೆ ದಾನ ಮಾಡುತ್ತಿರಲಿಲ್ಲ ಆದರೆ ದಶಕಗಳಷ್ಟು ಹಳೆಯದಾದ ಅಯೋಧ್ಯೆ ವಿವಾದ ಕೊನೆಗೊಂಡಿರುವ ರಾಮ ಮಂದಿರ ನಿರ್ಮಾಣವು ವಿಭಿನ್ನ ವಿಚಾರವಾಗಿದೆ" ಎಂದರು.

ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಿಸಲು ರಾಜ್ಯದ ವಿವಿಧ ಭಾಗಗಳಲ್ಲಿ ರಸ್ತೆ ಪ್ರದರ್ಶನಗಳನ್ನು ನಡೆಸಲಾಗುತ್ತಿದೆ ಎಂದು ಹಣ ಸಂಗ್ರಹ ಅಭಿಯಾನದಲ್ಲಿ ಭಾಗಿಯಾಗಿರುವ ಹಿಂದೂ ಮುನ್ನಾಣಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.