ADVERTISEMENT

ವಿಶ್ವಾಸ ಮತಯಾಚನೆ ಹಿನ್ನೆಲೆ: ಭೋಪಾಲ್‌ಗೆ ಬಂದಿಳಿದ ಕಾಂಗ್ರೆಸ್ ಶಾಸಕರು

ಪಿಟಿಐ
Published 15 ಮಾರ್ಚ್ 2020, 6:08 IST
Last Updated 15 ಮಾರ್ಚ್ 2020, 6:08 IST
ಜೈಪುರದಿಂದ ಭೋಪಾಲ್‌ಗೆ ಬಂದಿಳಿದ ಕಾಂಗ್ರೆಸ್ ಶಾಸಕರು
ಜೈಪುರದಿಂದ ಭೋಪಾಲ್‌ಗೆ ಬಂದಿಳಿದ ಕಾಂಗ್ರೆಸ್ ಶಾಸಕರು   

ಜೈಪುರ: ಮಧ್ಯ ಪ್ರದೇಶದ ರಾಜ್ಯಪಾಲರು ಮುಖ್ಯಮಂತ್ರಿ ಕಮಲ್‌ನಾಥ್ ಅವರಿಗೆ ಬಹುಮತ ಸಾಬೀತುಪಡಿಸುವಂತೆ ನಿರ್ದೇಶನ ನೀಡಿರುವ ಬೆನ್ನಲ್ಲೇ ಇಲ್ಲಿನ ಎರಡು ರೆಸಾರ್ಟ್‌ನಲ್ಲಿ ತಂಗಿದ್ದ ಕಾಂಗ್ರೆಸ್ ಶಾಸಕರು ಭಾನುವಾರ ಮುಂಜಾನೆ ಭೋಪಾಲ್‌ಗೆ ಮರಳಿದ್ದಾರೆ.

ಸುಮಾರು 90 ಕಾಂಗ್ರೆಸ್ ಶಾಸಕರು ಜೈಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ವಿಮಾನದಲ್ಲಿ ಭೋಪಾಲ್‌ಗೆ ಹಿಂತಿರುಗಿದ್ದಾರೆ.

ಜೈಪುರ ವಿಮಾನನಿಲ್ದಾಣದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರೊಬ್ಬರು, ವಿಶ್ವಾಸಮತ ಯಾಚನೆಯಲ್ಲಿ ನಾವು ಬಹುಮತ ಸಾಬೀತುಪಡಿಸುತ್ತೇವೆ. ಕಮಲ್‌ನಾಥ್ ನೇತೃತ್ವದ ಸರ್ಕಾರವು ಐದು ವರ್ಷಗಳನ್ನು ಪೂರೈಸಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ಮಾಜಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ನಂತರ ಮಧ್ಯಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದ್ದು, ಬುಧವಾರ ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿತ್ತು. ಜೈಪುರ - ದೆಹಲಿ ಹೆದ್ದಾರಿಯಲ್ಲಿರುವ ಎರಡು ಐಷಾರಾಮಿ ರೆಸಾರ್ಟ್‌ಗಳಲ್ಲಿ ತಂಗಿದ್ದರು.

ಕಾಂಗ್ರೆಸ್ ಶಾಸಕರ ತಂಡದ ನೇತೃತ್ವ ವಹಿಸಿರುವ ಕಾಂಗ್ರೆಸ್ ನಾಯಕ ಹರೀಶ್ ರಾವತ್ ಸುದ್ದಿಗಾರರೊಂದಿಗೆ ಮಾತನಾಡಿ, ನಾಳೆ ನಾವು ವಿಶ್ವಾಸ ಮತಯಾಚನೆಗೆ ಸಿದ್ಧರಿದ್ದೇವೆ ಮತ್ತು ಜಯ ಸಾಧಿಸುವ ವಿಶ್ವಾಸವಿದೆ. ಬೆಂಗಳೂರಿನಲ್ಲಿರುವ ರೆಬೆಲ್ ಶಾಸಕರು ಕೂಡ ನಮ್ಮ ಸಂಪರ್ಕದಲ್ಲಿದ್ದಾರೆ. ನಮಗೇನು ಭಯವಿಲ್ಲ, ಆದರೆ ಬಿಜೆಪಿಗೆ ಮತ್ತು ಬಿಜೆಪಿ ಸಂಪರ್ಕದಲ್ಲಿರುವ ಶಾಸಕರಿಗೆ ಭಯವಿದೆ ಎಂದು ತಿಳಿಸಿದ್ದಾರೆ.

ಈಮಧ್ಯೆ, ಕಾಂಗ್ರೆಸ್ ಶಾಸಕರ ಆಗಮನಕ್ಕೆ ಮುಂಚಿತವಾಗಿ ಭೋಪಾಲ್ ವಿಮಾನ ನಿಲ್ದಾಣದ ಸುತ್ತಮುತ್ತ ಸೆಕ್ಷನ್ 144 ಅನ್ನು ವಿಧಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಬಿಗಿ ಭದ್ರತೆಯನ್ನೂ ಹೆಚ್ಚಿಸಲಾಗಿದೆ.

ಮಾರ್ಚ್ 16 ರಂದು (ರಾಜ್ಯಪಾಲರು) ಭಾಷಣ ಮಾಡಿದ ನಂತರ ವಿಧಾನಸಭೆಯಲ್ಲಿ ವಿಶ್ವಾಸಾರ್ಹ ಮತಯಾಚಿಸುವಂತೆ ಮಧ್ಯಪ್ರದೇಶದ ರಾಜ್ಯಪಾಲ ಲಾಲ್‌ಜಿ ಟಂಡನ್ ಅವರು ಮುಖ್ಯಮಂತ್ರಿ ಕಮಲ್‌ನಾಥ್ ಅವರಿಗೆ ಶನಿವಾರ ತಡರಾತ್ರಿ ನಿರ್ದೇಶನ ನೀಡಿದ್ದಾರೆ.ಈ ಕುರಿತಾಗಿ ರಾಜ್ಯಪಾಲರ ಪತ್ರವು ಮುಖ್ಯಮಂತ್ರಿಗೆ ತಲುಪಿದೆ ಎಂದು ರಾಜಭವನದ ಮೂಲಗಳು ಪಿಟಿಐಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.