ಸಂದೀಪ್ ದೀಕ್ಷಿತ್
– ಎಕ್ಸ್ ಚಿತ್ರ (@_SandeepDikshit)
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸುತ್ತಿರುವ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಪುತ್ರ ಸಂದೀಪ್ ದೀಕ್ಷಿತ್ ಆಮ್ ಆದ್ಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಷ್ಟ್ರರಾಜಧಾನಿಯಲ್ಲಿ ಗಾಳಿ ಹಾಗೂ ನೀರಿನ ಮಾಲಿನ್ಯಕ್ಕೆ ಎಎಪಿ ಸರ್ಕಾರವೇ ಕಾರಣ, 10 ವರ್ಷ ಅಧಿಕಾರದಲ್ಲಿ ಇದ್ದರೂ ಏನೂ ಮಾಡಲಿಲ್ಲ ಎಂದು ದೂರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿ ದೆಹಲಿ ಸಾರಿಗೆ ನಿಗಮದಲ್ಲಿ (ಡಿಟಿಸಿ) ಸುಮಾರು 5,500 ಬಸ್ಗಳಿದ್ದವು. ಈಗ ಅದು 3 ಸಾವಿರಕ್ಕೆ ಇಳಿಕೆಯಾಗಿದೆ ಎಂದು ಹೇಳಿದ್ದಾರೆ.
‘2013ರಲ್ಲಿ ಡಿಟಿಸಿ ಬಸ್ಗಳಲ್ಲಿ ಸುಮಾರು 43 ಲಕ್ಷ ಜನ ಪ್ರಯಾಣಿಸುತ್ತಿದ್ದರು, ಈಗ ಅದರ ಸಂಖ್ಯೆ 41ಲಕ್ಷಕ್ಕೆ ಇಳಿಕೆಯಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಹೋಲಿಸಿದರೆ ಪ್ರಯಾಣಿರ ಸಂಖ್ಯೆ 60–65 ಲಕ್ಷಕ್ಕೆ ಏರಿಕೆಯಾಗಬೇಕಿತ್ತು. ಆದರೆ ಇದೀಗ ಪ್ರಯಾಣಿಕರ ಸಂಖ್ಯೆ 41 ಲಕ್ಷಕ್ಕೆ ಕುಸಿದಿದೆ. 20–25 ಲಕ್ಷ ಮಂದಿ ಸ್ವಂತ ವಾಹನ ಬಳಕೆ ಮಾಡುತ್ತಿದ್ದಾರೆ. ಇದರಿಂದ ಗಾಳಿ ಮಾಲಿನ್ಯ ಹೆಚ್ಚಾಗಿದೆ’ ಎಂದು ಅವರು ದೂಷಿಸಿದ್ದಾರೆ.
‘ದೆಹಲಿಯ ಕೊಳಚೆ ನೀರು ನಿರ್ವಹಣಾ ಸಾಮರ್ಥ್ಯ ಶೇ 50ರಷ್ಟು ಹೆಚ್ಚಳವಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಆದರೆ ಅವರು ಹೇಳಿದಷ್ಟು ಹೆಚ್ಚಳವಾಗಿಲ್ಲ’ ಎಂದು ಅಂಕಿ ಅಂಶಗಳನ್ನು ಮುಂದಿಟ್ಟಿದ್ದಾರೆ.
‘ದೆಹಲಿಯಲ್ಲಿ ಗಾಳಿ ಹಾಗೂ ನೀರು ವಿಷಪೂರಿತವಾಗಲು ಎಎಪಿ ಸರ್ಕಾರದ ತಪ್ಪು ನಿರ್ವಹಣೆ ಮತ್ತು ಅಪ್ರಾಮಾಣಿಕತೆಯೇ ಕಾರಣ. ಸರ್ಕಾರದ ಅಸಮರ್ಥತೆಯಿಂದಾಗಿ ರಾಜಧಾನಿಯಲ್ಲಿ ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿಸಲು ಆಗಲಿಲ್ಲ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.