ADVERTISEMENT

2030ರ ವೇಳೆಗೆ ಬೆಂಗಳೂರಿನಲ್ಲಿ ಕುಡಿಯಲು ನೀರೇ ಸಿಗುವುದಿಲ್ಲ-ನೀತಿ ಆಯೋಗ

ರಾಷ್ಟ್ರದ 21ನಗರಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತ-ನೀತಿ ಆಯೋಗದಿಂದ ಕೇಂದ್ರಕ್ಕೆ ವರದಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 2:23 IST
Last Updated 20 ಜೂನ್ 2019, 2:23 IST
   

ನವದೆಹಲಿ: ರಾಷ್ಟ್ರದ 21 ಪ್ರಮುಖ ನಗರಗಳಲ್ಲಿ 2030ರ ವೇಳೆಗೆ ಅಂತರ್ಜಲ ಮಟ್ಟ ಸಂಪೂರ್ಣ ಕುಸಿಯುವುದಲ್ಲದೆ, ಈ ನಗರಗಳಲ್ಲಿ ಕುಡಿಯುವ ನೀರು ಸೇರಿದಂತೆ ಇನ್ನಿತರ ಕೆಲಸಗಳಿಗಾಗಿ ನೀರೇ ಇಲ್ಲದಂತಾಗುತ್ತದೆ ಎಂದು ನೀತಿ ಆಯೋಗ ವರದಿ ಮಾಡಿದೆ.
ಬೆಂಗಳೂರು, ದೆಹಲಿ, ಚೆನ್ನೈ ಹಾಗೂ ಹೈದರಾಬಾದ್ ನಗರಗಳೂ ಸೇರಿದಂತೆ ದೇಶದ 21 ನಗರಗಳಲ್ಲಿ 2020ರ ವೇಳೆಗೆ ಅಂತರ್ಜಲ ಮಟ್ಟ ಸಂಪೂರ್ಣ ಕುಸಿಯುವುದಲ್ಲದೆ, ಹೆಚ್ಚಿದ ಜನಸಂಖ್ಯೆಗೆ ಅನುಗುಣವಾಗಿ ನೀರು ಪೂರೈಕೆ ಕಷ್ಟಕರವಾಗುತ್ತದೆ ಎಂದು ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ತಿಳಿಸಲಾಗಿದೆ.

ಈಗಿನಿಂದಲೇ ನೀರಿನ ಸಂರಕ್ಷಣೆ ಮಾಡದಿದ್ದರೆ, ಭಾರತದ ಜನಸಂಖ್ಯೆಯಲ್ಲಿ ಶೇ.40ರಷ್ಟು ಮಂದಿಗೆ ನೀರು ಸಿಗದೆ ತೀವ್ರ ಸಮಸ್ಯೆ ಎದುರಿಸಬೇಕಾಗುತ್ತದೆ. 2020ರಿಂದಲೇ ಈ ಸಮಸ್ಯೆಕಾಡಲು ಆರಂಭಿಸುತ್ತದೆ. ಇದಕ್ಕಾಗಿ ಈಗಿನಿಂದಲೇ ಕುಡಿಯುವ ನೀರು ಪೂರೈಕೆಗೆ ಅಂತರ್ಜಲ ಮಟ್ಟ ಹೆಚ್ಚಳ ಹಾಗೂ ಮಳೆನೀರು ಕೊಯ್ಲು ಸೇರಿದಂತೆ ನೀರಿನ ಅತಿಯಾದ ಬಳಕೆಯನ್ನು ತಡೆಗಟ್ಟಬೇಕು ಎಂದು ಎಚ್ಚರಿಸಲಾಗಿದೆ.

ಚೆನ್ನೈನಲ್ಲಿ ಈಗಾಗಲೇ ಮೂರು ನದಿಗಳು, ನಾಲ್ಕು ಕಟ್ಟೆಗಳು, ಐದು ನೀರಾವರಿ ಪ್ರದೇಶಗಳು, ಆರು ಅರಣ್ಯಪ್ರದೇಶಗಳಲ್ಲಿ ನೀರಿಲ್ಲದೆ ಭೂಮಿ ಬತ್ತಿಹೋಗಿದ್ದು, ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಉಳಿದ 20 ನಗರಗಳಲ್ಲಿ ಮುಂಗಾರು ಮಳೆ ಬಿದ್ದ ಪರಿಣಾಮ ಅಲ್ಪಮಟ್ಟಿನ ಅಂತರ್ಜಲ ಮಟ್ಟ ಏರಿಕೆ ಕಂಡಿದೆ ಎಂದು ತಿಳಿಸಲಾಗಿದೆ.

ADVERTISEMENT

ಸಮುದ್ರ ನೀರಿನ ಪರಿವರ್ತನೆ ಮಾಡಿ ಮಾನವನ ಅಗತ್ಯಕ್ಕೆ ಬಳಸಿಕೊಳ್ಳುವುದು ಅಧಿಕ ವೆಚ್ಚದಾಯಕ ಹಾಗೂ ಅಪಾಯಕಾರಿ ಕೂಡ. ಸಮುದ್ರದ ನೀರನ್ನೇ ಮರು ಬಳಕೆ ಮಾಡುವುದರಿಂದ ಸಮುದ್ರದಲ್ಲಿಯೂ ನೀರಿನ ಮಟ್ಟ ಕುಸಿಯಲೂ ಬಹುದು. ಇದರಿಂದಾಗಿ ಮುಂದಿನ ಪೀಳಿಗೆಗೆ ಈಗಿನಿಂದಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದೆ. ಇದಕ್ಕಾಗಿ ಸರ್ಕಾರಗಳ ಜೊತೆಗೆ ದೇಶದ ಜನರೂ ಕೂಡ ನೀರಿನ ಸಂರಕ್ಷಣೆ ಹಾಗೂ ಅನಗತ್ಯ ನೀರಿನ ಪೋಲಾಗುವುದನ್ನು ತಡೆಗಟ್ಟಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.