ADVERTISEMENT

ವಿಂಗ್ ಕಮಾಂಡರ್ ಅಭಿನಂದನ್‌ ಸ್ವಾಗತಕ್ಕೆ ವಾಘಾ ಗಡಿಯಲ್ಲಿ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2019, 6:42 IST
Last Updated 1 ಮಾರ್ಚ್ 2019, 6:42 IST
   

ವಾಘಾ:ಸೆರೆಸಿಕ್ಕಿದ್ದ ಭಾರತೀಯ ವಾಯುಪಡೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರನ್ನು ಶುಕ್ರವಾರ ವಾಪಸ್‌ ಕಳುಹಿಸಲು ಪಾಕಿಸ್ತಾನ ಒಪ್ಪಿಕೊಂಡಿದ್ದು,ವಾಯುಪಡೆಯ ನಿಯೋಗವು ವಾಘಾ ಗಡಿಯಲ್ಲಿ ಅಭಿನಂದನ್‌ ಅವರನ್ನು ಸ್ವಾಗತಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಹಾಗೂ ನೌಶೆರಾ ಪ್ರದೇಶಗಳಲ್ಲಿನ ಭಾರತದ ವಾಯು ವಲಯ ದಾಟಿ ಬುಧವಾರ ಒಳನುಸುಳಿದ್ದ ಪಾಕಿಸ್ತಾನ ಯುದ್ಧ ವಿಮಾನಗಳನ್ನು ದೇಶದ ಯುದ್ಧ ವಿಮಾನಗಳು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದವು. ಇದೇ ಕಾರ್ಯಾಚರಣೆಯಲ್ಲಿ ಭಾರತದ ಒಂದು ಮಿಗ್‌ 21 ಯುದ್ಧ ವಿಮಾನ ಪತನಗೊಂಡಿತ್ತು. ಅದರ ಫೈಲಟ್‌ ಅಭಿನಂದನ್‌ ಪಾಕ್‌ ಗಡಿಯಲ್ಲಿ ಇಳಿದಿದ್ದರು. ಬಳಿಕ ಅವರನ್ನು ಪಾಕ್‌ ಸೇನೆ ವಶಕ್ಕೆ ಪಡೆದಿತ್ತು.

ಬುಧವಾರದಿಂದಲೂ ನೆರೆ ರಾಷ್ಟ್ರದ ವಶದಲ್ಲೇ ಇರುವ ಅಭಿನಂದನ್‌ರನ್ನು ಕೂಡಲೇ ಸುರಕ್ಷಿತವಾಗಿ ವಾಪಸ್‌ ಕಳುಹಿಸಿಕೊಡಬೇಕು ಎಂದು ಭಾರತ ಆಗ್ರಹಿಸಿತ್ತು. ಈ ಸಂಬಂಧ ಪ್ರತಿಕ್ರಿಯಿಸಿದ್ದ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್, ‘ಶಾಂತಿಯ ಸಂಕೇತವಾಗಿ ಶುಕ್ರವಾರ ವಿಂಗ್‌ ಕಮಾಂಡರ್‌ನ್ನು ವಾಪಸ್‌ ಕಳುಹಿಸಲಾಗುವುದು’ ಎಂದು ಸಂಸತ್‌ನಲ್ಲಿ ಗುರುವಾರ ಘೋಷಿಸಿದ್ದರು.

ADVERTISEMENT

ಶುಕ್ರವಾರ ಸಂಜೆಗೆ ವಾಘಾ ಗಡಿ ತಲುಪಲಿರುವಕಮಾಂಡರ್‌ನ್ನುವಾಯುಪಡೆಯ ನಿಯೋಗವು ಬರಮಾಡಿಕೊಳ್ಳಲಿದೆ. ಆದರೆ ಪಾಕ್‌ ಸೇನೆ ಅಭಿನಂದನ್‌ರನ್ನು ಅಂತರರಾಷ್ಟ್ರೀಯ ರೆಡ್‌ಕ್ರಾಸ್‌ ಸಮಿತಿ ಸದಸ್ಯರಿಗೆ ಒಪ್ಪಿಸಲಿದೆಯೇ ಅಥವಾ ಭಾರತದ ಅಧಿಕಾರಿಗಳಿಗೆ ಒಪ್ಪಿಸಲಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ತಿಳಿಯಲಾಗಿದೆ.

‘ಗಡಿನಿಯಂತ್ರಣ ರೇಖೆಯ ಬಳಿ ಇಳಿದು ಪಾಕಿಸ್ತಾನ ವಶದಲ್ಲಿರುವ ನಮ್ಮ ಪೈಲಟ್‌ನ್ನು ಬಿಡುಗಡೆಗೊಳಿಸುತ್ತಿರುವುದರಿಂದ ನಮಗೆ ಖುಷಿಯಾಗಿದೆ. ಅವರರನ್ನು ವಾಪಸ್‌ ಬರಮಾಡಿಕೊಳ್ಳುತ್ತಿರುವುದರಿಂದ ಅತೀವ ಸಂತಸವಾಗುತ್ತಿದೆ. ಜಿನಿವಾ ಒಪ್ಪಂದದ ಭಾಗವಾಗಿ ಇದು ಸಾಧ್ಯವಾಗುತ್ತಿದೆ’ ಎಂದು ವಾಯುಪಡೆಯ ಹಿರಿಯ ಅಧಿಕಾರಿ ಆರ್‌.ಜಿ.ಕೆ. ಕಪೂರ್‌ ಹೇಳಿಕೊಂಡಿದ್ದಾರೆ.

ಏತನ್ಮಧ್ಯೆ, ಅಭಿನಂದನ್‌ರನ್ನು ಅತ್ತಾರಿ ಗಡಿ ಪ್ರದೇಶದಲ್ಲಿ ಸ್ವಾಗತಿಸಲು ಅವಕಾಶ ಮಾಡಿಕೊಡುವುದಾಗಿ ಪಂಜಾಬ್‌ ಮುಖ್ಯಮಂತ್ರಿ ಅಮರಿಂಧರ್‌ ಸಿಂಗ್‌ ಹೇಳಿದ್ದಾರೆ. ಈ ಬಗ್ಗೆ ಪ್ರಧಾನಮಂತ್ರಿನರೇಂದ್ರ ಮೋದಿ ಅವರಿಗೆಟ್ಚಿಟರ್‌ನಲ್ಲಿ ಮನವಿ ಮಾಡಿದ್ದಾರೆ.

ಜೈಷ್‌–ಎ–ಮೊಹಮ್ಮದ್‌(ಜೆಎಎಂ) ಉಗ್ರ ಸಂಘಟನೆಯು ಫೆಬ್ರುವರಿ 14ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರನ್ನು ಗುರಿಯಾಗಿರಿಸಿ ಆತ್ಯಹತ್ಯಾ ದಾಳಿ ಸಂಘಟಿಸಿತ್ತು. ದಾಳಿಯಿಂದಾಗಿ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ಹೀಗಾಗಿ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದ ಭಾರತ, ಪುಲ್ವಾಮಾ ದಾಳಿಯಾದ 12 ದಿನಗಳ ಬಳಿಕಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಜೆಎಎಂ ತರಬೇತಿ ಶಿಬಿರದ ಮೇಲೆ ವಾಯುದಾಳಿ ನಡೆಸಿತ್ತು. ಸುಮಾರು 300ಕ್ಕೂ ಹೆಚ್ಚು ಉಗ್ರರು ಹತರಾಗಿದ್ದರು.

ಇದಾದ ಬಳಿಕ ಎರಡೂ ರಾಷ್ಟ್ರಗಳ ನಡುವಣ ವಿಷಮ ಸ್ಥಿತಿ ನಿರ್ಮಾಣವಾಗಿ ಯುದ್ಧ ಭೀತಿ ಆರಂಭವಾಗಿತ್ತು.

ಇನ್ನಷ್ಟು ಓದು
*ಅಭಿನಂದನ್‌ ಕರೆತನ್ನಿ: ಕಾಳಜಿಯ ಕರೆ
*ವಿಂಗ್ ಕಮಾಂಡರ್ ಅಭಿನಂದನ್‌ ಪಾಕ್ ಸೈನಿಕರ ವಶಕ್ಕೆ ಸಿಗುವ ಮುನ್ನಾ...
*ಪಾಕಿಸ್ತಾನದ ವಶದಲ್ಲಿ ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌? ವಿಡಿಯೊ ಬಿಡುಗಡೆ
*ಉಗ್ರ ಮಸೂದ್ ನಿಷೇಧಕ್ಕೆ ಮತ್ತೊಮ್ಮೆ ಪ್ರಸ್ತಾವ​
*ಯಡಿಯೂರಪ್ಪ ಹೇಳಿಕೆಯನ್ನು ರಿಟ್ವೀಟ್ ಮಾಡಿ ವ್ಯಂಗ್ಯವಾಡಿದಪಾಕ್‌ ಪ್ರಧಾನಿಯ ಪಕ್ಷ​
*ಯಡಿಯೂರಪ್ಪ ಹೇಳಿಕೆಗೆ ಕುಮಾರಸ್ವಾಮಿ, ಸಿದ್ದರಾಮಯ್ಯ ಖಂಡನೆ​
*ಸೈನಿಕರ ರಕ್ತದ ಮೇಲೆ ಬಿಎಸ್‌ವೈ ರಾಜಕೀಯ: ದಿನೇಶ್‌ ಗುಂಡೂರಾವ್​
*ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ: ಯಡಿಯೂರಪ್ಪ ಸ್ಪಷ್ಟನೆ​
*ಪೈಲಟ್‌ ಅಭಿನಂದನ್‌ ವಿಡಿಯೊ ಲಿಂಕ್ ತೆಗೆಯುವಂತೆ ಯುಟ್ಯೂಬ್‌ಗೆ ಐಟಿ ಸಚಿವಾಲಯ ಆಗ್ರಹ​
*ವಾಯುದಾಳಿಯು ಕರ್ನಾಟಕದಲ್ಲಿ 22 ಸ್ಥಾನಗಳನ್ನು ಗೆಲ್ಲಲು ನೆರವಾಗಲಿದೆ: ಯಡಿಯೂರಪ್ಪ​
*ನೀವು ನಿದ್ರೆ ಮಾಡ್ತೀರೋ ಇಲ್ವೋ; ಅಭಿನಂದನ್ ಅವರನ್ನು ಕರೆತನ್ನಿ: ನಟಿ ರಮ್ಯಾ
*ಧೀರರ ಕುಟುಂಬ: ವಿಂಗ್ ಕಮಾಂಡರ್ ಅಭಿನವ್ ಅವರ ಮೂರು ತಲೆಮಾರು ದೇಶಕ್ಕಾಗಿ ದುಡಿದಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.