
ಅಜಿತ್ ಕುಮಾರ್, ಇಶಾ ಗುಪ್ತಾ ಹಾಗೂ ಪಿ.ವಿ. ಸಿಂಧು
ಕೃಪೆ: Instagram
ಇಸ್ರೇಲ್ – ಇರಾನ್ ನಡುವಣ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಮಧ್ಯಪ್ರಾಚ್ಯ ದೇಶಗಳ ನಡುವೆ ಯುದ್ಧದ ತೀವ್ರತೆ ಹೆಚ್ಚಾಗುತ್ತಿದೆ. ವಿಮಾನಗಳ ಹಾರಾಟ ರದ್ದಾಗಿದ್ದು, ಭಾರತದ ಹಲವು ಖ್ಯಾತನಾಮರು ಅಬುಧಾಬಿ, ದುಬೈನಲ್ಲೇ ಸಿಲುಕಿಕೊಂಡಿದ್ದಾರೆ.
ದುಬೈನಲ್ಲಿ ಸಿಲುಕಿರುವ ನಟ ಅಜಿತ್ ಕುಮಾರ್ ಅವರು ಫೆಬ್ರುವರಿ 28ರಂದು ಚೆನ್ನೈಗೆ ವಾಪಸ್ ಆಗಲು ನಿರ್ಧಿರಿಸಿದ್ದರು. ಆದರೆ, ಇರಾನ್ ದಾಳಿಯಿಂದಾಗಿ ಏಕಾಏಕಿ ವಿಮಾನಗಳು ರದ್ದಾಗಿರುವುದರಿಂದ, ಅಲ್ಲೇ ಉಳಿಯುವಂತಾಗಿದೆ. ಅವರು ಸುರಕ್ಷಿತವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಾಲಿವುಡ್ ನಟಿ ಇಶಾ ಗುಪ್ತಾ ಅವರು ದುಬೈನಲ್ಲಿ ಸಿಲುಕಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, 'ನಾವು ಆರಾಮಾಗಿ, ಸುರಕ್ಷಿತವಾಗಿ ಇದ್ದೇವೆ. ಅತ್ಯಂತ ಭಯಾನಕ ಹಾಗೂ ಕಠಿಣವಾದ ಸಮಯ ಇದಾಗಿದೆ. ದೇವರು ನಮ್ಮನ್ನು ಕಾಪಾಡಿದ್ದಾನೆ. ಜನರ ರಕ್ಷಣೆಯ ವಿಚಾರದಲ್ಲಿ ಮೋದಿ ಸರ್ಕಾರ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ' ಎಂದು ತಿಳಿಸಿದ್ದಾರೆ. 'ನಾನು ಹಾಗೂ ನನ್ನ ತಂಡದ ಎಲ್ಲರೂ ಸುರಕ್ಷಿತವಾಗಿದ್ದೇವೆ' ಎಂದೂ ಹೇಳಿದ್ದಾರೆ.
ಒಲಿಂಪಿಕ್ ಪದಕ ವಿಜೇತ ಕ್ರೀಡಾಳು, ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರು ಅಬುಧಾಬಿಯಲ್ಲಿ ಸಿಲುಕಿಕೊಂಡಿದ್ದಾರೆ. ಅವರು, ಆಲ್ ಇಂಗ್ಲೆಂಡ್ ಓಪನ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ದುಬೈಗೆ ಹೊರಟಿದ್ದರು.
ವಿಮಾನ ರದ್ದಾಗಿರುವ ಕಾರಣ ದುಬೈನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ನಟಿ ಸೋನಲ್ ಚೌಹಾಣ್ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಭಾರತಕ್ಕೆ ಪ್ರಯಾಣಿಸಲು ಯಾವ ಮಾರ್ಗವೂ ಇಲ್ಲ ಎಂದಿದ್ದಾರೆ. ಹಾಗೆಯೇ, ಸುರಕ್ಷಿತವಾಗಿ ಹಿಂದಿರುಗಲು ನೆರವಾಗುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕುಟುಂಬವನ್ನು ಭೇಟಿಯಾಗುವ ಸಲುವಾಗಿ ದುಬೈಗೆ ತೆರಳಿದ್ದ ತೆಲುಗು ನಟ ವಿಷ್ಣು ಮಂಚು ಅವರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ಷಿಪಣಿಗಳು ಹಾರಾಡುತ್ತಿರುವ ವಿಡಿಯೊವನ್ನು ಎಕ್ಸ್ನಲ್ಲಿ ಹಂಚಿಕೊಂಡಿರುವ ಅವರು, ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿರುವ ಯುಎಇ ಪಡೆಗಳಿಗೆ ಧನ್ಯವಾದ ಹೇಳಿದ್ದಾರೆ.
ಕಲರ್ಸ್ ಕನ್ನಡದ 'ಬಿಗ್ ಬಾಸ್' ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಗಳಿಸಿರುವ ಡ್ರೋಣ್ ಖ್ಯಾತಿಯ ಪ್ರತಾಪ್ ಅವರೂ ಅಬುಧಾಬಿಯಲ್ಲಿ ಸಿಲುಕಿದ್ದಾರೆ. ಬೆಂಗಳೂರಿಗೆ ಪ್ರಯಾಣಿಸಬೇಕಿದ್ದ ವಿಮಾನ ಹಾರಾಟ ರದ್ದಾಗಿರುವ ಅವರು ಅಲ್ಲೇ ಸಿಲುಕಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.