
ಕೇರಳ ವಿಧಾನಸಭೆ
ತಿರುವನಂತಪುರ: ವಿಬಿ ಜಿ ರಾಮ್ ಜಿ ಕಾಯ್ದೆ ರದ್ದುಪಡಿಸಿ, ನರೇಗಾ ಕಾಯ್ದೆಯನ್ನು ಮರು ಸ್ಥಾಪಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಕೇರಳ ವಿಧಾನಸಭೆಯಲ್ಲಿ ಮಂಡಿಸಿದ ನಿರ್ಣಯವು ಗುರುವಾರ ಅಂಗೀಕಾರಗೊಂಡಿದೆ.
ಶಬರಿಮಲೆ ಚಿನ್ನ ಕಳವು ಪ್ರಕರಣದ ಕುರಿತು ವಿರೋಧ ಪಕ್ಷವಾದ ಕಾಂಗ್ರೆಸ್ ನೇತೃತ್ವದ ಯುಡಿಎಫ್ನ ಪ್ರತಿಭಟನೆಯ ನಡುವೆಯೇ ಕೇರಳದ ಸಂಸದೀಯ ವ್ಯವಹಾರಗಳ ಸಚಿವ ಎಂ.ಬಿ. ರಾಜೇಶ್ ಅವರು ‘ಜಿ ರಾಮ್ ಜಿ’ಗೆ ವಿರೋಧಿಸಿ ನಿರ್ಣಯ ಮಂಡಿಸಿದರು. ಬಳಿಕ ಸದನವು ನಿರ್ಣಯವನ್ನು ಅಂಗೀಕರಿಸಿತು.
ಸಂಪೂರ್ಣವಾಗಿ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದ್ದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’ (ಮನರೇಗಾ) ಕಾಯ್ದೆಯನ್ನು ಮಾರ್ಪಾಡು ಮಾಡುವ ಮೂಲಕ ಹೊಸದಾಗಿ ‘ವಿಕಸಿತ ಭಾರತ – ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಗ್ರಾಮೀಣ’ (ವಿಬಿ– ಜಿ ರಾಮ್ ಜಿ) ಕಾಯ್ದೆಯನ್ನು ಪರಿಚಯಿಸಲಾಗಿದೆ. ವಿಬಿ– ಜಿ ರಾಮ್ ಜಿ ಕಾಯ್ದೆ ಅನ್ವಯ ರಾಜ್ಯವು ವೆಚ್ಚದ ಶೇಕಡ 40ರಷ್ಟು ಭರಿಸಬೇಕೆಂದು ಆದೇಶಿಸುತ್ತದೆ. ಇದು ಹೊಸ ಕಾಯ್ದೆಯನ್ನು ಕಟ್ಟುನಿಟ್ಟಾಗಿ ವಿರೋಧಿಸುತ್ತಿರುವ ಇತರ ದಕ್ಷಿಣ ರಾಜ್ಯಗಳು ಹಂಚಿಕೊಂಡ ಕಳವಳವನ್ನು ಎತ್ತಿ ತೋರಿಸುತ್ತದೆ ಎಂದು ರಾಜೇಶ್ ಹೇಳಿದ್ದಾರೆ.
ವಿಬಿ– ಜಿ ರಾಮ್ ಜಿ ಕಾಯ್ದೆಯು ರಾಜ್ಯಗಳ ಮೇಲೆ ಭಾರಿ ಆರ್ಥಿಕ ಹೊರೆಯನ್ನು ಸೃಷ್ಟಿಸುತ್ತದೆ ಮತ್ತು ಹಿಂದಿನ ಕಾನೂನಿನ ಸಾರವಾಗಿದ್ದ ಹಕ್ಕು ಆಧಾರಿತ ನಿಬಂಧನೆಗಳನ್ನು ಇದು ಹೊಂದಿಲ್ಲ ಎಂದೂ ಅವರು ತಿಳಿಸಿದ್ದಾರೆ.
‘ಬಡತನ ನಿರ್ಮೂಲನೆಗೆ ಮಾರಕವಾದ ಮತ್ತು ರಾಜ್ಯಗಳ ಮೇಲೆ ಉದ್ಯೋಗ ಒದಗಿಸುವ ಹೊರೆಯನ್ನು ನಿಗದಿಪಡಿಸುವ ಹೊಸ ಕಾಯ್ದೆಯನ್ನು ಹಿಂಪಡೆಯಬೇಕು ಮತ್ತು ಹಿಂದಿನ ಮನರೇಗಾ ಕಾಯ್ದೆಯನ್ನು ಮರು ಸ್ಥಾಪಿಸಬೇಕೆಂದು ಸದನವು ಒತ್ತಾಯಿಸುತ್ತಿದೆ’ ಎಂದಿದ್ದಾರೆ.
ತಮಿಳುನಾಡಿನ ಡಿಎಂಕೆ ಸರ್ಕಾರ, ಕಾಂಗ್ರೆಸ್ ಆಡಳಿತವಿರುವ ಕರ್ನಾಟಕ ಮತ್ತು ತೆಲಂಗಾಣದಲ್ಲಿ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಿ, ನರೇಗಾ ಕಾಯ್ದೆಯನ್ನು ಮರು ಸ್ಥಾಪಿಸಬೇಕೆಂದು ಒತ್ತಾಯಿಸಿ ನಿರ್ಣಯ ಮಂಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.