ADVERTISEMENT

ನ್ಯಾಷನಲ್ ಹೆರಾಲ್ಡ್‌ ಹಣ ಅಕ್ರಮ ವರ್ಗಾವಣೆ ಪ್ರಕರಣ: ಡಿ.ಕೆ. ಸೋದರರ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 4:52 IST
Last Updated 8 ಅಕ್ಟೋಬರ್ 2022, 4:52 IST
ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅದ್ಯಕ್ಷ ಡಿ.ಕೆ.ಶಿವಕುಮಾರ್, ಅವರ ಸೋದರ ಮತ್ತು ಸಂಸದ ಡಿ.ಕೆ.ಸುರೇಶ್
ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅದ್ಯಕ್ಷ ಡಿ.ಕೆ.ಶಿವಕುಮಾರ್, ಅವರ ಸೋದರ ಮತ್ತು ಸಂಸದ ಡಿ.ಕೆ.ಸುರೇಶ್   

ನವದೆಹಲಿ: ನ್ಯಾಷನಲ್ ಹೆರಾಲ್ಡ್‌ ಪತ್ರಿಕೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ಭಾಗವಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅದ್ಯಕ್ಷ ಡಿ.ಕೆ.ಶಿವಕುಮಾರ್, ಅವರ ಸೋದರ ಮತ್ತು ಸಂಸದ ಡಿ.ಕೆ.ಸುರೇಶ್ ಅವರನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಶುಕ್ರವಾರ ಇಲ್ಲಿ ವಿಚಾರಣೆಗೆ ಒಳಪಡಿಸಿತು. ಕಾಂಗ್ರೆಸ್‌ನ ‘ಭಾರತ್ ಜೋಡೊ’ ಯಾತ್ರೆ ಈಗ ಕರ್ನಾಟಕದಲ್ಲಿ ನಡೆಯುತ್ತಿದ್ದು, ಯಾತ್ರೆಯ ಮಧ್ಯೆಯೇ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನು ಇ.ಡಿ ವಿಚಾರಣೆಗೆ ಒಳಪಡಿಸಿದೆ.

ಇಲ್ಲಿನ ಇ.ಡಿ ಕಚೇರಿಗೆ ಸೋದರರಿಬ್ಬರೂ ಬೆಳಿಗ್ಗೆ 10.30ರ ವೇಳೆಗೆ ಬಂದರು. ಇ.ಡಿ ಅಧಿಕಾರಿಗಳು ಇಬ್ಬರನ್ನು ಪ್ರತ್ಯೇಕವಾಗಿ ಐದು ತಾಸುಗಳವರೆಗೆ ವಿಚಾರಣೆ ನಡೆಸಿದರು.

ನ್ಯಾಷನಲ್‌ ಹೆರಾಲ್ಡ್‌ನ ಮಾತೃ ಸಂಸ್ಥೆಯಾದ ಯಂಗ್‌ ಇಂಡಿಯನ್‌ ಲಿಮಿಟೆಡ್‌ಗೆ ತಾವು ನೀಡಿರುವ ದೇಣಿಗೆ ಕುರಿತು ತನಿಖಾಧಿಕಾರಿಗಳು ಪ್ರಶ್ನೆ ಕೇಳಿದರು ಎಂದು ಶಿವಕುಮಾರ್‌ ಮತ್ತು ಸುರೇಶ್‌ ಹೇಳಿದ್ದಾರೆ.

ADVERTISEMENT

‘ಈ ವರ್ಷ ಯಂಗ್‌ ಇಂಡಿಯನ್ ಕಂಪನಿಗೆ ನಾವು ಸ್ವಲ್ಪ ದೇಣಿಗೆ ನೀಡಿದ್ದೆವು. ಅದರ ಮಾಹಿತಿಯನ್ನು ಅಧಿಕಾರಿಗಳು ಕೇಳಿದರು. ಜತೆಗೆ ಹತ್ತು ವರ್ಷಗಳಲ್ಲಿ ನಾವು ಮತ್ತು ನಮ್ಮ ಕುಟುಂಬದವರು ನಡೆಸಿರುವ ಹಣ ವರ್ಗಾವಣೆಗೆ ಸಂಬಂಧಿಸಿದ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಇ–ಮೇಲ್‌ ಮೂಲಕ ಆ ಮಾಹಿತಿಯನ್ನು ಸಲ್ಲಿಸುತ್ತೇನೆ’ ಎಂದು ಹೇಳಿದರು.

ಡಿ.ಕೆ.ಸುರೇಶ್ ಅವರು, ‘ನಾನು ಈ ವರ್ಷ ಯಂಗ್‌ ಇಂಡಿಯನ್‌ ಕಂಪನಿಗೆ ₹25 ಲಕ್ಷ ದೇಣಿಗೆ ನೀಡಿದ್ದೇನೆ. ಆ ಕಂಪನಿಗೆ ನೀಡುವ ದೇಣಿಗೆಗೆ ತೆರಿಗೆ ವಿನಾಯಿತಿ ರದ್ದುಪಡಿಸಲಾಗಿದೆ. ಹೀಗಿದ್ದೂ ದೇಣಿಗೆ ಹೇಗೆ ನೀಡಿದಿರಿ ಎಂದು ನನ್ನನ್ನು ಅಧಿಕಾರಿಗಳು ಪ್ರಶ್ನಿಸಿದರು. ವಿನಾಯಿತಿ ರದ್ದಾಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ವರ್ಷ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸುವಾಗ ತೆರಿಗೆ ವಿನಾಯಿತಿ ಕೇಳುವುದಿಲ್ಲ ಎಂದು ಅವರಿಗೆ ಹೇಳಿದೆ’ ಎಂದು ಮಾಹಿತಿ ನೀಡಿದರು.

‘ತನಿಖೆ ಎದುರಿಸಲು ಸಿದ್ಧ’

ನವದೆಹಲಿ: ಇಂಧನ ಇಲಾಖೆಗೆ ಸಂಬಂಧಿಸಿದ ಯಾವುದೇ ತನಿಖೆ ಎದುರಿಸಲು ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಶುಕ್ರವಾರ ಹೇಳಿದ್ದಾರೆ.

ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಅವರು ಇಂಧನ ಸಚಿವರಾಗಿದ್ದಾಗ ನಡೆದಿದ್ದ ಸೌರವಿದ್ಯುತ್‌ ಉತ್ಪಾದನಾ ಘಟಕಗಳ ಹಂಚಿಕೆ ಪ್ರಕ್ರಿಯೆ ಕುರಿತು ಕರ್ನಾಟಕದ ಬಿಜೆಪಿ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಲಿದೆ ಎಂಬ ಪತ್ರಿಕಾ ವರದಿಗೆ ಅವರು ಪ್ರತಿಕ್ರಿಯಿಸಿದರು.

‘ನ್ಯಾಯಾಂಗ ತನಿಖೆ ಯಾಕೆ?, ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಲಿ. ಎದುರಿಸಲು ನಾನು ಸಿದ್ಧನಿದ್ದೇನೆ’ ಎಂದು ನ್ಯಾಷನಲ್‌ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಲು ದೆಹಲಿಗೆ ಬಂದಿರುವ ಶಿವಕುಮಾರ್‌ ಅವರು ಹೇಳಿದ್ದಾರೆ.

'ನಾನು ಇಂಧನ ಸಚಿವನಾಗಿದ್ದಾಗ ನವೀಕರಿಸಬಹುದಾದ ಇಂಧನ ವಲಯದಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಈ ಯೋಜನೆಗಳು ಕೇಂದ್ರ ಸರ್ಕಾರದ ಪ್ರಶಂಸೆಗೂ ಪಾತ್ರವಾಗಿವೆ’ ಎಂದೂ ತಿಳಿಸಿದ್ದಾರೆ.

‘ಕರ್ನಾಟಕದ ಬಿಜೆಪಿ ಸರ್ಕಾರವು ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಹೇಗೆ ಭ್ರಷ್ಟಾಚಾರ ನಡೆಸಿದೆ ಎಂಬುದು ನಮಗೆ ತಿಳಿದಿದೆ.
ಅದನ್ನು ಮುಚ್ಚಿ ಹಾಕಲು ಹಿಂದಿನ ಸರ್ಕಾರದ ಅವಧಿಯಲ್ಲಿ ಅನುಷ್ಠಾನಗೊಂಡಿರುವ ಯೋಜನೆಗಳ ತನಿಖೆ ನಡೆಸುತ್ತಿದೆ’ ಎಂದು ಅವರು
ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.