ಅನುರಾಗ್ ಠಾಕೂರ್, ಶಶಿ ತರೂರ್, ಕನಿಮೋಳಿ, ಅಸಾದುದ್ದೀನ್ ಓವೈಸಿ, ಸುಪ್ರಿಯಾ ಸುಳೆ, ಮನೀಶ್ ತಿವಾರಿ
ನವದೆಹಲಿ: ಪಹಲ್ಗಾಮ್ ದಾಳಿಗೆ ‘ಆಪರೇಷನ್ ಸಿಂಧೂರ್’ ಮೂಲಕ ಪ್ರತೀಕಾರ ತೆಗೆದುಕೊಂಡಿರುವ ಕೇಂದ್ರ ಸರ್ಕಾರವು ರಾಜತಾಂತ್ರಿಕ ಕಾರ್ಯಾಚರಣೆಯ ಭಾಗವಾಗಿ, ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಮುಖವನ್ನು ವಿಶ್ವವೇದಿಕೆಯಲ್ಲಿ ಬಹಿರಂಗಪಡಿಸಲು ಸರ್ವ ಪಕ್ಷಗಳ ನಿಯೋಗವನ್ನು ವಿವಿಧ ದೇಶಗಳಿಗೆ ಮೇ 22 ಅಥವಾ 23ರಂದು ಕಳುಹಿಸಿಕೊಡಲಿದೆ.
ವಿರೋಧ ಪಕ್ಷ ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಸಂಸದರು, ಹಿರಿಯ ನಾಯಕರು ನಿಯೋಗದಲ್ಲಿ ಇರುತ್ತಾರೆ. ತಮ್ಮ ಪಕ್ಷಗಳ ಸದಸ್ಯರನ್ನು ನಿಯೋಗದಲ್ಲಿ ಕಳುಹಿಸಿಕೊಡಲು ರಾಜಕೀಯ ಪಕ್ಷಗಳು ಸಮ್ಮತಿಸಿವೆ ಎಂದು ಮೂಲಗಳು ತಿಳಿಸಿವೆ.
5ರಿಂದ 6 ಸದಸ್ಯರಿರುವ ನಿಯೋಗಗಳು 10 ದಿನಗಳ ಕಾಲ ವಿವಿಧ ದೇಶಗಳಿಗೆ ಭೇಟಿ ನೀಡಲಿವೆ. ಸರ್ಕಾರವು ನಿಗದಿಪಡಿಸಿದಂತೆ, ಸಂಸದರು ವಿವಿಧ ದೇಶಗಳಿಗೆ ಭೇಟಿ ನೀಡಿ, ಅಲ್ಲಿನ ರಾಜಕೀಯ ಪಕ್ಷಗಳು ಮತ್ತು ವಿವಿಧ ಗುಂಪುಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತದೆ. ನಿಯೋಗವು ತೆರಳುವ ಮುನ್ನ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (ಎಂಇಎ) ಸದಸ್ಯರಿಗೆ ಅಗತ್ಯ ಮಾಹಿತಿ ಒದಗಿಸಲಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿವಾದಾತ್ಮಕ ಹೇಳಿಕೆಗಳ ಆಧಾರದ ಮೇಲೆ ಕಾಶ್ಮೀರ ಸಮಸ್ಯೆಯನ್ನು ಅಂತರರಾಷ್ಟ್ರೀಯಗೊಳಿಸಲು ಪಾಕಿಸ್ತಾನ ನಡೆಸುತ್ತಿರುವ ಪ್ರಯತ್ನವನ್ನು ತಡೆಯಲು ಕೇಂದ್ರ ಸರ್ಕಾರವು ಈ ಕಸರತ್ತು ನಡೆಸುತ್ತಿದೆ. ಭಾರತವು ಗಡಿಯಾಚೆಗಿನ ಭಯೋತ್ಪಾದನೆಯ ಬಲಿಪಶುವಾಗಿದೆ. ಪಹಲ್ಗಾಮ್ನಲ್ಲಿ ಭಾರತವನ್ನು ಹೇಗೆ ಗುರಿಯಾಗಿಸಲಾಗಿತ್ತು ಎಂದು ನಿಯೋಗಗಳು ವಿವರಿಸಲಿವೆ ಎಂದು ಮೂಲಗಳು ತಿಳಿಸಿವೆ.
ಆಪರೇಷನ್ ಸಿಂಧೂರವು ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿ ಹತ್ತಿಕ್ಕುವುದಾಗಿದೆ ಎನ್ನುವುದನ್ನು ನಿಯೋಗಗಳು ಆತಿಥೇಯ ದೇಶಗಳಿಗೆ ಮನವರಿಕೆ ಮಾಡುವ ನಿರೀಕ್ಷೆಯಿದೆ.
ಬಿಜೆಪಿ, ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಎನ್ಸಿಪಿ(ಎಸ್ಪಿ), ಜೆಡಿಯು, ಬಿಜೆಡಿ, ಸಿಪಿಎಂ ಮತ್ತು ಇತರ ಕೆಲವು ಪಕ್ಷಗಳ ಸಂಸದರು ಈ ನಿಯೋಗಗಳ ಭಾಗವಾಗಲಿದ್ದಾರೆ.
ಬಿಜೆಪಿಯಿಂದ ಅನುರಾಗ್ ಠಾಕೂರ್, ಅಪರಾಜಿತಾ ಸಾರಂಗಿ ಪ್ರಮುಖರಾದರೆ, ಕಾಂಗ್ರೆಸ್ನಿಂದ ಶಶಿ ತರೂರ್, ಮನೀಶ್ ತಿವಾರಿ, ಸಲ್ಮಾನ್ ಕುರ್ಷಿದ್ ಮತ್ತು ಅಮರ್ ಸಿಂಗ್ ಈ ನಿಯೋಗದಲ್ಲಿ ಇರಲಿದ್ದಾರೆ.
ಟಿಎಂಸಿ ಪಕ್ಷದಿಂದ ಸುದೀಪ್ ಬಂಡೋಪಾಧ್ಯಾಯ, ಜೆಡಿಯುನ ಸಂಜಯ್ ಜಾ, ಬಿಜೆಡಿಯ ಸಸ್ಮಿತ್ ಪಾತ್ರಾ, ಎನ್ಸಿಪಿ(ಎಸ್ಪಿ)ಯ ಸುಪ್ರಿಯಾ ಸುಳೆ, ಡಿಎಂಕೆಯ ಕೆ. ಕನಿಮೋಳಿ, ಸಿಪಿಐಎಂನ ಜಾನ್ ಬ್ರಿಟ್ಟಸ್, ಎಐಎಂಐಎಂ ಪಕ್ಷದ ಅಸಾದುದ್ದೀನ್ ಒವೈಸಿ ಈ ನಿಯೋಗದಲ್ಲಿ ಇರುವ ಸದಸ್ಯರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರದಿಂದ ಈ ಕುರಿತು ಈವರೆಗೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಆದರೆ ವಿದೇಶಾಂಗ ಸಚಿವ ಕಿರಣ್ ರಿಜಿಜು ಅವರು ಕಾಂಗ್ರೆಸ್ ಮುಖಂಡರೊಂದಿಗೆ ಈ ವಿಷಯ ಕುರಿತು ಚರ್ಚಿಸಿರುವುದಾಗಿ ಜೈರಾಮ್ ರಮೇಶ್ ತಿಳಿಸಿದ್ದಾರೆ.
‘ಪಹಲ್ಗಾಮ್ ದಾಳಿ ನಂತರ ನಡೆದ ಎರಡು ಸರ್ವಪಕ್ಷ ನಿಯೋಗದ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಗೈರಾಗಿದ್ದರು. ಸಾಮೂಹಿಕ ಇಚ್ಛಾಶಕ್ತಿ ಪ್ರದರ್ಶಿಸಲು ಮತ್ತು 1994 ಜ. 22ರಂದು ತೆಗೆದುಕೊಂಡ ನಿರ್ಣಯವನ್ನು ಪುನರುಚ್ಚರಿಸಲು ವಿಶೇಷ ಅಧಿವೇಶನ ಕರೆಯುವ ಕಾಂಗ್ರೆಸ್ನ ಪ್ರಸ್ತಾವವನ್ನು ಪ್ರಧಾನಿ ತಿರಸ್ಕರಿಸಿದರು’ ಎಂದು ಅವರು ಹೇಳಿದ್ದಾರೆ.
‘ಏಕತೆ ಮತ್ತು ಒಗ್ಗಟ್ಟು ಪ್ರದರ್ಶನಕ್ಕೆ ವಿರೋಧ ಪಕ್ಷ ಕರೆ ನೀಡುತ್ತಲೇ ಇದ್ದರೂ, ಪ್ರಧಾನಿ ಮೋದಿ ಅವರು ಕಾಂಗ್ರೆಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಲೇ ಇದ್ದಾರೆ’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹೇಳಿದ್ದಾರೆ.
‘ಆದರೆ ಈಗ ಏಕಾಏಕಿ ಸರ್ವಪಕ್ಷಗಳ ನಿಯೋಗವನ್ನು ವಿದೇಶಗಳಿಗೆ ಕಳುಹಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ರಾಷ್ಟ್ರದ ಹಿತದೃಷ್ಟಿಯಲ್ಲಿ ಕಾಂಗ್ರೆಸ್ ಎಂದೂ ರಾಜಕೀಯ ಮಾಡಿಲ್ಲ. ಆದರೆ ಬಿಜೆಪಿ ಈ ಘಟನೆಯನ್ನು ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ. ಏನೇ ಇರಲಿ, ಸರ್ಕಾರದ ಈ ರಾಜತಾಂತ್ರಿಕ ಕ್ರಮದಲ್ಲಿ ಕಾಂಗ್ರೆಸ್ ಭಾಗಿಯಾಗಲಿದೆ’ ಎಂದು ಜೈರಾಮ್ ಹೇಳಿದ್ದಾರೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಭಯೋತ್ಪಾದಕರ ನೆಲೆಗಳ ಮೇಲೆ ನಿಖರ ದಾಳಿ ನಡೆಸಿ ಧ್ವಂಸಗೊಳಿಸಿತು. ಮೇ 7ರಂದು ಈ ಕಾರ್ಯಾಚರಣೆ ಆರಂಭಗೊಂಡಿತು.
ದಕ್ಷಿಣ ಕೊರಿಯಾ, ಜಪಾನ್ ಮತ್ತು ಸಿಂಗಪುರ ಒಳಗೊಂಡಂತೆ ದಕ್ಷಿಣ ಮತ್ತು ಆಗ್ನೇಯ ಏಷ್ಯಾಕ್ಕೆ ಏಳು ಸಂಸದರ ನಿಯೋಗ ಭೇಟಿ ನೀಡಲಿದ್ದು, ಇದನ್ನು ವಿದೇಶಾಂಗ ವ್ಯವಹಾರಗಳ ಮಾಜಿ ಸಚಿವ ಖುರ್ಷಿದ್ ಮುನ್ನಡೆಸಲಿದ್ದಾರೆ.
ಬಾರಾಮತಿ ಕ್ಷೇತ್ರದ ಸಂಸದೆ ಸುಪ್ರಿಯಾ ಸುಳೆ ಅವರ ನೇತೃತ್ವದ ನಿಯೋಗವು ಓಮನ್, ಈಜಿಪ್ಟ್, ಕೆನ್ಯಾ ಮತ್ತು ದಕ್ಷಿಣ ಆಫ್ರಿಕಾ ಸೇರಿ ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾಕ್ಕೆ ಭೇಟಿ ಕೊಡುವ ಸಾಧ್ಯತೆಯಿದೆ.
ಕಾಂಗ್ರೆಸ್ ನಾಯಕ ಮನೀಷ್ ತಿವಾರಿ ಅವರ ನೇತೃತ್ವದ ನಿಯೋಗವು ಯುರೋಪ್ ಅಥವಾ ಪಶ್ಚಿಮ ಏಷ್ಯಾದ ರಾಷ್ಟ್ರಗಳಿಗೆ ಭೇಟಿ ನೀಡಲಿದೆ. ಶಶಿ ತರೂರ್ ಅವರು ಮತ್ತೊಂದು ನಿಯೋಗ ಮುನ್ನಡೆಸುವ ಸಾಧ್ಯತೆಯಿದೆ.
ಶಿವಸೇನಾದ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ನೇತೃತ್ವದ ನಿಯೋಗ ಸೌದಿ ಅರೇಬಿಯಾ, ಅಲ್ಜೀರಿಯಾ, ಕುವೈತ್ ಮತ್ತು ಬಹರೇನ್ಗೆ ಭೇಟಿ ನೀಡಲಿದೆ. ಈ ನಿಯೋಗದಲ್ಲಿ ಕಾಂಗ್ರೆಸ್ನ ಅಮರ್ ಸಿಂಗ್ ಕೂಡ ಇರಲಿದ್ದಾರೆ.
ಅನುರಾಗ್ ಠಾಕೂರ್ ಅವರು ಆಫ್ರಿಕಾಕ್ಕೆ ಭೇಟಿ ನೀಡುವ ನಿಯೋಗದ ಭಾಗವಾಗಿದ್ದರೆ, ಅಪರಾಜಿತಾ ಸಾರಂಗಿ ಮತ್ತು ವಿಕ್ರಮ್ಜಿತ್ ಸಾಹ್ನಿ ಅವರು ಆಗ್ನೇಯ ಏಷ್ಯಾಕ್ಕೆ ಭೇಟಿ ನೀಡುವ ನಿಯೋಗದಲ್ಲಿ ಇರಲಿದ್ದಾರೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.