ADVERTISEMENT

ಮಕರದ್ವಾರದ ಬಳಿ ಜಟಾಪಟಿ | ಹೇಳಿಕೆ, ಹಲ್ಲೆ ವಿರುದ್ಧ ದೇಶವ್ಯಾಪಿ ಧರಣಿ: ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2024, 10:07 IST
Last Updated 19 ಡಿಸೆಂಬರ್ 2024, 10:07 IST
<div class="paragraphs"><p>ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ವಿರೋಧ ಪಕ್ಷಗಳ ನಾಯಕರು ಗುರುವಾರ ಪ್ರತಿಭಟನೆ ನಡೆಸಿದರು</p></div>

ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ವಿರೋಧ ಪಕ್ಷಗಳ ನಾಯಕರು ಗುರುವಾರ ಪ್ರತಿಭಟನೆ ನಡೆಸಿದರು

   

ಪಿಟಿಐ ಚಿತ್ರ

ನವದೆಹಲಿ: ‘ಸಂಸತ್ ಭವನದ ಮಕರ ದ್ವಾರದ ಬಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೂಕಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮೇಲೆ ದೈಹಿಕವಾಗಿ ಹಲ್ಲೆ ನಡೆಸುವ ಮೂಲಕ ಬಿಜೆಪಿ ನಾಯಕರ ಸಂಸತ್‌ನ ಘನತೆಯನ್ನು ಮಣ್ಣುಪಾಲು ಮಾಡಿದ್ದಾರೆ’ ಎಂದು ಕಾಂಗ್ರೆಸ್ ಆರೋಪಿಸಿದೆ.

ADVERTISEMENT

ಘಟನೆ ನಂತರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್‌ನ ಸಂಸದರು, ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. 

‘ಅಂಬೇಡ್ಕರ್ ಅವರ ಕುರಿತು ಆಡಿರುವ ಮಾತುಗಳಿಗೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ನಿಟ್ಟಿನಲ್ಲಿ ದೇಶದಾದ್ಯಂತ ಪಕ್ಷವು ಬೀದಿಗಿಳಿದು ಹೋರಾಟ ನಡೆಸಲಿದೆ’ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ. 

ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಸಂಸದರು ಮಕರ ದ್ವಾರದ ಬಳಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲೇ ಬಿಜೆಪಿ ಸಂಸದರೂ ಪ್ರತಿಭಟನೆಗೆ ಮುಂದಾದರು. ಈ ಸಂದರ್ಭದಲ್ಲಿ ತಳ್ಳಾಟ ಹಾಗೂ ನೂಕಾಟದಲ್ಲಿ ಬಿಜೆಪಿಯ ಸಂಸದ ಪ್ರತಾಪ್ ಚಂದ್ರ ಸಾರಂಗಿ ಹಾಗೂ ಮುಕೇಶ್ ರಜಪೂತ್ ಅವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದರು. 

ತಮ್ಮನ್ನು ರಾಹುಲ್ ಗಾಂಧಿ ತಳ್ಳಿದರು ಎಂದು ಈ ಇಬ್ಬರು ಗಾಯಾಳು ಸಂಸದರು ಆರೋಪಿಸಿದ್ದಾರೆ. ಆದರೆ ಕಾಂಗ್ರೆಸ್ ಈ ಆರೋಪವನ್ನು ತಳ್ಳಿ ಹಾಕಿದೆ.

ಈ ಕುರಿತಂತೆ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಗೌರವ್ ಗೊಗೋಯಿ ಹಾಗೂ ಕೆ.ಸಿ.ವೇಣುಗೋಪಾಲ್ ಅವರು ಮಾತನಾಡಿ ಬಿಜೆಪಿ ಆರೋಪಗಳನ್ನು ನಿರಾಕರಿಸಿದ್ದಾರೆ. ‘ಬಿಜೆಪಿ ಸಂಸದರು ದೊಣ್ಣೆ ಹಿಡಿದು ಬಂದಿದ್ದರು. ಖರ್ಗೆ ಅವರಿಗೆ ಬೆದರಿಕೆಯೊಡ್ಡಿ ಅವರನ್ನು ತಳ್ಳಿದರು’ ಎಂದು ಆರೋಪಿಸಿದ್ದಾರೆ.

ಘಟನೆ ಕುರಿತು ಮಾತನಾಡಿರುವ ರಾಹುಲ್ ಗಾಂಧಿ, ‘ನಾನು ಸಂಸತ್ ಭವನ ಪ್ರವೇಶಿಸುವ ಸಂದರ್ಭದಲ್ಲಿ ನನ್ನನ್ನು ತಳ್ಳಿದರು. ಜತೆಗೆ ಬೆದರಿಕೆಯನ್ನೂ ಹಾಕಿದ್ದಾರೆ. ನಮ್ಮ ಪಕ್ಷದ ಅಧ್ಯಕ್ಷರಾದ ಖರ್ಗೆ ಅವರನ್ನು ಹಾಗೂ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನೂ ತಳ್ಳಲಾಯಿತು’ ಎಂದು ಆರೋಪಿಸಿದ್ದಾರೆ.

‘ಇದು ಸಂಸತ್ ಭವನದ ಪ್ರವೇಶ ದ್ವಾರವಾಗಿದ್ದು, ಒಳಗೆ ಹೋಗಲು ನಮಗೆ ಅಧಿಕಾರವಿದೆ. ಆದರೆ ಬಿಜೆಪಿ ಸಂಸದರು ನಮ್ಮನ್ನು ತಡೆದು, ಒಳಗೆ ಹೋಗುವುದನ್ನು ನಿರ್ಬಂಧಿಸಿದರು’ ಎಂದು ಮಕರ ದ್ವಾರವನ್ನು ತೋರಿಸಿ ರಾಹುಲ್ ಹೇಳಿದರು.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದರಾದ ಕೆ.ಸಿ. ವೇಣುಗೋಪಾಲ್, ಕೊಡಿಕುನ್ನಿಲ್ ಸುರೇಶ್, ರವೀಂದ್ರ ಚವಾಣ್‌ ಹಾಗೂ ವಿ.ಕೆ. ಶ್ರೀಕಂದನ್ ಅವರು, ‘ಮಕರ ದ್ವಾರದ ಬಳಿ ಹೋಗುತ್ತಿದ್ದಂತೆ, ಅಕ್ಷರಶಃ ಬಲಪ್ರಯೋಗದಿಂದ ನಮ್ಮನ್ನು ತಡೆಯಲಾಯಿತು. ಆಡಳಿತಾರೂಢ ಪಕ್ಷದ ಮೂವರು ಸಂಸದರು ರಾಹುಲ್ ಗಾಂಧಿ ಮೇಲೆ ಹಲ್ಲೆ ನಡೆಸಿದರು. ವಿರೋಧ ಪಕ್ಷದ ನಾಯಕರಿಗೆ ಕಾನೂನಾತ್ಮಕವಾಗಿ ನೀಡಲಾದ ಸ್ಥಾನಮಾನದ ಮೇಲೆ ನಡೆದಿರುವ ಹಲ್ಲೆಯಾಗಿದೆ. ಜತೆಗೆ ಸಂಸದರ ಸಹಜ ಹಕ್ಕನ್ನು ಕಸಿದುಕೊಳ್ಳುವ ಯತ್ನವಾಗಿದೆ’ ಎಂದು ಆರೋಪಿಸಿದರು.

ಘಟನೆ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವಿಷಯ ಹಂಚಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ, ‘ಬಾಬಾಸಾಹೇಬ್ ಡಾ. ಅಂಬೇಡ್ಕರ್ ಅವರನ್ನು ಅವಮಾನಿಸಿದ ನಂತರ, ನರೇಂದ್ರ ಮೋದಿ ಅವರು ಸಂಸತ್ತಿನ ಘನತೆಯನ್ನೂ ಕುಸಿಯುವಂತೆ ಮಾಡಿದ್ದಾರೆ. ಫಲಕ ಹಿಡಿದು ಬಂದಿದ್ದ ಬಿಜೆಪಿ ಸಂಸದರು ಜತೆಗೆ ದೊಣ್ಣೆಗಳನ್ನೂ ತಂದಿದ್ದರು. ವಿರೋಧ ಪಕ್ಷಗಳು ಶಾಂತಿಯುತವಾಗಿ ನಡೆಸುತ್ತಿದ್ದ ಪ್ರತಿಭಟನೆ ಮೇಲೆ ಹಲ್ಲೆ ನಡೆಸಿದರು, ದಾಳಿ ಮಾಡಿದರು. ಬಾಬಾಸಾಹೇಬ್, ಸಂಸತ್‌, ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಇವರಿಗಿರುವ ದ್ವೇಷ ಹಾಗೇ ಇದೆ. ಆದರೆ ನಾವು ದೃಢವಾಗಿ ನಿಲ್ಲುತ್ತೇವೆ. ಬಾಬಾಸಾಹೇಬರ ಕುರಿತು ಕಿಂಚಿತ್ ಅವಹೇಳನವನ್ನೂ ನಾವು ಸಹಿಸೆವು. ಈ ದೇಶದ ಪ್ರತಿಯೊಬ್ಬರೂ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿರುದ್ಧ ಗಟ್ಟಿಯಾಗಿ ನಿಲ್ಲಲಿದ್ದಾರೆ’ ಎಂದಿದ್ದಾರೆ.

ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ‘ಬಿಜೆಪಿಯನ್ನು ಉಳಿಸಲು ಅಂಬೇಡ್ಕರ್ ವಿರೋಧಿ ಅಮಿತ್ ಶಾ ಅವರ ಯೋಜನೆ ಇದಾಗಿದೆ. ಕಳೆದ 15 ದಿನಗಳಿಂದ ಸರ್ಕಾರದ ವಿರುದ್ಧ ಸಂಸತ್ ಭವನದ ಎದುರು ವಿರೋಧ ಪಕ್ಷಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿವೆ. ಸದನದೊಳಗೆ ಸಂಸದರಿಗೆ ಪ್ರವೇಶ ನಿರ್ಬಂಧಿಸುವಂತಿಲ್ಲ ಎಂದು ಸ್ಪೀಕರ್ ಅವರ ಸ್ಪಷ್ಟ ಆದೇಶವಿದೆ. ಇದನ್ನು ನಿರ್ವಹಿಸಲು ಭದ್ರತಾ ಸಿಬ್ಬಂದಿಯೂ ಇದ್ದರು. ಹೀಗಾಗಿ ನಾವು ಮಾರ್ಗವನ್ನು ತಡೆಯದೇ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದೆವು. ಪ್ರೇರಣಾ ಸ್ಥಳದ ಬಳಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತ, ಸಂವಿಧಾನ ಸದನದ ಬಳಿ ಮುಂದಾದೆವು. ಆಗ ಬಿಜೆಪಿ ಸಂಸದರು ದೊಣ್ಣೆಗಳನ್ನು ಹಿಡಿದು ನಮ್ಮ ಮಾರ್ಗವನ್ನು ತಡೆಯಲೆತ್ನಿಸಿದ್ದನ್ನು ಕಂಡು ಆಘಾತಗೊಂಡೆವು’ ಎಂದು ವಿವರಿಸಿದ್ದಾರೆ.

‘ಆ ಸಂದರ್ಭದಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಅಲ್ಲಿ ಇರಲಿಲ್ಲ. ಇದು ಸ್ಪೀಕರ್ ಅವರ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಅವರನ್ನು ತಳ್ಳುವ ಮೂಲಕ ಸಂಸತ್ ಭವನ ಪ್ರವೇಶವನ್ನು ತಡೆದಿರುವುದು ಕಾನೂನು ವಿರೋಧಿ ಕ್ರಮವಾಗಿದೆ. ಸಂಸತ್‌ನ ಘನತೆ ಕುಸಿಯುವಂತೆ ಮಾಡಿದ ಬಿಜೆಪಿ ನಾಯಕರ ಈ ದಾಳಿಕೋರತನ ಹಾಗೂ ಕುತಂತ್ರದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಾಬಾಸಾಹೇಬರ ಕುರಿತು ಆಡಿರುವ ಅವಹೇಳನಕಾರಿ ಮಾತುಗಳನ್ನು ಮರೆಮಾಚಲಾಗದು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.