ನವದೆಹಲಿ:ಅಯೋಧ್ಯೆಯಲ್ಲಿ ಶೀಘ್ರ ರಾಮಮಂದಿರ ನಿರ್ಮಿಸಲು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು ಎಂಬ ಹಿಂದುತ್ವ ಸಂಘಟನೆಗಳ ಬೇಡಿಕೆಗೆ ಮುಸ್ಲಿಂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.
ಸುಪ್ರೀಂ ಕೋರ್ಟ್ ಆದೇಶ ಏನೇ ಇರಲಿ, ಅದನ್ನು ಗೌರವಿಸಬೇಕು ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಜಾಫರ್ಯಾಬ್ ಜಿಲಾನಿ ಹೇಳಿದ್ದಾರೆ.
ಇದನ್ನೂ ಓದಿ:ಸಂಘ ಪರಿವಾರಕ್ಕೆ ಅಯೋಧ್ಯೆಯೇ ಆದ್ಯತೆ
ಪ್ರಕರಣವನ್ನು ಇತ್ಯರ್ಥಗೊಳಿಸಬೇಕೇ ವಿನಹ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾವೇರಲು ಬಿಡಬಾರದು ಎಂದು ಅಖಿಲ ಭಾರತ ಶಿಯಾವೈಯಕ್ತಿಕ ಕಾನೂನು ಮಂಡಳಿಯ ವಕ್ತಾರ ಯಾಸೂಬ್ ಅಬ್ಬಾಸ್ ಅಭಿಪ್ರಾಯಪಟ್ಟಿದ್ದಾರೆ.
ಸುಗ್ರೀವಾಜ್ಞೆಗೆ ಸಂಬಂಧಿಸಿ ಬಿಜೆಪಿ, ಸಂಘ ಪರಿವಾರದ ಹಲವು ಮುಖಂಡರ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಸಾಧ್ಯವಿದ್ದರೆ ಎನ್ಡಿಎ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲಿ ಎಂದು ಸವಾಲೆಸೆದಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರ ಮುಸ್ಲಿಮರನ್ನು ಬೆದರಿಸಲು ಯತ್ನಿಸುತ್ತಿದೆ ಎಂದು ದೂರಿದ್ದಾರೆ.
ಇದನ್ನೂ ಓದಿ:ಅಯೋಧ್ಯೆ ವಿಚಾರಣೆ ಮುಂದೂಡಿಕೆ: ಬಿಜೆಪಿಯಲ್ಲಿ ತಳಮಳ
‘ಅವರಿಗೆ ನಿಜವಾಗಿಯೂ ಧೈರ್ಯವಿದ್ದರೆರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸಲಿ. ಅವರು ಸುಗ್ರೀವಾಜ್ಞೆ ಹೊರಡಿಸುವ ವಿಷಯ ಮುಂದಿಟ್ಟುಕೊಂಡು ನಮ್ಮನ್ನು ಹೆದರಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರತಿಬಾರಿಯೂ ಬಿಜೆಪಿ, ಆರ್ಎಸ್ಎಸ್, ವಿಎಚ್ಪಿಯವರು ಹೀಗೆ ಮಾಡುತ್ತಾರೆ. ಈಗ ನೀವೇ ಅಧಿಕಾರದಲ್ಲಿದ್ದೀರಿ. ಸಾಧ್ಯವಿದ್ದರೆ ಮಾಡಿ ತೋರಿಸಿ, ನಾನು ಸವಾಲೆಸೆಯುತ್ತಿದ್ದೇನೆ’ ಎಂದು ಓವೈಸಿ ಹೇಳಿದ್ದಾರೆ.
ಸಂಬಂಧಿತ ಸುದ್ದಿಗಳು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.