ADVERTISEMENT

ಸನಾತನ ಧರ್ಮ ವಿವಾದ: ಉದಯನಿಧಿ ವಿರುದ್ಧದ ಅರ್ಜಿ ವಿಲೇವಾರಿ ಮಾಡಿದ ಹೈಕೋರ್ಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಮಾರ್ಚ್ 2024, 10:19 IST
Last Updated 6 ಮಾರ್ಚ್ 2024, 10:19 IST
<div class="paragraphs"><p>ಉದಯನಿಧಿ ಸ್ಟಾಲಿನ್</p></div>

ಉದಯನಿಧಿ ಸ್ಟಾಲಿನ್

   

ಚೆನ್ನೈ: ಸನಾತನ ಧರ್ಮ ಕುರಿತು ಹೇಳಿಕೆ ನೀಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂಬ ಆರೋಪದ ಮೇಲೆ ತಮಿಳುನಾಡು ಸಚಿವರಾದ ಉದಯನಿಧಿ ಸ್ಟಾಲಿನ್ ಮತ್ತು ಪಿ.ಕೆ. ಶೇಖರ್ ಬಾಬು ಹಾಗೂ ಡಿಎಂಕೆ ಸಂಸದ ಎ. ರಾಜಾ ಅವರ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಮದ್ರಾಸ್ ಹೈಕೋರ್ಟ್ ಇಂದು (ಬುಧವಾರ) ವಿಲೇವಾರಿ ಮಾಡಿದೆ.

ಸನಾತನ ಧರ್ಮದ ವಿರುದ್ಧ ಹೇಳಿಕೆ ನೀಡಿದ ನಂತರದಲ್ಲಿ ಇವರಿಗೆ ಅಧಿಕಾರದಲ್ಲಿ ಇರಲು ಯಾವ ಹಕ್ಕಿದೆ ಎಂದು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಮೂರ್ತಿ ಅನಿತಾ ಸುಮಂತ್ ಅವರು ಅರ್ಜಿಯನ್ನು ವಜಾಗೊಳಿಸಿದರು. ಆದರೆ, ಉನ್ನತ ಸ್ಥಾನಗಳಲ್ಲಿ ಇರುವವರು ಹೆಚ್ಚು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ನ್ಯಾಯಮೂರ್ತಿ ಹೇಳಿದರು.

ADVERTISEMENT

ಉದಯನಿಧಿ ಅವರು 2023ರ ಸೆಪ್ಟೆಂಬರ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ಸಂದರ್ಭದಲ್ಲಿ, ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ವಿರುದ್ಧವಾಗಿದೆ, ಅದನ್ನು ನಿರ್ಮೂಲಗೊಳಿಸಬೇಕು ಎಂದು ಹೇಳಿದ್ದರು. ಸನಾತನ ಧರ್ಮವನ್ನು ಕೊರೊನಾ ವೈರಾಣು, ಮಲೇರಿಯಾ ಮತ್ತು ಡೆಂಗಿಗೆ ಹೋಲಿಸಿದ್ದ ಅವರು ಅದನ್ನು ನಾಶ ಮಾಡಬೇಕು ಎಂದು ಹೇಳಿದ್ದರು.

‘ಸನಾತನ ಧರ್ಮದ ನಿರ್ಮೂಲನೆ’ ಆಗಬೇಕು ಎಂಬ ಹೇಳಿಕೆ ನೀಡಿದ್ದ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಅವರಿಗೆ ಸುಪ್ರೀಂ ಕೋರ್ಟ್‌ ಸೋಮವಾರ ಛೀಮಾರಿ ಹಾಕಿತ್ತು.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಂಡ ನಂತರದಲ್ಲಿ, ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಒಗ್ಗೂಡಿಸಿ ವಿಚಾರಣೆ ನಡೆಸಬೇಕು ಎಂಬ ಮನವಿಯೊಂದಿಗೆ ಕೋರ್ಟ್‌ ಮೆಟ್ಟಿಲೇರಿರುವುದು ಏಕೆ ಎಂದು ಉದಯನಿಧಿ ಅವರನ್ನು ಪ್ರಶ್ನಿಸಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತ ಅವರು ಇದ್ದ ವಿಭಾಗೀಯ ಪೀಠವು ಉದಯ ನಿಧಿ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿತ್ತು. ಸಚಿವರಾಗಿ ಉದಯ ನಿಧಿ ಅವರು ತಮ್ಮ ಹೇಳಿಕೆಗಳ ಬಗ್ಗೆ, ಹೇಳಿಕೆಯು ಉಂಟುಮಾಡಬಹುದಾದ ಪರಿಣಾಮಗಳ ಬಗ್ಗೆ ಎಚ್ಚರಿಕೆ ಹೊಂದಿರಬೇಕಿತ್ತು ಎಂದು ಹೇಳಿತ್ತು.

‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀವು ದುರ್ಬಳಕೆ ಮಾಡಿಕೊಳ್ಳುತ್ತೀರಿ, ಧಾರ್ಮಿಕ ಆಚರಣೆಯ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಳ್ಳುತ್ತೀರಿ. ಈಗ ನೀವು ಸುಪ್ರೀಂ ಕೋರ್ಟ್‌ನಲ್ಲಿ ನೇರವಾಗಿ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯವನ್ನು ಬಳಸುತ್ತಿದ್ದೀರಿ. ನಿಮ್ಮ ಹೇಳಿಕೆಯ ಪರಿಣಾಮಗಳ ಬಗ್ಗೆ ನಿಮಗೆ ಗೊತ್ತಿಲ್ಲವೇ? ನೀವು ಸಾಮಾನ್ಯ ವ್ಯಕ್ತಿ ಅಲ್ಲ. ನೀವೊಬ್ಬ ಸಚಿವ. ಪರಿಣಾಮಗಳ ಬಗ್ಗೆ ನಿಮಗೆ ಗೊತ್ತಿರಬೇಕು’ ಎಂದು ಪೀಠವು ಹೇಳಿತು. ಅರ್ಜಿಯ ವಿಚಾರಣೆಯನ್ನು ಮಾರ್ಚ್‌ 15ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.