ಹೈದರಾಬಾದ್: ಅಕ್ರಮ ವಲಸಿಗರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಎಐಎಂಐಎಂ, ಟಿಆರ್ಎಸ್ ಯತ್ನಿಸುತ್ತಿವೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ. ಹೈದರಾಬಾದ್ ಪುರಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಅವರು ಈ ಆರೋಪ ಮಾಡಿದ್ದಾರೆ.
‘ನಮ್ಮ ಯೋಧರು ಗಡಿಗಳನ್ನು ಸುರಕ್ಷಿತವಾಗಿಡಲು ಅವಿಶ್ರಾಂತ ಹೋರಾಡುತ್ತಿದ್ದಾರೆ. ಇಲ್ಲಿ, ಐತಿಹಾಸಿಕ ನಗರಿಯಲ್ಲಿ ಅಕ್ರಮ ವಲಸಿಗರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಎಐಎಂಐಎಂ, ಟಿಆರ್ಎಸ್ ಯತ್ನಿಸುತ್ತಿವೆ. ಇವರೆಲ್ಲ ಈ ಕೃತ್ಯಕ್ಕಾಗಿ ಜನತೆಗೆ ಉತ್ತರ ನೀಡಬೇಕಾಗುತ್ತದೆ’ ಎಂದು ಇರಾನಿ ಹೇಳಿದ್ದಾರೆ.
‘ಪ್ರತಿಯೊಬ್ಬ ಭಾರತೀಯನ ಹಕ್ಕುಗಳನ್ನು ರಕ್ಷಿಸಬೇಕು. ತೆರಿಗೆದಾರರ ಹಣವು ಅರ್ಹರಿಗೇ ಸಲ್ಲುವುದನ್ನು ಖಚಿತಪಡಿಸಿಕೊಳ್ಳಬೇಕು’ ಎಂದೂ ಅವರು ಹೇಳಿದ್ದಾರೆ.
ಲವ್ ಜಿಹಾದ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಮಹಿಳೆಯರನ್ನು ಅಪರಾಧ ಮತ್ತು ವಂಚನೆಯ ಸಂಬಂಧಗಳಿಗೆ ಬಲವಂತಪಡಿಸುವುದನ್ನು ತಡೆಯಲು ರಾಜ್ಯ ಸರ್ಕಾರವು ಕ್ರಮ ಕೈಗೊಂಡರೆ ಅದನ್ನು ಭಾರತೀಯರು ಬೆಂಬಲಿಸಬಾರದೇ? ಅದನ್ನು ಈ ದೃಷ್ಟಿಕೋನದಿಂದಲೇ ನೋಡಬೇಕು ಎಂಬುದು ನನ್ನ ಮನವಿ’ ಎಂದು ಹೇಳಿದ್ದಾರೆ.
ಗ್ರೇಟರ್ ಹೈದರಾಬಾದ್ ಪುರಸಭೆ ಚುನಾವಣೆಯು ಡಿಸೆಂಬರ್ 1ರಂದು ನಡೆಯಲಿದ್ದು, 4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.