ADVERTISEMENT

ಬೆಂಗಳೂರಿನಿಂದ 23 ಗಂಟೆಗಳ ಪ್ರಯಾಣದ ಬಳಿಕ ಚೆನ್ನೈ ತಲುಪಿದ ಶಶಿಕಲಾ

ಪಿಟಿಐ
Published 9 ಫೆಬ್ರುವರಿ 2021, 8:13 IST
Last Updated 9 ಫೆಬ್ರುವರಿ 2021, 8:13 IST
ಚೆನ್ನೈನಲ್ಲಿ ಎಐಎಡಿಎಂಕೆ ಸ್ಥಾಪಕ ಎಂ.ಆರ್‌ ರಾಮಚಂದ್ರನ್‌ ಅವರ ಪ್ರತಿಮೆಗೆ ಹೂವಿನ ಮಾಲೆ ಹಾಕಿ ಗೌರವ ಸಲ್ಲಿಸಿದ ಶಶಿಕಲಾ
ಚೆನ್ನೈನಲ್ಲಿ ಎಐಎಡಿಎಂಕೆ ಸ್ಥಾಪಕ ಎಂ.ಆರ್‌ ರಾಮಚಂದ್ರನ್‌ ಅವರ ಪ್ರತಿಮೆಗೆ ಹೂವಿನ ಮಾಲೆ ಹಾಕಿ ಗೌರವ ಸಲ್ಲಿಸಿದ ಶಶಿಕಲಾ   

ಚೆನ್ನೈ: ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾ ಅವರು ಬೆಂಗಳೂರಿನಿಂದ 23 ಗಂಟೆಗಳ ಪ್ರಯಾಣದ ಬಳಿಕ ಮಂಗಳವಾರ ಚೆನ್ನೈಗೆ ಬಂದರು.

ಬೆಂಗಳೂರಿನಿಂದ ಸೋಮವಾರ ಬೆಳಿಗ್ಗೆ ಶಶಿಕಲಾ ಅವರು ಕಾರಿನ ಮೂಲಕ ಚೆನ್ನೈನತ್ತ ಪ್ರಯಣ ಬೆಳೆಸಿದ್ದರು. ಈ ವೇಳೆ ತಮಿಳುನಾಡು ತಲುಪುವವರೆಗೂ ದಾರಿಯುದ್ದಕ್ಕೂ ಬೆಂಬಲಿಗರು ಅವರನ್ನು ಸ್ವಾಗತಿಸಿದರು. ಮಂಗಳವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆಶಶಿಕಲಾ ಅವರು ಟಿ ನಗರಕ್ಕೆ ಬಂದರು.

ಶಶಿಕಲಾ, ತಮ್ಮ ನಿವಾಸಕ್ಕೆ ತೆರಳುವುದಕ್ಕೂ ಮುನ್ನ ರಾಮಪುರಂನಲ್ಲಿರುವ ಎಐಎಡಿಎಂಕೆ ಸ್ಥಾಪಕ, ದಿವಂಗತ ಮಾಜಿ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್‌ ಅವರ ಮನೆಗೆ ಭೇಟಿ ನೀಡಿ, ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ADVERTISEMENT

ಈ ವೇಳೆ ಅವರ ಸೋದರಳಿಯ, ಅಮ್ಮ ಮಕ್ಕಳ್‌ ಮುನ್ನೇತ್ರ ಕಳಗಂ (ಎಎಂಎಂಕೆ) ನಾಯಕ ಟಿಟಿವಿ ದಿನಕರನ್‌ ಉಪಸ್ಥಿತರಿದ್ದರು.

ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಟಿಟಿವಿ ದಿನಕರನ್‌ ,‘ಎಐಎಡಿಎಂಕೆ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬ ಕಾರಣಕ್ಕೆ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಡಿಎಂಕೆ ಆಡಳಿತಕ್ಕೆ ಬರಬಾರದು. ಸಂದರ್ಭ ಬಂದರೆ ಎಎಂಎಂಕೆ ಮತ್ತು ಎಐಎಡಿಎಂಕೆ ಒಂದಾಗಲೂ ಸಿದ್ಧ’ ಎಂದರು.

‘ಡಿಎಂಕೆಯು ಜಯಲಲಿತಾ ಅವರ ಸಾವಿನ ಕುರಿತಾಗಿ ಶಶಿಕಲಾ ಅವರ ಮೇಲೆ ಆಧಾರ ರಹಿತ ಆರೋಪವನ್ನು ಮಾಡುತ್ತಿದೆ. ಅವರಿಗೆ ಈ ಬಗ್ಗೆ ನಿಜವಾದ ಕಾಳಜಿ ಇಲ್ಲ’ ಎಂದು ಅವರು ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಈಗಿನ ಪರಿಸ್ಥಿತಿಯಲ್ಲಿ ಶಶಿಕಲಾ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಕಷ್ಟವಾಗಬಹುದು. ಆದರೆ ಕಾನೂನಿನಲ್ಲಿ ಆಯ್ಕೆಗಳಿಗೆ ಅವಕಾಶವಿದೆ. ಬೇಕಿದ್ದಲ್ಲಿ ನಾವು ಕಾನೂನಿನ ಮೊರೆ ಹೋಗಬಹುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.