ಬೆಂಗಳೂರು: ‘ಆಪರೇಷನ್ ಕಮಲ’ಕ್ಕೆ ಮುಹೂರ್ತ ನಿಗದಿಯಾಗಿದೆ ಎನ್ನುವಷ್ಟರಲ್ಲಿ ಅತೃಪ್ತರ ಪೈಕಿ ಕೆಲವರನ್ನು ಮತ್ತೆ ತೆಕ್ಕೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕರು, ಶುಕ್ರವಾರ ನಡೆಯುವ ಶಾಸಕಾಂಗ ಪಕ್ಷದ (ಸಿಎಲ್ಪಿ) ವಿಶೇಷ ಸಭೆಯಲ್ಲಿ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಬಿಜೆಪಿಗೆ ಸಡ್ಡು ಹೊಡೆಯಲು ಅಣಿಯಾಗಿದ್ದಾರೆ.
ಕೆಲ ಅತೃಪ್ತ ಶಾಸಕರುಸಭೆಗೆ ಗೈರಾಗಬಹುದೆಂಬ ಆತಂಕ ಕಾಂಗ್ರೆಸ್ ನಾಯಕರಲ್ಲಿದ್ದು,ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕುಮಾರಕೃಪಾ ಅತಿಥಿಗೃಹದಲ್ಲಿ 50 ನಿಮಿಷಗಳ ಕಾಲತುರ್ತು ಸಭೆ ನಡೆಸಿದರು.
ಸಭೆಯಲ್ಲಿಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಬೆಳಗಾವಿಗೆ ತೆರಳಿದ್ದ ಸಿದ್ದರಾಮಯ್ಯ ಬೆಂಗಳೂರಿಗೆ ಬರಲು ತಡವಾದ ಕಾರಣ ಸಭೆಗೆ ಗೈರಾಗಿದ್ದರು.
ಸಭೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ‘ಬಿಜೆಪಿಯವರು ಆಪರೇಷನ್ ಮಾಡುತ್ತಲೇ ಇರಲಿ ಅದು ಅವರ ಕರ್ತವ್ಯ. ಅದು ಯಾವುದೂ ಯಶಸ್ವಿ ಆಗುವುದಿಲ್ಲ, ನನ್ನ ಸರ್ಕಾರಕ್ಕೆ ಯಾವುದೇ ಆತಂಕ ಇಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಉಮೇಶ್ ಜಾದವ್ಗೆ ಕಾಂಗ್ರೆಸ್ನಲ್ಲೇ ಇದ್ದರೆ ಉಜ್ವಲ ಭವಿಷ್ಯವಿದೆ. ಒಂದು ವೇಳೆ ಬಿಜೆಪಿಗೆ ಹೋದರೆ ಅವರ ಭವಿಷ್ಯ ಹಾಳಾಗಲಿದೆ. ಜಾಧವ್ ಜೊತೆ ನಾನು ಮಾತನಾಡಿದ್ದೇನೆ. ಪಕ್ಷದಲ್ಲೇ ಉಳಿಯುತ್ತೇನೆ ಎಂದು ಹೇಳಿದ್ದಾರೆ. ಅವರು ಬಿಜೆಪಿಗೆ ಹೋಗುವುದಿಲ್ಲವೆಂಬ ವಿಶ್ವಾಸ ಇದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು.
ಪಕ್ಷದ ಹಿರಿಯ ಮುಖಂಡರು ರಮೇಶ ಜಾರಕಿಹೊಳಿ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಸಭೆಗೆ ಬರುವುದಾಗಿ ಅವರು ಹೇಳಿರುವುದಾಗಿ ತಿಳಿಸಿದರು.
ಇವನ್ನೂ ಓದಿ...
*ಅತೃಪ್ತರ ಗೈರು ಸಂಭವ? ಸಿಎಲ್ಪಿಯತ್ತ ಎಲ್ಲರ ಚಿತ್ತ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.