
ಸಂತೋಷ್ ಹೆಗ್ಡೆ
ಮಂಡ್ಯ: ‘ಬಿಜೆಪಿ, ಜೆಡಿಎಸ್ ಸರ್ಕಾರದಲ್ಲಿ ಇದ್ದಂತೆ ಸಿದ್ದರಾಮಯ್ಯ ಸರ್ಕಾರದಲ್ಲೂ ಭ್ರಷ್ಟಾಚಾರ ಇದೆ. ಬಿಹಾರ ಚುನಾವಣೆಯಲ್ಲಿ ಸೋಲ್ತೀವಿ ಅಂತ ಮೊದಲೇ ಕಾಂಗ್ರೆಸ್ನವರಿಗೆ ಗೊತ್ತಿತ್ತು. ಅದಕ್ಕೆ ವೋಟ್ ಚೋರಿ ವಿಚಾರ ಶುರು ಮಾಡಿದ್ರು’ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ‘ವೋಟ್ ಚೋರಿ ಅಷ್ಟು ಸುಲಭವಿಲ್ಲ. ವಿಚಾರಣೆ ಮಾಡಲು ಸಾಧ್ಯವಿಲ್ಲ ಅಂತ ಕೋರ್ಟ್ ಹೇಳಿದೆ. ಬಾಯಿಗೆ ಬಂದಾಗೆ ಹೇಳ್ತಾರೆ. ಸೋತಿದ್ದಕ್ಕೆ ಕಾರಣ ಕೊಡುತ್ತಾರಷ್ಟೆ’ ಎಂದು ಹೇಳಿದರು.
‘ಭ್ರಷ್ಟಾಚಾರ ನಿರ್ಮೂಲನೆ ಮಾಡೋಕೆ ಸಾಧ್ಯವೇ ಇಲ್ಲ. ಪುರಾಣದಲ್ಲೂ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪವಿದೆ. ಹಣ ಕೊಟ್ಟು ಹುದ್ದೆಗೆ ಹೋದವರಿಗೆ ಹಣ ಮಾಡೋದೇ ಕೆಲಸವಾಗಿದೆ. ಶೇ 40ರಷ್ಟು ಕಮಿಷನ್ ಕೊಟ್ಟರೆ ಉಳಿದ ಹಣದಲ್ಲಿ ರಸ್ತೆ ಗುಂಡಿ ಮುಚ್ಚೋದು ಹೇಗೆ? ದೇಶದಲ್ಲಿ ಅನೇಕ ಸಮಸ್ಯೆಗಳಿದ್ದರೂ ಸೌಲಭ್ಯ ನೀಡಲು ಸರ್ಕಾರದ ಬಳಿ ಹಣವಿಲ್ಲ. ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ’ ಎಂದು ದೂರಿದರು.
‘ಲಂಚ ತೆಗೆದುಕೊಂಡು ಸಿಕ್ಕಾಕೊಂಡ್ರೆ ಕೋರ್ಟ್ನಿಂದ ಶಿಕ್ಷೆಯಾಗಲು 30 ವರ್ಷಗಳಾಗುತ್ತವೆ. ಅದಕ್ಕೆ ಯಾರೂ ಕಾನೂನಿಗೆ ಹೆದರಲ್ಲ. ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಿಲ್ಲ, ನಿಯಂತ್ರಣ ಮಾಡಬಹುದು ಅಷ್ಟೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.