ADVERTISEMENT

ಕೆರೆಗೆ ನೀರು ತಂದ ಯುವಪಡೆ

ಹುಲೇಮಳಲಿಶಿವಪುರ: ಸರ್ಕಾರದ ನೆರವಿಲ್ಲದೆ ₹53 ಲಕ್ಷದ ಯೋಜನೆ ಜಾರಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2019, 20:12 IST
Last Updated 12 ಅಕ್ಟೋಬರ್ 2019, 20:12 IST
ಹೊಳಲ್ಕೆರೆ ತಾಲ್ಲೂಕಿನ ಹಿರೇಹಳ್ಳದಿಂದ ಪೈಪ್ ಮೂಲಕ ನೀರು ಲಿಫ್ಟ್ ಮಾಡುತ್ತಿರುವ ದೃಶ್ಯ
ಹೊಳಲ್ಕೆರೆ ತಾಲ್ಲೂಕಿನ ಹಿರೇಹಳ್ಳದಿಂದ ಪೈಪ್ ಮೂಲಕ ನೀರು ಲಿಫ್ಟ್ ಮಾಡುತ್ತಿರುವ ದೃಶ್ಯ   

ಹೊಳಲ್ಕೆರೆ: ತಾಲ್ಲೂಕಿನ ಶಿವಪುರ ಗ್ರಾಮದ ಯುವಕರು ಹಿರಿಯರ ಮಾರ್ಗ ದರ್ಶನದಲ್ಲಿ ಸರ್ಕಾರದ ನೆರವಿಲ್ಲದೆ ₹53 ಲಕ್ಷ ವೆಚ್ಚದ ನೀರಾವರಿ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ.

ಹಿರೇಹಳ್ಳ, ಕರ್ಲಹಳ್ಳದಿಂದ ಗ್ರಾಮದ ಹುಲೇಮಳಲಿ-ಶಿವಪುರ ಕೆರೆಗೆ ಏತನೀರಾವರಿ ಮೂಲಕ ನೀರು ಹರಿಸಿದ್ದಾರೆ. ಗ್ರಾಮದಿಂದ ಹಿರೇಹಳ್ಳಿ ಸುಮಾರು 2.5 ಕಿ.ಮೀ.ದೂರವಿದ್ದು, ಅಲ್ಲಿಂದ 1 ಅಡಿ ಅಗಲ, 20 ಅಡಿ ಉದ್ದದ 350 ಪೈಪ್‌ಗಳನ್ನು ಹಾಕಲಾಗಿದೆ. 20 ಎಚ್‌ಪಿ ಸಾಮರ್ಥ್ಯದ 4 ಶಕ್ತಿಶಾಲಿ ಮೋಟಾರ್‌ಗಳ ಮೂಲಕ ನೀರನ್ನು ಲಿಫ್ಟ್ ಮಾಡಲಾಗುತ್ತಿದೆ.

ರೈತರಿಂದ ಹಣ ಸಂಗ್ರಹ: ‘ಗ್ರಾಮದ ಯುವಕರು ರೈತರಿಂದ ಹಣ ಸಂಗ್ರಹಿಸಿ ಯೋಜನೆ ಜಾರಿಗೆ ನಿರ್ಧರಿಸಲಾಯಿತು. ಕೆರೆಯ 700 ಎಕರೆ ಅಚ್ಚಕಟ್ಟು ಪ್ರದೇಶದ ಗ್ರಾಮಗಳಾದ ಶಿವಪುರ, ಹುಲೇಮಳಲಿ, ಕುನುಗಲಿ ರೈತರಿಂದ ಎಕರೆಗೆ ₹ 5 ಸಾವಿರ ಸಂಗ್ರಹಿಸಿದೆವು. ಕೆರೆಗೆ ನೀರು ಬಂದರೆ ಅಡಿಕೆ ತೋಟಗಳಿಗೆ ಅನುಕೂಲ ಆಗುತ್ತದೆ ಎಂದು ರೈತರೂ ಸಂತಸದಿಂದ ಹಣ ನೀಡಿದರು.

ADVERTISEMENT

ಮುಖಂಡ, ಮಾಜಿ ಶಾಸಕ ಪಿ. ರಮೇಶ್, ಪರಮೇಶ್ವರಪ್ಪ, ಮಹೇಶ್ವರಪ್ಪ ಅವರ ಮಾರ್ಗದರ್ಶನ ದಲ್ಲಿ ‘ತರಳಬಾಳು ಜಗದ್ಗುರು ಶಿವಕುಮಾರ ಸ್ವಾಮಿ ಏತನೀರಾವರಿ ಸಮಿತಿ’ ರಚಿಸಿಕೊಂಡು ಯೋಜನೆ ಜಾರಿಗಾಗಿ ಶ್ರಮಿಸಲಾಯಿತು’ ಎಂದು ಸಮಿತಿಯ ಅಧ್ಯಕ್ಷ ಎಚ್.ಎನ್. ಬಸವರಾಜ್ ವಿವರಿಸಿದರು . ಉಪಾಧ್ಯಕ್ಷ ಚಂದ್ರಶೇಖರ್, ಎಂ.ಜೆ. ನಾಗರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಆರ್. ಶಿವಕುಮಾರ್, ಸಿ. ವಿಜಯ ಕುಮಾರ್ ಹಾಗೂ ಸಿ.ಎನ್. ಸುರೇಶ್ ಕೂಡ ಇದನ್ನು ಅನುಮೋದಿಸಿದರು.

ಹುಲೇಮಳಲಿ-ಶಿವಪುರ ಕೆರೆಗೆ ನೀರಿನ ಮೂಲ ಇಲ್ಲ. ಕುನುಗಲಿ ಕೆರೆ ತುಂಬಿದ ನಂತರ ನಮ್ಮೂರ ಕೆರೆಗೆ ನೀರು ಹರಿಯಬೇಕು. ಆ ಕೆರೆ ತುಂಬುವ ಹೊತ್ತಿಗೆ ಮಳೆಗಾಲವೇ ಮುಗಿಯುತ್ತದೆ. ಹಿರೇಹಳ್ಳದಲ್ಲಿ ವ್ಯರ್ಥವಾಗಿ ಹರಿಯುವ ನೀರನ್ನು ಮೇಲೆತ್ತಿ ಕೆರೆಗೆ ಹರಿಸಲಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದರು.

-2.5 ಕಿ.ಮೀ. ದೂರದಿಂದ ಏತನೀರಾವರಿ ಮೂಲಕ ಕೆರೆಗೆ ನೀರು

-ಒಂದು ಅಡಿ ಅಗಲದ 350 ಪಿವಿಸಿ ಪೈಪ್ ಬಳಕೆ

-ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಪ್ರೇರಣೆ


ನಾಲ್ಕು ತಿಂಗಳಲ್ಲಿ ಯೋಜನೆ ಪೂರ್ಣ

ಇದೇ ವರ್ಷ ಏ.28ರಂದು ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಕಾಮಗಾರಿಗೆ ಚಾಲನೆ ನೀಡಿದ್ದರು. ಹಿಂಗಾರು ಮಳೆಯ ಸಂದರ್ಭದಲ್ಲಿ ಹಿರೇಹಳ್ಳದಿಂದ ನೀರು ಹರಿಯುವುದರಿಂದ ಕೆರೆಗೆ ನೀರು ಹರಿಸಲು ಅನುಕೂಲ ಆಗುತ್ತದೆ. ಹೀಗಾಗಿ ಮಳೆಗಾಲ ಮುಗಿಯುವ ಒಳಗಾಗಿ ಕೆಲಸ ಪೂರ್ಣಗೊಳಿಸುವಂತೆ ಸೂಚಿಸಿದ್ದರು. ಅವರ ನಿರ್ದೇಶನದಂತೆ ಯುವಕರು ಕೇವಲ ನಾಲ್ಕು ತಿಂಗಳಲ್ಲಿ ಕಾಮಗಾರಿ ಮುಗಿಸಿದ್ದು, ಕೆರೆಗೆ ನೀರು ಹರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಸಾಣೇಹಳ್ಳಿ ಶ್ರೀ ಅವರು ಗ್ರಾಮಸ್ಥರೊಂದಿಗೆ ಸಂಭ್ರಮ ಹಂಚಿಕೊಂಡರು.

***

ಸರ್ಕಾರದ ನೆರವಿಲ್ಲದೆ ನೀರಾವರಿ ಯೋಜನೆ ಜಾರಿ ಗೊಳಿಸಬಹುದು ಎಂದು ನಮ್ಮೂರಿನ ಯುವಕರು ತೋರಿಸಿ ದ್ದಾರೆ. ಇದು ಎಲ್ಲರಿಗೂ ಮಾದರಿಯಾಗಲಿ.

- ಎಚ್.ಎನ್. ಬಸವರಾಜ್, ನೀರಾವರಿ ಸಮಿತಿಯ ಅಧ್ಯಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.