ಮಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ಕುರಿತು ಬಿಜೆಪಿ ವತಿಯಿಂದ ಸೋಮವಾರ ಆಯೋಜಿಸಿದ್ದ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಯುವಕರು, ‘ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಅವರ ಕೈ, ಕಾಲು ಕಡಿಯುತ್ತೇವೆ’ ಎಂದು ಬೆದರಿಕೆಯ ಘೋಷಣೆಕೂಗುತ್ತಿರುವವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೇಸರಿ ವಸ್ತ್ರವನ್ನು ತಲೆಗೆ ಸುತ್ತಿಕೊಂಡು ಘೋಷಣೆ ಕೂಗುತ್ತಿರುವ ಯುವಕರು ತಮ್ಮ ಸುದ್ದಿಗೆ ಬರದಂತೆ ಯುಡಿಎಫ್ ಸದಸ್ಯರು ಹಾಗೂ ಶಾಸಕ ಖಾದರ್ ಅವರಿಗೆ ಮಲಯಾಳ ಭಾಷೆಯಲ್ಲಿ ಬೆದರಿಕೆ ಹಾಕಿದ್ದಾರೆ. ಫೇಸ್ಬುಕ್, ವಾಟ್ಸ್ ಆ್ಯಪ್, ಟೆಲಿಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೊ ತುಣುಕು ಹರಿದಾಡುತ್ತಿದೆ.
‘ಯುಡಿಎಫ್ನ ಹಂದಿಗಳೇ ನಮ್ಮ ಸುದ್ದಿಗೆ ಬರಬೇಡಿ. ಸುದ್ದಿಗೆ ಬಂದರೆ ಕೈ -ಕಾಲು ತೆಗೆಯುತ್ತೇವೆ. ತಲೆಯನ್ನೂ ತೆಗೆಯುತ್ತೇವೆ. ನಾಯಿ ಮಗನೆ ಖಾದರ್ ನಮ್ಮ ಸುದ್ದಿಗೆ ಬರಬೇಡ. ಸುದ್ದಿಗೆ ಬಂದರೆ ಕೈ -ಕಾಲು ತೆಗೆಯುತ್ತೇವೆ. ತಲೆಯನ್ನೂ ತೆಗೆಯುತ್ತೇವೆ...’ ಎಂದು ಕೇಕೆ ಹಾಕುತ್ತಾ ಕುಣಿಯುತ್ತಿರುವ ದೃಶ್ಯ ವಿಡಿಯೊ ತುಣುಕಿನಲ್ಲಿದೆ.
ದೂರು ನೀಡುವುದಿಲ್ಲ: ಈ ಕುರಿತು ಪ್ರತಿಕ್ರಿಯಿಸಿದ ಯು.ಟಿ.ಖಾದರ್, ‘ಬೆದರಿಕೆ ಹಾಕಿದವರ ವಿರುದ್ಧ ನಾನು ದೂರು ನೀಡುವುದಿಲ್ಲ. ದೂರು ನೀಡಿ, ಜೈಲಿಗೆ ಕಳಿಸಬಹುದು. ಆದರೆ, ಅವರ ತಂದೆ, ತಾಯಂದಿರು ಅನುಭವಿಸುವ ಕಷ್ಟದ ಬಗ್ಗೆ ನನಗೆ ಕನಿಕರವಿದೆ’ ಎಂದರು.
‘ನನ್ನ ತಲೆ ಕಡಿಯುವುದರಿಂದ ಸಂತೋಷವಾಗುದಾದರೆ ಅವರು ಹೇಳಲಿ. ಎಲ್ಲಿಗೆ ಕರೆದರೂ ಬರಲು ನಾನು ಸಿದ್ಧ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.