ADVERTISEMENT

ನಟ ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ ಚಿತ್ರ ನಿಷೇಧಿಸಿ: ಸರ್ಕಾರಕ್ಕೆ JDS ಆಗ್ರಹ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಮೇ 2025, 11:14 IST
Last Updated 29 ಮೇ 2025, 11:14 IST
ಕಮಲ್ ಹಾಸನ್ –ಪಿಟಿಐ ಚಿತ್ರ
ಕಮಲ್ ಹಾಸನ್ –ಪಿಟಿಐ ಚಿತ್ರ   

ಬೆಂಗಳೂರು: ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿರುವ ನಟ ಕಮಲ್‌ ಹಾಸನ್‌ ಅಭಿನಯದ ‘ಥಗ್ ಲೈಫ್’ ಚಿತ್ರಕ್ಕೆ ರಾಜ್ಯ ಸರ್ಕಾರ ಕರ್ನಾಟಕದಲ್ಲಿ ನಿಷೇಧ ಹೇರಬೇಕು ಎಂದು ಜೆಡಿಎಸ್‌ ಒತ್ತಾಯಿಸಿದೆ.

‘ಕನ್ನಡ ತಮಿಳಿನಿಂದ ಹುಟ್ಟಿರುವುದು’ ಎಂಬುದಾಗಿ ಹೇಳಿಕೆ ನೀಡುವ ಮೂಲಕ ನಟ ಕಮಲ್‌ ಹಾಸನ್‌ ಅವರು ವಿವಾದಕ್ಕೀಡಾಗಿದ್ದಾರೆ.

ಇದೇ ವಿಚಾರವಾಗಿ ‘ಎಕ್ಸ್‌’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಜೆಡಿಎಸ್‌, ‘ಕನ್ನಡ ಭಾಷೆ ಉಗಮದ ಬಗ್ಗೆ ಬಾಲಿಶ ಹಾಗೂ ಉದ್ಧಟತನದ ಹೇಳಿಕೆ ನೀಡಿರುವ ಭಾಷೆಗೇಡಿಯ ಚಿತ್ರ ಜೂನ್ 5ರಂದು ರಾಜ್ಯದಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರ ಪ್ರದರ್ಶನಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕೊಡದೆ ಕಮಲ್ ಹಾಸನ್‌ಗೆ ಬುದ್ಧಿ ಕಲಿಸಬೇಕು. ಕನ್ನಡ ನಾಡು, ಕನ್ನಡ ನುಡಿ ವಿರುದ್ಧವಾಗಿ ಮಾತನಾಡುವವರಿಗೆ ನಾವು ಕನ್ನಡ ಭಾಷೆಯ ಪರವಾಗಿದ್ದೇವೆ ಎಂಬ ಎಚ್ಚರಿಕೆಯನ್ನು ರಾಜ್ಯ ಸರ್ಕಾರ ತಲುಪಿಸಬೇಕು’ ಎಂದು ಆಗ್ರಹಿಸಿದೆ.

ADVERTISEMENT

ಈ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು, ನಾವು ಕನ್ನಡಿಗರು ಮತ್ತು ಕನ್ನಡದ ಪರವಾಗಿದ್ದೇವೆ ಎಂದು ಕೇವಲ ಬಾಯಿ ಮಾತಿನಲ್ಲಿ ಹೇಳಿದರೆ ಸಾಕಾಗುವುದಿಲ್ಲ. ಅದನ್ನು ಕೃತಿಯಲ್ಲೂ ಮಾಡಿ ತೋರಿಸಬೇಕು ಎಂದು ಜೆಡಿಎಸ್‌ ಗುಡುಗಿದೆ.

‘ಕನ್ನಡಿಗರು ಸಹಿಷ್ಣುಗಳು. ಅದರೆ, ಕನ್ನಡ ನಾಡು, ನುಡಿ, ಸಂಸ್ಕೃತಿ, ಪರಂಪರೆ ವಿಚಾರದಲ್ಲಿ ಕನ್ನಡಿಗರ ಸ್ವಾಭಿಮಾನ ಕೆಣಕಿದರೆ ಸಹಿಸುವುದಿಲ್ಲ. ಕನ್ನಡದ ವಿರುದ್ಧ ಲಘುವಾಗಿ ಮಾತನಾಡುವವರಿಗೆ ಸರ್ಕಾರ ತಕ್ಕ ಪಾಠ ಕಲಿಸಬೇಕು‌ ಎಂದು ಸರ್ಕಾರವನ್ನು ಆಗ್ರಹಿಸುತ್ತೇವೆ’ ಎಂದು ಜೆಡಿಎಸ್‌ ‘ಎಕ್ಸ್‌’ನಲ್ಲಿ ಪೋಸ್ಟ್ ಹಂಚಿಕೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಸೇರಿದಂತೆ ಅನೇಕರು ಕಮಲ್‌ ಹಾಸನ್ ಹೇಳಿಕೆಯನ್ನು ಖಂಡಿಸಿ, ಬೇಸರ ಹೊರಹಾಕಿದ್ದರು.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ನಟ ಕಮಲ್‌ ಹಾಸನ್‌ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಕುಮಾರ್ ಶೆಟ್ಟಿ ಬಣ) ಕಾರ್ಯಕರ್ತರು ಬೆಂಗಳೂರಿನ ಆರ್‌.ಟಿ. ನಗರ ಠಾಣೆಗೆ ದೂರು ನೀಡಿದ್ದಾರೆ.

‘ದೂರನ್ನು ಸ್ವೀಕರಿಸಲಾಗಿದೆ. ಇನ್ನೂ ಎಫ್‌ಐಆರ್ ದಾಖಲಿಸಿಲ್ಲ. ಕಾನೂನು ತಜ್ಞರು ಹಾಗೂ ಹಿರಿಯ ಅಧಿಕಾರಿಗಳ ಜತೆಗೆ ಚರ್ಚಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಚೆನ್ನೈನಲ್ಲಿ ನಡೆದ ‘ಥಗ್‌ ಲೈಫ್‌’ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿರುವ ತಮಿಳು ನಟ ಕಮಲ್ ಹಾಸನ್‌ ವಿರುದ್ದ ಕ್ರಮ ಕೈಗೊಳ್ಳಬೇಕು. ಕಮಲ್‌ ಹಾಸನ್‌ ಅವರು ಕನ್ನಡಿಗರ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ. ಎರಡು ರಾಜ್ಯದ ಜನರ ನಡುವೆ ವಿಷಬೀಜ ಬಿತ್ತುವ ಹಾಗೆ ಮಾತನಾಡಿದ್ದಾರೆ. ಕನ್ನಡಿಗರಿಗೆ ಅಪಮಾನ ಮಾಡಿದ್ದಾರೆ’ ಎಂದು ದೂರಿನಲ್ಲಿ ಪ್ರವೀಣ್‌ ಕುಮಾರ್ ಶೆಟ್ಟಿ ಉಲ್ಲೇಖಿಸಿದ್ದಾರೆ.

‘ಪ್ರತಿ ಬಾರಿ ತಮಿಳಿನ ಹೊಸ ಚಲನಚಿತ್ರ ಬಿಡುಗಡೆ ಸಮಾರಂಭದಲ್ಲಿ ಕನ್ನಡಿಗರ ಭಾವನೆಗೆ ಧಕ್ಕೆ ತರಲಾಗುತ್ತಿದೆ’ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಕಮಲ್ ಹಾಸನ್ ಅವರನ್ನು ಸ್ವಾಗತಿಸಲು ಹಾಕಿದ್ದ ಬ್ಯಾನರ್‌ಗಳನ್ನು ಕಿತ್ತು ಎಸೆದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.