ಬೆಂಗಳೂರು: ‘ರಾಜ್ಯದಲ್ಲಿ ಬರಗಾಲವಿದೆ. ಅದರ ಬಗ್ಗೆ ಚರ್ಚೆ ನಡೆಸಬೇಕಿದೆ. ಹೀಗಾಗಿ ನಾವು ಅಗತ್ಯವಿರುವಷ್ಟು ದಿವಸ ಒಂದು ಜಾಗದಲ್ಲಿ ಒಟ್ಟಿಗೆ ಇದ್ದು ಚರ್ಚೆ ಮಾಡುತ್ತೇವೆ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮಗೆ ಆಪರೇಷನ್ ಕಮಲದ ಭಯ ಇಲ್ಲ. ಆದರೂ ನಮ್ಮ ಶಾಸಕರನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳಬೇಕಲ್ವಾ? ಅವರ ದಾಳಿ ತಪ್ಪಿಸಿಕೊಳ್ಳಬೇಕಲ್ವಾ? ನಮ್ಮ ಪಕ್ಷದ ಎಲ್ಲ ಸಂಸದರು, ಮಂತ್ರಿಗಳು ಮತ್ತು ಶಾಸಕರು ಅಗತ್ಯವಿರುವಷ್ಟು ದಿನಸ ಒಟ್ಟಿಗೆ ಇರುತ್ತೇವೆ’ ಎಂದು ಪುನರುಚ್ಚರಿಸಿದರು.
‘ಬಿಜೆಪಿ ಮಾಡಿಸಿರುವ ಆಂತರಿಕ ಸಮೀಕ್ಷೆ ಪ್ರಕಾರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ನಾಲ್ಕು ಸ್ಥಾನ ಗೆದ್ದರೆ ಹೆಚ್ಚು. ಉಳಿದೆಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್–ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಕಳೆದ ಬಾರಿ ರಾಜ್ಯದಲ್ಲಿ ಬಿಜೆಪಿಯ 17 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ದಕ್ಷಿಣ ಭಾರತದಲ್ಲಿ ತಮ್ಮ ಪ್ರಭಾವವಿರುವ ಏಕೈಕ ರಾಜ್ಯವಾದ ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನಗೆಲ್ಲಲೇ ಬೇಕು ಎಂಬ ಹಪಾಹಪಿಯಿಂದ ಬಿಜೆಪಿ ಸರ್ಕಾರ ಅಸ್ಥಿರಗೊಳಿಸುವ ಕೆಲಸಕ್ಕೆ ಮುಂದಾಗಿದೆ’ ಎಂದು ಆರೋಪ ಮಾಡಿದರು.
‘ನಮ್ಮ ಹಲವು ಶಾಸಕರನ್ನು ಬಿಜೆಪಿಯವರು ಸಂಪರ್ಕಿಸಿ ₹25, ₹50 ಮತ್ತು ₹100 ಕೋಟಿಯ ಆಮಿಷವೊಡ್ಡಿದ್ದಾರೆ. ಮಂತ್ರಿ ಮಾಡ್ತೀವಿ, ಉಪಚುನಾವಣೆಯಲ್ಲಿ ನಾವೇ ಗೆಲ್ಲಿಸುತ್ತೇವೆ ಎಂದೂ ಆಶ್ವಾಸನೆಗಳನ್ನು ಕೊಟ್ಟಿದ್ದಾರೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರದ ಹಲವು ಸಚಿವರು ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ನೇರ ಆರೋಪ ಮಾಡಿದರು.
‘ಯಡಿಯೂರಪ್ಪ 2008ರಲ್ಲಿ ಮುಖ್ಯಮಂತ್ರಿಯಾದ ನಂತರವೇ ಆಪರೇಷನ್ ಕಮಲದಂಥ ಲಫಂಗ ರಾಜಕಾರಣ ಶುರುವಾಯಿತು.ಬಿಜೆಪಿಗೆ ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ಮಾಡಲು ಗುರುಗ್ರಾಮದಲ್ಲಿ ಉಳಿದುಕೊಂಡಿದ್ದರು ಎಂದರೆ ನಂಬಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಸಭೆಯಲ್ಲಿಒಟ್ಟು 76 ಶಾಸಕರು ಪಾಲ್ಗೊಂಡಿದ್ದರು.ನಾಲ್ವರು ಸದಸ್ಯರು ಹಾಜರಾಗಿಲ್ಲ. ಅವರ ಪೈಕಿ ಇಬ್ಬರು ಚಿಂಚೋಳಿಯ ಉಮೇಶ್ ಜಾಧವ್ ಮತ್ತು ನಾಗೇಂದ್ರ ಮಾಹಿತಿ ನೀಡಿದ್ದರು.ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಕಾರಣ ಕೊಟ್ಟಿಲ್ಲ. ಸಭೆಯಲ್ಲಿ ಪಾಲ್ಗೊಳ್ಳದ ನಾಲ್ವರಿಗೂ ವಿವರಣೆ ಕೇಳಿ ನೊಟೀಸ್ ಕೊಡ್ತೀನಿ ಎಂದು ಘೋಷಿಸಿದರು.
ಮಾಧ್ಯಮಗಳಿಗೆ ಬಿಜೆಪಿಯವರೇ ಪ್ರತಿದಿನ ಸುಳ್ಳು ಮಾಹಿತಿ ನೀಡಿ ಸಮ್ಮಿಶ್ರ ಸರ್ಕಾರ ಬಿದ್ದು ಹೋಗುತ್ತೆ ಸುದ್ದಿ ಬರುವಂತೆ ಮಾಡ್ತಿದ್ದಾರೆ. ಇದೆಲ್ಲಾ ಸುಳ್ಳು. ಸಮ್ಮಿಶ್ರ ಸರ್ಕಾರ ಉರುಳಿಸಬೇಕು ಎಂದುಬಿಜೆಪಿಯವರು ದೊಡ್ಡ ಹುನ್ನಾರ ನಡೆಸ್ತಾ ಇದ್ದಾರೆ. ಎರಡು–ಮೂರು ಸಾರಿ ಅವರಿಗೆ ಮುಖಭಂಗವಾಗಿದೆ. ಆದರೂಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ದಾರಿತುಳಿಯಲು ಶುರು ಮಾಡಿದ್ದಾರೆ ಎಂದು ಆರೋಪಿಸಿದರು.
ಈಗಲ್ಟನ್ ರೆಸಾರ್ಟ್ಗೆಕಾಂಗ್ರೆಸ್ ಶಾಸಕರು
ರಾಮನಗರ: ಕಾಂಗ್ರೆಸ್ನಶಾಸಕರು ಇಲ್ಲಿನ ರೆಸಾರ್ಟುಗಳಲ್ಲಿ ಶುಕ್ರವಾರ ರಾತ್ರಿ ವಾಸ್ತವ್ಯ ಹೂಡಲಿದ್ದು, ಅವರಿಗಾಗಿ ಕೊಠಡಿ ಕಾಯ್ದಿರಿಸಲಾಗಿದೆ.ಬಿಡದಿಯ ಈಟಲ್ ರೆಸಾರ್ಟ್ ನಲ್ಲಿ 30 ಹಾಗೂ ವಂಡರ್ ಲಾ ಮನೋರಂಜನಾ ಪಾರ್ಕ್ ರೆಸಾರ್ಟಿನಲ್ಲಿ 30 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರು ಮಾಹಿತಿ ನೀಡಿದರು.
ಇನ್ನಷ್ಟು ಸುದ್ದಿಗಳು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.