ಅಭಿಷೇಕ್ ಶರ್ಮಾ
(ಚಿತ್ರ ಕೃಪೆ: ಬಿಸಿಸಿಐ)
ದುಬೈ: ಏಷ್ಯಾ ಕಪ್ ಫೈನಲ್ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಸೋಲಿಸಿ ಭಾರತ ತಂಡ ಚಾಂಪಿಯನ್ ಆಗಿದೆ. ಟೂರ್ನಿಯುದ್ಧಕ್ಕು ಅಮೋಘ ಪ್ರದರ್ಶನ ತೋರಿದ ಅಭಿಷೇಕ್ ಶರ್ಮಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಪಂದ್ಯದ ಬಳಿಕ ಮಾತನಾಡಿದ ಅವರು ನಾನು ಟೀಂ ಇಂಡಿಯಾಗೆ ನೇರವಾಗಿ ಬಂದಿಲ್ಲ, ಒಂದೊಂದೆ ಮೆಟ್ಟಿಲು ಹತ್ತಿಕೊಂಡು ಬಂದಿದ್ದೇನೆ ಎಂದರು.
2018ರ ಅಂಡರ್-19 ವಿಶ್ವಕಪ್ ವಿಜೇತ ತಂಡದ ಪ್ರಮುಖ ಆಟಗಾರನಾಗಿದ್ದ ಅಭಿಷೇಕ್ ಶರ್ಮಾ ಟೀಂ ಇಂಡಿಯಾಗೆ ಪ್ರವೇಶ ಪಡೆಯಲು ಬರೋಬ್ಬರಿ 6 ವರ್ಷಕ್ಕಿಂತ ಅಧಿಕ ಸಮಯ ತೆಗೆದುಕೊಂಡರು. ಆದರೆ ಅವರ ಜೊತೆ ಅಂಡರ್–19 ತಂಡದಲ್ಲಿ ಆಡಿದ್ದ ಕೆಲವು ಆಟಗಾರರು ಬೇಗನೆ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು. ಅದು ತಮಗೆ ಸಂತೋಷ ತಂದಿರುವುದಾಗಿ ಅವರು ಹೇಳಿದರು.
2018 ರ ಜೂನಿಯರ್ ವಿಶ್ವಕಪ್ ಜಯಿಸಿದ ಒಂದು ವರ್ಷದೊಳಗೆ ತಂಡದ ನಾಯಕರಾಗಿದ್ದ ಪೃಥ್ವಿ ಶಾ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಮಾತ್ರವಲ್ಲ, ಅವರ ಸ್ನೇಹಿತರಾಗಿದ್ದ ಶುಭಮನ್ ಗಿಲ್ ಕೂಡ ಏಕದಿನ ತಂಡದಲ್ಲಿ ಚಾನ್ಸ್ ಪಡೆದುಕೊಂಡಿದ್ದರು.
ಈ ಬಗ್ಗೆ ಮಾತನಾಡಿದ ಅಭಿಷೇಕ್ ಶರ್ಮ, ಅವರು ‘ಲಿಫ್ಟ್‘ ತೆಗೆದುಕೊಂಡರು. ಆದರೆ ನನಗೆ ‘ಮೆಟ್ಟಿಲು‘ ಹತ್ತುವುದರಿಂದ ಲಾಭವಾಗಿದೆ ಎಂದು ತಿಳಿಸಿದರು.
‘ಕೆಲವರು ನೇರವಾಗಿ ತಂಡಕ್ಕೆ ಸೇರುತ್ತಾರೆ. ಇನ್ನೂ ಕೆಲವರು ಎಲ್ಲವನ್ನೂ ಮಾಡಿ ಬಳಿಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುತ್ತಾರೆ. ಹಾಗಾಗಿ ನಾನು ಎಲ್ಲವನ್ನೂ ಮಾಡಬೇಕು ಎಂದುಕೊಂಡೆ. ಏಕೆಂದರೆ ಒಬ್ಬ ಆಟಗಾರನಾಗಿ ನಾನು ನೇರವಾಗಿ ತಂಡಕ್ಕೆ ಬಂದಿದ್ದರೆ, ಈಗ ಕಲಿತಿರುವ ಎಲ್ಲಾ ವಿಷಯಗಳನ್ನು ಕಲಿಯಲು ಅವಕಾಶ ಸಿಗುತ್ತಿರಲಿಲ್ಲ‘ ಎಂದರು.
ಫೈನಲ್ ಪಂದ್ಯದ ಕುರಿತು ಮಾತನಾಡಿ ಅವರು, ‘ಇದು ಒತ್ತಡದ ಪಂದ್ಯ ಎಂದು ನನಗೆ ಅನಿಸಿಲ್ಲ. ನಾವು ಎಲ್ಲಾ ಪಂದ್ಯಗಳಿಗೂ ಒಂದೇ ರೀತಿಯ ತಯಾರಿ ನಡೆಸಿದ್ದೆವು. ನಾನು ಆಡುವ ರೀತಿಗೆ ನನಗೆ ಆತ್ಮವಿಶ್ವಾಸದ ಅಗತ್ಯವಿತ್ತು ಅದನ್ನು ನನಗೆ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ನೀಡಿದರು‘ ಎಂದರು.
ಈ ಬಾರಿಯ ಏಷ್ಯಾ ಕಪ್ನಲ್ಲಿ ಅಭಿಷೇಕ್ ಶರ್ಮಾ ಆಡಿರುವ 7 ಪಂದ್ಯಗಳಿಂದ 3 ಅರ್ಧಶತಕ ಸಹಿತ 314 ರನ್ ಸಿಡಿಸಿದ್ದಾರೆ. ಹಾಗೂ ಟೂರ್ನಿಯಲ್ಲಿ ಅತ್ಯಧಿಕ ರನ್ ಸ್ಕೋರರ್ ಆಗಿದ್ದು, ಆ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.