ADVERTISEMENT

Asia Cup 2025 | ಭಾರತ ತಂಡ ಪ್ರಕಟ: ಸೂರ್ಯಕುಮಾರ್ ನಾಯಕ, ಗಿಲ್ ಉಪನಾಯಕ

15 ಆಟಗಾರರ ತಂಡ ಆಯ್ಕೆ: ಬೂಮ್ರಾ, ಜಿತೇಶ್‌ ಕಣಕ್ಕೆ

ಪಿಟಿಐ
Published 19 ಆಗಸ್ಟ್ 2025, 10:26 IST
Last Updated 19 ಆಗಸ್ಟ್ 2025, 10:26 IST
<div class="paragraphs"><p>ಸೂರ್ಯಕುಮಾರ್ ಯಾದವ್</p></div>

ಸೂರ್ಯಕುಮಾರ್ ಯಾದವ್

   

ಮುಂಬೈ: ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್ ಅವರನ್ನು ಟಿ20 ತಂಡದ ಉಪನಾಯಕರನ್ನಾಗಿ ನೇಮಕ ಮಾಡಲಾಗಿದೆ.

ಏಷ್ಯಾ ಕಪ್ ಟೂರ್ನಿಗಾಗಿ ಬುಧವಾರ ಭಾರತ ತಂಡವನ್ನು ಪ್ರಕಟಿಸಲಾಯಿತು. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ 15 ಆಟಗಾರರ ಬಳಗವನ್ನು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರಕರ್ ಪ್ರಕಟಿಸಿದರು. 

ADVERTISEMENT

2024ರಲ್ಲಿ ಶ್ರೀಲಂಕಾ ಎದುರಿನ ಟಿ20 ಕ್ರಿಕೆಟ್ ಪಂದ್ಯದಲ್ಲಿ ಗಿಲ್ ಆಡಿದ್ದರು. ನಂತರ ಅವರು ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದು ಈಗಲೇ. ಕಳೆದ ಸರಣಿಯಲ್ಲಿ ಉಪನಾಯಕರಾಗಿದ್ದ ಅಕ್ಷರ್ ಪಟೇಲ್ ಅವರು ತಂಡಕ್ಕೆ ಆಯ್ಕೆಯಾಗಿದ್ದಾರೆ. 

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಂಗ್ಲೆಂಡ್ ನಲ್ಲಿ ನಡೆದಿದ್ದ ಸರಣಿಯಲ್ಲಿ ಗಿಲ್ ಅವರು ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಚೆನ್ನಾಗಿ ಆಡಿದ್ದಾರೆ’ ಎಂದು ಅಗರಕರ್ ತಿಳಿಸಿದ್ದಾರೆ.

ವೇಗಿ ಜಸ್‌ಪ್ರೀತ್ ಬೂಮ್ರಾ ಅವರ ಆಯ್ಕೆ ಕುರಿತು ಇದ್ದ ಅನುಮಾನಗಳಿಗೂ ತೆರೆಬಿದ್ದಿದೆ. ಅಕ್ಟೋಬರ್‌ನಲ್ಲಿ ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿಯಲ್ಲಿ ಆಡಲು ಅವರು ಫಿಟ್‌ನೆಸ್ ಕಾಯ್ದುಕೊಳ್ಳಲು ಏಷ್ಯಾ ಕಪ್‌ನಿಂದ ಬಿಡುವು ನೀಡಲಾಗುವುದು ಎನ್ನಲಾಗಿತ್ತು. ಆದರೆ, ಬೂಮ್ರಾ ಅವರಿಗೆ ಸ್ಥಾನ ನೀಡಲಾಗಿದೆ. ಹೋದ ವರ್ಷ ಟಿ20 ವಿಶ್ವಕಪ್ ನಂತರ ಅವರು ಚುಟುಕು ಮಾದರಿಯಲ್ಲಿ ಆಡಿರಲಿಲ್ಲ. 

ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್, ಹೆಚ್ಚುವರಿ ವಿಕೆಟ್‌ಕೀಪರ್ ಆಗಿ ಜಿತೇಶ್ ಶರ್ಮಾ ಅವರೂ ಬಳಗದಲ್ಲಿದ್ದಾರೆ. ಐವರು ಕಾಯ್ದಿಟ್ಟ ಆಟಗಾರರಲ್ಲಿ ಯಶಸ್ವಿ ಜೈಸ್ವಾಲ್ ಕೂಡ ಒಬ್ಬರಾಗಿದ್ದಾರೆ. 

‘ಜೈಸ್ವಾಲ್ ಅವರು ಆಯ್ಕೆಯಾಗದಿರುವುದು ದುರದೃಷ್ಟಕರ. ಅವರು ಇನ್ನೂ ಸ್ವಲ್ಪ ಕಾಲ ಕಾಯಬೇಕಾಗಬಹುದು’ ಎಂದರು. 

ಈ ತಂಡದಲ್ಲಿ ಕಾಣಿಸಿಕೊಳ್ಳದ ಮತ್ತೊಂದು ಪ್ರಮುಖ ಹೆಸರು ಶ್ರೇಯಸ್ ಅಯ್ಯರ್ ಅವರದ್ದು. ಈ ವರ್ಷದ ಐಪಿಎಲ್‌ನಲ್ಲಿ ಶ್ರೇಯಸ್ ನಾಯಕತ್ವದ ಪಂಜಾಬ್ ಕಿಂಗ್ಸ್ ಫೈನಲ್ ಪ್ರವೇಶಿಸಿತ್ತು. 

‘ಬಹಳಷ್ಟು ಒಳ್ಳೆಯ ಆಕಾಂಕ್ಷಿಗಳು ಇದ್ದಾಗಲೂ ಆಯ್ಕೆ ಪ್ರಕ್ರಿಯೆ ಮಾಡುವುದು ತಲೆನೋವಿನ ಸಂಗತಿಯಾಗುತ್ತದೆ. ಉತ್ತಮರಲ್ಲಿಯೇ ಶ್ರೇಷ್ಠರನ್ನು ಹುಡುಕುವುದು ಸುಲಭವಲ್ಲ’ ಎಂದು ಅಗರಕರ್ ಹೇಳಿದರು.

ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡವು ಎ ಗುಂಪಿನಲ್ಲಿ ಆಡಲಿದೆ. ಪಾಕಿಸ್ತಾನ, ಒಮನ್ ಮತ್ತು ಯುಎಇ ತಂಡಗಳು ಈ ಗುಂಪಿನಲ್ಲಿವೆ.

ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಜಸ್‌ಪ್ರೀತ್ ಬೂಮ್ರಾ, ಜಿತೇಶ್ ಶರ್ಮಾ, ಶಿವಂ ದುಬೆ, ಅರ್ಷದೀಪ್ ಸಿಂಗ್, ಸಂಜು ಸ್ಯಾಮ್ಸನ್, ಹರ್ಷಿತ್ ರಾಣಾ, ತಿಲಕ್ ವರ್ಮಾ, ರಿಂಕು ಸಿಂಗ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.