ADVERTISEMENT

ರಜತ್ ಪಾಟೀದಾರ್ ಬಳಗದ ಜಯಭೇರಿ: ಕೇಂದ್ರ ವಲಯಕ್ಕೆ 11 ವರ್ಷಗಳ ನಂತರ ದುಲೀಪ್ ಟ್ರೋಫಿ

ಗಿರೀಶ ದೊಡ್ಡಮನಿ
Published 15 ಸೆಪ್ಟೆಂಬರ್ 2025, 19:30 IST
Last Updated 15 ಸೆಪ್ಟೆಂಬರ್ 2025, 19:30 IST
<div class="paragraphs"><p>ದುಲೀಪ್ ಟ್ರೋಫಿ</p></div>

ದುಲೀಪ್ ಟ್ರೋಫಿ

   

ಬೆಂಗಳೂರು: ಹನ್ನೊಂದು ವರ್ಷಗಳ ದೀರ್ಘ ಕಾಯುವಿಕೆಯ ನಂತರ ಕೇಂದ್ರ ವಲಯ ತಂಡವು ದುಲೀಪ್ ಟ್ರೋಫಿಗೆ ಮುತ್ತಿಕ್ಕಿತು.

ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಸೋಮವಾರ ಬೆಳಿಗ್ಗೆ 65 ರನ್‌ಗಳ ಗುರಿಯನ್ನು ಸುಮಾರು ಒಂದೂವರೆ ಗಂಟೆಯಲ್ಲಿ ತಲುಪಿದ ಕೇಂದ್ರ ತಂಡವು ಏಳನೇ ಬಾರಿ ಈ ಟ್ರೋಫಿ ತನ್ನದಾಗಿಸಿಕೊಂಡಿತು. ಈ ಸುಲಭ ಗುರಿಯನ್ನು ಮುಟ್ಟುವ ಹಾದಿಯಲ್ಲಿ ತಂಡವು ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. 20.3 ಓವರ್‌ಗಳಲ್ಲಿ ಗುರಿಸಾಧಿಸಿತು. ಅಷ್ಟರಮಟ್ಟಿಗೆ ದಕ್ಷಿಣ ವಲಯದ ಬೌಲರ್‌ಗಳು ‘ದಿಟ್ಟ ಹೋರಾಟ’ ತೋರಿದರು. ವೇಗಿ ಗುರ್ಜಪನೀತ್ ಸಿಂಗ್ (21ಕ್ಕೆ2) ಮತ್ತು ಸ್ಪಿನ್ನರ್ ಅಂಕಿತ್ ಶರ್ಮಾ (22ಕ್ಕೆ2) ಅವರು ತಮ್ಮ ತಂಡಕ್ಕೆ ‘ಪವಾಡಸದೃಶ’ ಜಯದ ಕಾಣಿಕೆ ನೀಡಲು ಪ್ರಯತ್ನಿಸಿದರು. ಆದರೆ ಕೇಂದ್ರ ತಂಡವನ್ನು ಆರಂಭಿಕ ಬ್ಯಾಟರ್ ಅಕ್ಷಯ್ ವಾಡಕರ್ (ಅಜೇಯ 19; 52ಎ, 4X3)  ಜಯದತ್ತ ಮುನ್ನಡೆಸಿದರು. 

ADVERTISEMENT

ಭಾನುವಾರ ದಿನದಾಟದ ಮುಕ್ತಾಯದ ಕೆಲವೇ ಕ್ಷಣಗಳ ಮುನ್ನ ದಕ್ಷಿಣ ವಲಯವು ಆಲೌಟ್ ಆಗಿತ್ತು. ಸೋಮವಾರ ಬೆಳಿಗ್ಗೆ ಸುಲಭವಾಗಿ ಗುರಿಸಾಧಿಸುವ ಭರವಸೆಯೊಂದಿಗೆ ಕೇಂದ್ರ ವಲಯ ಬ್ಯಾಟಿಂಗ್ ಆರಂಭಿಸಿತು. ಆದರೆ ಎಡಗೈ ಸ್ಪಿನ್ನರ್ ಅಂಕಿತ್ ಶರ್ಮಾ ಅವರು ನಾಲ್ಕನೇ ಓವರ್‌ನಲ್ಲಿಯೇ ದನೀಶ್ ಮಾಳೆವರ್ ವಿಕೆಟ್ ಗಳಿಸಿದರು. ಇದಾಗಿ ನಾಲ್ಕು ಓವರ್‌ಗಳ ನಂತರ ಶುಭಂ ಶರ್ಮಾ ಅವರೂ ಗುರ್ಜಪನೀತ್ ಸಿಂಗ್ ಬೌಲಿಂಗ್‌ನಲ್ಲಿ ಅವಸರದ ಹೊಡೆತಕ್ಕೆ ಕೈಹಾಕಿ ಅಜರುದ್ದೀನ್‌ಗೆ ಕ್ಯಾಚ್ ಕೊಟ್ಟರು. 

ಅದೇ ಓವರ್‌ನಲ್ಲಿ ಸಾರಾಂಶ್ ಜೈನ್ ಅವರೂ ಸಿದ್ಧಾರ್ಥ್‌ ಪಡೆದ ಆಕರ್ಷಕ ಕ್ಯಾಚ್‌ಗೆ ನಿರ್ಗಮಿಸಿದರು. 

ಈ ಹಂತದಲ್ಲಿ ಕ್ರೀಸ್‌ಗೆ ಬಂದ ನಾಯಕ ರಜತ್ (13; 27ಎ, 4X2) ಅವರು ಅಕ್ಷಯ್ ಜೊತೆಗೆ ತಾಳ್ಮೆಯಿಂದ ಆಡಿದರು. ಆದರೆ ಅಂಕಿತ್ ಬೌಲಿಂಗ್‌ನಲ್ಲಿ ನಿಧೀಶ್‌ಗೆ ಕ್ಯಾಚ್ ಕೊಟ್ಟರು. ಅಷ್ಟೊತ್ತಿಗೆ ತಂಡವು (4ಕ್ಕೆ49) ಗೆಲುವಿನ ಸನಿಹ ತಲುಪಿತ್ತು. ಅಕ್ಷಯ್ ಮತ್ತು ಯಶ್ ರಾಥೋಡ್ (ಔಟಾಗದೇ 11) ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು. 

ಮೂರುವರೆ ತಿಂಗಳ ಹಿಂದಷ್ಟೇ ರಜತ್ ಪಾಟೀದಾರ್ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಪ್ರಶಸ್ತಿ ಜಯಿಸಿತ್ತು. ಇದೀಗ ಅವರದ್ದೇ ನಾಯಕತ್ವದ ತಂಡವು ದೇಶಿ ಕ್ರಿಕೆಟ್‌ನ ಪ್ರತಿಷ್ಠಿತ ಪ್ರಶಸ್ತಿ ಜಯಿಸಿದೆ. 

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್

ದಕ್ಷಿಣ ವಲಯ: 63 ಓವರ್‌ಗಳಲ್ಲಿ 149, ಕೇಂದ್ರ ವಲಯ: 145.1 ಓವರ್‌ಗಳಲ್ಲಿ 511.

ಎರಡನೇ ಇನಿಂಗ್ಸ್

ದಕ್ಷಿಣ ವಲಯ: 121 ಓವರ್‌ಗಳಲ್ಲಿ 426. ಕೇಂದ್ರ ವಲಯ: 20.3 ಓವರ್‌ಗಳಲ್ಲಿ 4ಕ್ಕೆ66 (ಅಕ್ಷಯ್ ವಾಡಕರ್ ಔಟಾಗದೇ 19, ರಜತ್ ಪಾಟೀದಾರ್ 13, ಯಶ್ ರಾಥೋಡ್ ಔಟಾಗದೇ 13, ಗುರ್ಜಪನೀ್ತ್‌ ಸಿಂಗ್ 21ಕ್ಕೆ2, ಅಂಕಿತ್ ಶರ್ಮಾ 22ಕ್ಕೆ2)

ಫಲಿತಾಂಶ: ಕೇಂದ್ರ ವಲಯಕ್ಕೆ 6 ವಿಕೆಟ್‌ಗಳ ಜಯ.

ಪಂದ್ಯಶ್ರೇಷ್ಠ: ಯಶ್ ರಾಥೋಡ್.

ಸರಣಿಶ್ರೇಷ್ಠ: ಸಾರಾಂಶ್ ಜೈನ್.

ಮುಂಬರುವ ಋತುವಿನಲ್ಲಿ ಉತ್ತಮವಾಗಿ ಆಡುವ ಆತ್ಮವಿಶ್ವಾಸ ಹೆಚ್ಚಾಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್‌ ಎರಡರಲ್ಲೂ ಮಾಡಿರುವ ಸಾಧನೆ ಖುಷಿ ತಂದಿದೆ.
– ಸಾರಾಂಶ್ ಜೈನ್, ಸರಣಿ ಶ್ರೇಷ್ಠ ಆಟಗಾರ
ತಂಡವು ಟೂರ್ನಿಯಲ್ಲಿ ಉತ್ತಮವಾಗಿ ಆಡಿದೆ. ಅದರಲ್ಲೂ ಆ್ಯಂಡ್ರೆ ಸಿದ್ಧಾರ್ಥ್, ಆರ್. ಸ್ಮರಣ್ ಅವರ ಆಟ ಚೆನ್ನಾಗಿತ್ತು. ಅವರಿಗೆ ಉತ್ತಮ ಭವಿಷ್ಯವಿದೆ.
– ಲಕ್ಷ್ಮೀಪತಿ ಬಾಲಾಜಿ,ದಕ್ಷಿಣ ವಲಯದ ಕೋಚ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.