
ಹಾರ್ದಿಕ್ ಪಾಂಡ್ಯ
ಏಷ್ಯಾಕಪ್ ಟ್ರೋಫಿಯ ಸಂದರ್ಭದಲ್ಲಿ ಕ್ವಾಡ್ರೈಸ್ಪ್ ಗಾಯಕ್ಕೆ ಒಳಗಾಗಿದ್ದ ಭಾರತ ಕ್ರಿಕೆಟ್ ತಂಡದ ತಾರಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ. ಸದ್ಯ, ಚೇತರಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಹಾಗೂ ಬೌಲಿಂಗ್ನಲ್ಲಿ 1 ವಿಕೆಟ್ ಪಡೆಯುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ತಮ್ಮ ಸ್ಫೋಟಕ ಇನಿಂಗ್ಸ್ನಲ್ಲಿ ಅವರು 6 ಬೌಂಡರಿ ಮತ್ತು 4 ಸಿಕ್ಸರ್ಗಳನ್ನು ಬಾರಿಸಿದರು. ಆ ಮೂಲಕ ಸಂಕಷ್ಟದಲ್ಲಿದ್ದ ಟೀಂ ಇಂಡಿಯಾವನ್ನು 175 ರನ್ಗಳಿಗೆ ತಲುಪುವಂತೆ ನೋಡಿಕೊಂಡರು. ಬ್ಯಾಟಿಂಗ್ ಜೊತೆ ಬೌಲಿಂಗ್ನಲ್ಲೂ ಕಮಾಲ್ ಮಾಡಿದ ಅವರು 1 ವಿಕೆಟ್ ಪಡೆದು ಮಿಂಚಿದರು. ಆ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಪಂದ್ಯದ ಬಳಿಕ ಮಾತನಾಡಿದ ಹಾರ್ದಿಕ್ ಪಾಂಡ್ಯ, ‘ನಾನು ದೊಡ್ಡ ಹೊಡೆತಗಳ ಮೂಲಕ ಬೌಲರ್ಗಳನ್ನು ಹಿಮ್ಮೆಟ್ಟಿಸಬೇಕಾಯಿತು. ಪಿಚ್ ಬ್ಯಾಟರ್ಗಳಿಗೆ ಅನುಕೂಲವಾಗಿರಲಿಲ್ಲ, ಬೌನ್ಸ್ ಆಗುತ್ತಿದೆ ಎಂದು ಅರಿತುಕೊಂಡು, ಬೌಲರ್ಗಳನ್ನು ಭಯಪಡಿಸಲು ನಿರ್ಧರಿಸಿದೆ. ಬ್ಯಾಟಿಂಗ್ ಮಾಡುವಾಗ ಟೈಮಿಂಗ್ ಮಾಡುವುದು ಮುಖ್ಯವಾಗಿತ್ತು. ನನಗೆ ನನ್ನ ಬ್ಯಾಟಿಂಗ್ ಬಗ್ಗೆ ತುಂಬಾ ತೃಪ್ತಿ ಇದೆ’ ಎಂದು ಅವರು ಹೇಳಿದರು.
‘ನನ್ನ ಫಿಟ್ನೆಸ್ ದೃಷ್ಟಿಯಿಂದ ನೋಡುವುದಾದರೆ, ಕಳೆದ ಆರೇಳು ತಿಂಗಳು ಅತ್ಯಂತ ಮುಖ್ಯವಾಗಿತ್ತು. ಕಳೆದ 50 ದಿನಗಳು ನನ್ನ ಪ್ರೀತಿಪಾತ್ರರಿಂದ ದೂರವಿದ್ದು, NCAಯಲ್ಲಿ ತರಬೇತಿ ಪಡೆದುಕೊಂಡಿದ್ದೇನೆ. ಈಗ ಅದರ ಫಲಿತಾಂಶ ಸಿಕ್ಕಿದೆ’ ಎಂದು ಸಂತಸ ವ್ಯಕ್ತಪಡಿಸಿದರು.
ಪವರ್ಪ್ಲೇನಲ್ಲಿ ಬೌಲಿಂಗ್ ಮಾಡದಿರುವ ಬಗ್ಗೆ ಮಾತನಾಡಿದ ಪಾಂಡ್ಯ, ‘ಒಬ್ಬ ಕ್ರಿಕೆಟಿಗನಾಗಿ ನನ್ನ ಜವಾಬ್ದಾರಿ ಏನು ಎಂಬುದು ನನಗೆ ತಿಳಿದಿದೆ. ತಂಡದ ಅಗತ್ಯಕ್ಕೆ ತಕ್ಕಂತೆ ನಾನು ಆಡುತ್ತೇನೆ. ನನ್ನ ವೈಯಕ್ತಿಕ ಆಟದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಯಾವಾಗಲು ತಂಡ ಮೊದಲು ಎಂಬ ನಿಯಮ ಪಾಲಿಸುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.