ಹಾರ್ದಿಕ್ ಪಾಂಡ್ಯ
(ಪಿಟಿಐ ಚಿತ್ರ)
ಬೆಂಗಳೂರು: 'ಭಾರತಕ್ಕಾಗಿ ಸಾಧ್ಯವಾದಷ್ಟು ಐಸಿಸಿ ಟ್ರೋಫಿಗಳನ್ನು ಗೆಲ್ಲುವುದು ನನ್ನ ಗುರಿಯಾಗಿದೆ' ಎಂದು ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯ ಗೆಲುವಿನ ಬಳಿಕ ಪಾಂಡ್ಯ ನೀಡಿರುವ ಸಂದರ್ಶನದ ವಿಡಿಯೊವನ್ನು ಬಿಸಿಸಿಐ ಹಂಚಿಕೊಂಡಿದೆ.
'2024ರಲ್ಲಿ ನಾವು ಟ್ವೆಂಟಿ-20 ವಿಶ್ವಕಪ್ ಗೆದ್ದಾಗ ಇದು ಇಲ್ಲಿಗೆ ಅಂತ್ಯವಾಗುವುದಿಲ್ಲ ಎಂದು ಹೇಳಿದ್ದೆ. ನಾನೀಗಲೂ 5-6 ಐಸಿಸಿ ಟ್ರೋಫಿಗಳನ್ನು ಗೆಲ್ಲಲು ಬಯಸುತ್ತೇನೆ. ಈಗ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಸಾಧ್ಯವಾಗಿರುವುದರಲ್ಲಿ ಸಂತಸವಿದೆ. ಈ ಗೆಲುವು ಇಡೀ ಭಾರತೀಯರಿಗೆ ಸಲ್ಲುತ್ತದೆ' ಎಂದು ಅವರು ಹೇಳಿದ್ದಾರೆ.
'2017ರಲ್ಲಿ ನನ್ನ ಕೆಲಸ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಆದರೆ ಈಗ ನಾನು ಕೂಡಾ ಚಾಂಪಿಯನ್ಸ್ ಟ್ರೋಫಿ ವಿಜೇತ ಎಂದು ಹೇಳಬಲ್ಲೆ' ಎಂದು ಹಾರ್ದಿಕ್ ಸಂತಸ ವ್ಯಕ್ತಪಡಿಸಿದ್ದಾರೆ.
2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸೋಲನುಭವಿಸಿತ್ತು. ಫೈನಲ್ನಲ್ಲಿ ಹಾರ್ದಿಕ್ 43 ಎಸೆತಗಳಲ್ಲಿ 76 ರನ್ ಗಳಿಸಿ ರನೌಟ್ ಆಗಿದ್ದರು.
'ನನ್ನ ತಂಡದ ಗೆಲುವನ್ನು ಖಚಿತಪಡಿಸಿಕೊಳ್ಳುವುದು ನನ್ನ ಇರಾದೆಯಾಗಿದೆ. ಹಾಗಾಗಿ ಈ ಗೆಲುವು ತುಂಬಾ ತೃಪ್ತಿದಾಯಕವಾಗಿದೆ. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ' ಎಂದು ಅವರು ತಿಳಿಸಿದ್ದಾರೆ.
'ಚಾಂಪಿಯನ್ಸ್ ಟ್ರೋಫಿ ಕನಸು ಈಡೇರಿದೆ. ಮುಂದಿನ ಗುರಿ ತವರಿನಲ್ಲಿ ನಡೆಯಲಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಾಗಿದೆ' ಎಂದು ಪಾಂಡ್ಯ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.