ADVERTISEMENT

ರಣಜಿ ಟ್ರೋಫಿ: ಅಯ್ಯರ್ ಬ್ಯಾಟಿಂಗ್ ಸೊಗಸು; ವೈಶಾಖ ತಿರುಗೇಟು

ಶುಭಂ, ರಜತ್ ಉಪಯುಕ್ತ ಕಾಣಿಕೆ, ಶ್ರೇಯಸ್‌ಗೆ ಎರಡು ವಿಕೆಟ್

ಗಿರೀಶ ದೊಡ್ಡಮನಿ
Published 22 ಜನವರಿ 2026, 23:30 IST
Last Updated 22 ಜನವರಿ 2026, 23:30 IST
<div class="paragraphs"><p>ಬೆಂಗಳೂರು ಹೊರವಲಯದಲ್ಲಿರುವ ಆಲೂರಿನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಮಧ್ಯ ಪ್ರದೇಶದ ಬ್ಯಾಟರ್ ವೆಂಕಟೇಶ್ ಐಯ್ಯರ್‌ ರ್ಕರ್ನಾಟಕ ವಿರುದ್ದ ಆಡಿದ ಪರಿ. </p></div>

ಬೆಂಗಳೂರು ಹೊರವಲಯದಲ್ಲಿರುವ ಆಲೂರಿನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಮಧ್ಯ ಪ್ರದೇಶದ ಬ್ಯಾಟರ್ ವೆಂಕಟೇಶ್ ಐಯ್ಯರ್‌ ರ್ಕರ್ನಾಟಕ ವಿರುದ್ದ ಆಡಿದ ಪರಿ.

   

ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ಆಲೂರು (ಬೆಂಗಳೂರು): ಮಧ್ಯಪ್ರದೇಶದ ತಂಡದ ಬ್ಯಾಟರ್‌ಗಳು ಗುರುವಾರದ ಬಹುತೇಕ ಅವಧಿಯಲ್ಲಿ ಸಾಧಿಸಿದ್ದ ಹಿಡಿತವನ್ನು ಸಂಜೆಯ ಹೊತ್ತಿಗೆ ಸಡಿಲಗೊಳಿಸುವಲ್ಲಿ ಕರ್ನಾಟಕದ ಬೌಲರ್‌ಗಳು ಯಶಸ್ವಿಯಾದರು.  

ADVERTISEMENT

ಇದರಿಂದಾಗಿ ಆಲೂರಿನ ಕೆಎಸ್‌ಸಿಎ ಮೈದಾನ (1)ದಲ್ಲಿ ಆರಂಭವಾದ ರಣಜಿ ಟ್ರೋಫಿ ಎಲೀಟ್ ಬಿ ಗುಂಪಿನ ಪಂದ್ಯದಲ್ಲಿ ದಿನದಾಟದ ಮುಕ್ತಾಯಕ್ಕೆ ಆತಿಥೇಯರ ಪಾಳೆಯದಲ್ಲಿ ಸಮಾಧಾನದ ಭಾವ ಮೂಡಿತು. ದಿನದ ಮೊದಲ 65 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡಿದ್ದ ಪ್ರವಾಸಿ ಬಳಗವು ದೊಡ್ಡ ಮೊತ್ತ ಕಲೆಹಾಕುವ ಲಕ್ಷಣಗಳಿದ್ದವು. ಆದರೆ ಕೊನೆಯ ದಿನದಾಟದ ಅಂತಿಮ 25 ಓವರ್‌ಗಳಲ್ಲಿ ಮೂರು ವಿಕೆಟ್‌ಗಳನ್ನು ಉರುಳಿಸುವಲ್ಲಿ ಕರ್ನಾಟಕದ ವೇಗಿ ವೈಶಾಖ ವಿಜಯಕುಮಾರ್ (51ಕ್ಕೆ2) ಹಾಗೂ   ಅನುಭವಿ ಸ್ಪಿನ್ನರ್ ಶ್ರೇಯಸ್ ಗೋಪಾಲ್ (53ಕ್ಕೆ2) ಸಫಲರಾದರು. ಇದರಿಂದಾಗಿ ಮಧ್ಯಪ್ರದೇಶ ತಂಡವು ದಿನದಾಟದ ಮುಕ್ತಾಯಕ್ಕೆ 90 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 244 ರನ್ ಗಳಿಸಿತು. 

ವಿಶ್ವಾಸಭರಿತ ಬ್ಯಾಟಿಂಗ್ ಪ್ರದರ್ಶಿಸಿದ  ವೆಂಕಟೇಶ್ ಅಯ್ಯರ್  ಅಯ್ಯರ್ (87; 135ಎ),  ಶುಭಂ ಶರ್ಮಾ (33; 151 ಎ) ಮತ್ತು ರಜತ್ ಪಾಟೀದಾರ್ (30 ರನ್) ಅವರನ್ನು ಪೆವಿಲಿಯನ್‌ಗೆ ಕಳಿಸುವಲ್ಲಿ ಬೌಲರ್‌ಗಳು ಯಶಸ್ವಿಯಾದರು. ಅಷ್ಟರ ಮಟ್ಟಿಗೆ ಕರ್ನಾಟಕವು ನಿರಾಳವಾಯಿತು. ಋತುವಿನಲ್ಲಿ ಈ ಮೂವರೂ ಉತ್ತಮ ಲಯದಲ್ಲಿದ್ದಾರೆ. ಇಲ್ಲಿಯೂ ತಮ್ಮ ಸಾಮರ್ಥ್ಯ ಮೆರೆದರು. 

176 ನಿಮಿಷ ಕ್ರೀಸ್‌ನಲ್ಲಿದ್ದ ಅಯ್ಯರ್  ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 15ನೇ ಅರ್ಧಶತಕ ದಾಖಲಿಸಿದರು. 72 ಎಸೆತಗಳಲ್ಲಿ ಅವರು 50ರ ಗಡಿ ದಾಟಿದರು. ಬ್ಯಾಕ್‌ಫುಟ್ ಪಂಚ್, ಫ್ಲಿಕ್, ಡ್ರೈವ್‌ಗಳ ಮೂಲಕ ರನ್ ಗಳಿಸಿದರು. ದಿನದಾಟದ ಅಂತ್ಯಕ್ಕೆ ಇನ್ನೂ ಏಳು ಓವರ್‌ಗಳು ಬಾಕಿ ಇರುವಾಗಲೇ ವೈಶಾಖ ಎಸೆತವನ್ನು ಹುಕ್ ಮಾಡಿದ ವೆಂಕಟೇಶ್ ಅವರ ಕ್ಯಾಚ್‌ ಡೀಪ್ ಫೈನ್ ಲೆಗ್‌ನಲ್ಲಿದ್ದ ವಿದ್ವತ್ ಕಾವೇರಪ್ಪ ಕೈಸೇರಿತು. ಚಹಾ ವಿರಾಮಕ್ಕೂ ಮುನ್ನ ವೈಶಾಖ ಅವರು ಹಿಮಾಂಶು ಮಂತ್ರಿ ವಿಕೆಟ್ ಕೂಡ ಗಳಿಸಿದ್ದರು. 

ಈಚೆಗೆ ನಡೆದಿದ್ದ ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಕಂಕಷನ್ (ತಲೆಗೆ ಚೆಂಡು ಬಡಿದು ಗಾಯದ ಸಾಧ್ಯತೆ) ನಿಂದಾಗಿ ಮೈದಾನ ತೊರೆದಿದ್ದ ವೈಶಾಖ ಈ ಪಂದ್ಯಕ್ಕೆ ಫಿಟ್ ಆಗಿ ಮರಳಿದ್ದಾರೆ.   

ಸ್ಪಿನ್ನರ್ ಶ್ರೇಯಸ್ 66ನೇ ಓವರ್‌ನಲ್ಲಿ ವಿಕೆಟ್‌ಕೀಪರ್‌ ಕೃತಿಕ್ ಕೃಷ್ಣಗೆ ಕ್ಯಾಚಿತ್ತ ಶುಭಂ ಶರ್ಮಾ ಪೆವಿಲಿಯನ್‌ಗೆ ಮರಳಿದರು.  86ನೇ ಓವರ್‌ನಲ್ಲಿ ರಜತ್  ವಿಕೆಟ್ ಅನ್ನೂ ಶ್ರೇಯಸ್  ತಮ್ಮದಾಗಿಸಿಕೊಂಡರು.  ಶ್ರೇಯಸ್  ಹಾಕಿದ ಎಸೆತಕ್ಕೆ ಸರಿಯಾದ ದಿಕ್ಕು ತೋರಿಸುವಲ್ಲಿ ವಿಫಲರಾದ ರಜತ್  ಶಾರ್ಟ್‌ ಕವರ್‌ನಲ್ಲಿದ್ದ ಅನೀಶ್  ಕೈಗೆ ಕ್ಯಾಚ್ ಆದರು. 

ಶಿಖರ್‌ಗೆ ವಿಕೆಟ್: ಪ್ರಥಮ ವಿಕೆಟ್ ಜೊತೆಯಾಟದಲ್ಲಿ ಹಿಮಾಂಶು ಮಂತ್ರಿ (39; 114ಎ, 4X4) ಮತ್ತು ಯಶ್ ದುಬೆ (29; 57ಎ, 4X6) 53 ರನ್ ಸೇರಿಸಿ ಉತ್ತಮ ಆರಂಭ ನೀಡಿದರು.  ದುಬೆ, 19ನೇ ಓವರ್‌ನಲ್ಲಿ  ಸ್ಪಿನ್ನರ್ ಶಿಖರ್ ಶೆಟ್ಟಿ ಎಸೆತವನ್ನು ರಕ್ಷಣಾತ್ಮಕವಾಗಿ ಆಡುವ ಬದಲಿಗೆ ದೊಡ್ಡ ಹೊಡೆತಕ್ಕೆ ಕೈಹಾಕಿದರು.  ಮಿಡ್‌ ಆನ್‌ ಫೀಲ್ಡರ್ ವಿದ್ಯಾಧರ್ ಪಾಟೀಲ ಕ್ಯಾಚ್ ಪಡೆದರು. 

ಶ್ರೀಜಿತ್‌ಗೆ ಗಾಯ: ಮಯಂಕ್ ಅಸ್ವಸ್ಥ

ಊಟದ ವಿರಾಮದ ನಂತರದ ಅವಧಿಯಲ್ಲಿ ಕರ್ನಾಟಕವು ಹೆಚ್ಚು ಒತ್ತಡ ಅನುಭವಿಸಬೇಕಾಯಿತು. ವಿಕೆಟ್‌ಕೀಪರ್ ಕೆ.ಎಲ್. ಶ್ರೀಜಿತ್ ಅವರಿಗೆ ಚೆಂಡನ್ನು ತಡೆಯುವ ಪ್ರಯತ್ನದಲ್ಲಿ ಬಲಗೈ ಬೆರಳಿಗೆ ಗಾಯವಾಯಿತು. 36ನೇ ಓವರ್‌ನಲ್ಲಿ ತುಸು ಅಸ್ವಸ್ಥರಾದ ನಾಯಕ ಮಯಂಕ್ ಅಗರವಾಲ್ ಪೆವಿಲಿಯನ್‌ಗೆ ಮರಳಿ ಚಿಕಿತ್ಸೆ ಪಡೆದರು. ಇಬ್ಬರೂ ಆಟಗಾರರು ಮತ್ತೆ ಕಣಕ್ಕಿಳಿಯಲಿಲ್ಲ. ಶ್ರೀಜಿತ್ ಬದಲಿಗೆ ಕೃತಿಕ್ ಕೃಷ್ಣ ಕೀಪಿಂಗ್ ನಿಭಾಯಿಸಿದರು.   

ಮಯಂಕ್ ಅವರು ಸಂಜೆಯ ಹೊತ್ತಿಗೆ ಚೇತರಿಸಿಕೊಂಡಿದ್ದು ಎರಡನೇ ದಿನದಾಟದಲ್ಲಿ ಕಣಕ್ಕೆ ಮರಳುವ ನಿರೀಕ್ಷೆ ಇದೆ. 

ಬೆಂಗಳೂರು ಹೊರವಲಯದಲ್ಲಿರುವ ಆಲೂರಿನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಮಧ್ಯ ಪ್ರದೇಶದ ಬ್ಯಾಟರ್ ಹಿಮಾಂಶು ಮಂತ್ರಿ ವಿಕೆಟ್ ಪಡೆದು ಸಂಭ್ರಮಿಸಿದ ಕರ್ನಾಟಕದ ವ್ಯಷಕ್ .

ಒಂದೇ ದಿನ 23 ವಿಕೆಟ್ ಪತನ

ರಾಜ್‌ಕೋಟ್: ಇಲ್ಲಿಯ ನಿರಂಜನ್ ಶಾ ಕ್ರೀಡಾಂಗಣದಲ್ಲಿ ಸೌರಾಷ್ಟ್ರ ಮತ್ತು ಪಂಜಾಬ್ ನಡುವಣ ರಣಜಿ ಪಂದ್ಯದ ಮೊದಲ ದಿನದಾಟದಲ್ಲಿ ಒಟ್ಟು 23 ವಿಕೆಟ್‌ಗಳು ಪತನವಾದವು. 

ಟಾಸ್ ಗೆದ್ದ ಸೌರಾಷ್ಟ್ರ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಜಯ ಗೋಹಿಲ್ (82) ಅರ್ಧಶತಕ ಗಳಿಸಿದರು. ಆದರೂ ತಂಡವು 47.1 ಓವರ್‌ಗಳಲ್ಲಿ 172 ರನ್‌ಗಳಿಗೆ ಕುಸಿಯಿತು. ಪಂಜಾಬ್‌ನ ಸ್ಪಿನ್ನರ್ ಹರಪ್ರೀತ್ ಬ್ರಾರ್ 38 ರನ್‌ ನೀಡಿ 6 ವಿಕೆಟ್‌ ಪಡೆದರು.

ಆದರೆ ಶುಭಮನ್ ಗಿಲ್ ನಾಯಕತ್ವದ ಪಂಜಾಬ್ ತಂಡವನ್ನು ಖೆಡ್ಡಾಕ್ಕೆ ಕೆಡವಿದ ಸೌರಾಷ್ಟ್ರ ಮೊದಲ ಇನಿಂಗ್ಸ್‌ನಲ್ಲಿ 33 ರನ್‌ಗಳ ಮುನ್ನಡೆ ಪಡೆಯಿತು. ಪಂಜಾಬ್ ತಂಡವು 40.1 ಓವರ್‌ಗಳಲ್ಲಿ 139 ರನ್ ಮಾತ್ರ ಗಳಿಸಿತು. ಸ್ಪಿನ್ನರ್ ಪಾರ್ಥ್ ಬೂತ್ (33ಕ್ಕೆ5) ಮಿಂಚಿದರು. ಎರಡನೇ ಇನಿಂಗ್ಸ್‌ನಲ್ಲಿ ಸೌರಾಷ್ಟ್ರ ತಂಡವು 24 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.