
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ (ಒಳಚಿತ್ರದಲ್ಲಿ ಇರ್ಫಾನ್ ಪಠಾಣ್)
ಬೆಂಗಳೂರು: ಟೆಸ್ಟ್ ಹಾಗೂ ಟಿ20 ಕ್ರಿಕೆಟ್ನ ಭರಾಟೆಯಲ್ಲಿ ಕಳೆದುಹೋಗುತ್ತಿರುವ ಏಕದಿನ ಮಾದರಿಗೆ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ, ಹೊಸ ಹುರುಪು ನೀಡಿದ್ದಾರೆ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಹೇಳಿದ್ದಾರೆ.
'ಸ್ಟಾರ್ ಸ್ಪೋರ್ಟ್ಸ್' ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಅನುಭವಿ ಆಟಗಾರರಾದ ವಿರಾಟ್ ಮತ್ತು ರೋಹಿತ್ ಅವರಿಗೆ ಹೆಚ್ಚೆಚ್ಚು ಏಕದಿನ ಪಂದ್ಯಗಳಲ್ಲಿ ಆಡಲು ಅವಕಾಶ ನೀಡಬೇಕು. ಇದರಿಂದ ಅಭಿಮಾನಿಗಳಿಗೆ, ಅವರ ಆಟವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತದೆ. 2024ರಲ್ಲಿ ಟಿ20 ಹಾಗೂ 2025ರಲ್ಲಿ ಟೆಸ್ಟ್ ಮಾದರಿಗೆ ಈ ಇಬ್ಬರು, ಏಕದಿನ ಮಾದರಿಯಲ್ಲಷ್ಟೇ ಮುಂದುವರಿದಿರುವುದು '50 ಓವರ್ಗಳ ಆಟ'ಕ್ಕೆ ಚೈತನ್ಯ ತುಂಬಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯು ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ 2027ರಲ್ಲಿ ನಡೆಯಲಿದೆ. ಆದಾಗ್ಯೂ, ಅದರಲ್ಲಿ ಪಾಲ್ಗೊಳ್ಳುವ ಟೀಂ ಇಂಡಿಯಾದಲ್ಲಿ ವಿರಾಟ್ ಹಾಗೂ ರೋಹಿತ್ ಕಣಕ್ಕಿಳಿಯುವುದು ಇನ್ನೂ ಖಾತ್ರಿಯಾಗಿಲ್ಲ. ಆದರೆ, ಇತ್ತೀಚೆಗೆ ಮುಕ್ತಾಯವಾದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ವಿರಾಟ್ ಅಮೋಘ ಪ್ರದರ್ಶನ ತೋರಿದ್ದರು. ರೋಹಿತ್, ಮೊದಲೆರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದರೂ, ಅಂತಿಮ ಪಂದ್ಯದಲ್ಲಿ ಲಯಕ್ಕೆ ಮರಳಿದ್ದರು.
ಇದೀಗ ದೇಶೀಯ ಕ್ರಿಕೆಟ್ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲೂ ವಿರಾಟ್ (ದೆಹಲಿ ಪರ) ಹಾಗೂ ರೋಹಿತ್ (ಮುಂಬೈ ಪರ), ಉತ್ತಮ ಪ್ರದರ್ಶನ ನೀಡಿದ್ದಾರೆ. ಅಭಿಮಾನಿಗಳು ಅವರಿಬ್ಬರ ಆಟವನ್ನು ಕಣ್ತುಂಬಿಕೊಳ್ಳಲು ಕ್ರೀಡಾಂಗಣದತ್ತ ಧಾವಿಸಿದ್ದನ್ನು ಉಲ್ಲೇಖಿಸಿ ಇರ್ಫಾನ್ ಮಾತನಾಡಿದ್ದಾರೆ.
ರೋ–ಕೊ ಜೋಡಿ ಒಂದೇ ಮಾದರಿಯಲ್ಲಿ ಆಡುತ್ತಿರುವುದು ಏಕದಿನ ಕ್ರಿಕೆಟ್ ವೀಕ್ಷಿಸಲು ಅಭಿಮಾನಿಗಳು ಹಾತೊರೆಯುವಂತೆ ಮಾಡಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ತ್ರಿಕೋನ, ಚತುಷ್ಕೋನ (ಬಹು ರಾಷ್ಟ್ರೀಯ) ಸರಣಿಗಳನ್ನು ಆಯೋಜಿಸುವ ಕುರಿತು ಹಾಗೂ ಸರಣಿಯಲ್ಲಿ ಕೇವಲ ಮೂರು ಪಂದ್ಯಗಳನ್ನು ನಿಗದಿ ಮಾಡುವ ಬದಲು ಐದು ಪಂದ್ಯಗಳನ್ನು ಆಡಿಸುವುದಕ್ಕೆ ಬಿಸಿಸಿಐ ಒತ್ತು ನೀಡಬೇಕು ಎಂದು ಪ್ರತಿಪಾದಿಸಿದ್ದಾರೆ.
'ನಾನು ಈ ಬಗ್ಗೆ ಹೇಳುತ್ತಲೇ ಬಂದಿದ್ದೇನೆ. ಮೂರು ಪಂದ್ಯಗಳನ್ನು ಆಯೋಜಿಸುವ ಬದಲು ಐದು ಪಂದ್ಯಗಳನ್ನು ಆಡಿಸಬಾರದೇಕೆ? ತ್ರಿಕೋನ, ಚತುಷ್ಕೋನ ಸರಣಿಗಳನ್ನು ಏಕೆ ಆಯೋಜಿಸಬಾರದು? ಇಬ್ಬರು ದಿಗ್ಗಜರು ಒಂದೇ ಮಾದರಿಯಲ್ಲಿ ಆಡುತ್ತಿರುವುದರಿಂದ ಈ ರೀತಿ ಆಲೋಚಿಸುವುದು ಅರ್ಥಪೂರ್ಣವಾಗಿರುತ್ತದೆ ಎಂದುಕೊಂಡಿದ್ದೇನೆ. ಏಕದಿನ ಕ್ರಿಕೆಟ್ ಕುರಿತು ಇನ್ನೂ ಕುತೂಹಲ ಉಳಿದಿದ್ದರೆ ಅದು ಇವರಿಬ್ಬರಿಂದಾಗಿಯೇ ಎಂಬುದರಲ್ಲಿ ಸಂಶಯವೇ ಇಲ್ಲ' ಎಂದು ಒತ್ತಿ ಹೇಳಿದ್ದಾರೆ.
'ಅತ್ಯಂತ ಮುಖ್ಯವಾದ ವಿಚಾರವೆಂದರೆ, ಅವರಿಬ್ಬರೂ ಅದ್ಭುತ ಫಾರ್ಮ್ನಲ್ಲಿದ್ದಾರೆ. ವಿಶ್ವಕಪ್ಗೆ ಇನ್ನೂ ಸಾಕಷ್ಟು ಸಮಯವಿದೆ. ಅದು ಮಹತ್ವದ ವಿಷಯವೇ ಆಗಿದ್ದರೂ, ನಾವು ರೋ–ಕೊ ಮೇಲೆ ಹೆಚ್ಚು ಗಮನ ಇಟ್ಟಿದ್ದೇವೆ. ಅವರಿಬ್ಬರೂ ಭಾರತವನ್ನು ಪ್ರತಿನಿಧಿಸುತ್ತಾ ಆಡುತ್ತಲೇ ಇರಬೇಕು. ಅಂತರರಾಷ್ಟ್ರೀಯ ಪಂದ್ಯಗಳು ಇಲ್ಲದಿದ್ದಾಗ, ದೇಶೀಯ ಕ್ರಿಕೆಟ್ನಲ್ಲಿ ಆಟ ಮುಂದುವರಿಸಬೇಕು. ಅವರು ಹೆಚ್ಚೆಚ್ಚು ಆಡಿದರೆ, ಎಲ್ಲರಿಗೂ ಒಳಿತಾಗುತ್ತದೆ' ಎಂದು ವಿವರಿಸಿದ್ದಾರೆ.
ಆ ಮೂಲಕ, ಏಕದಿನ ಕ್ರಿಕೆಟ್ ಉಳಿವಿನ ವಿಚಾರದಲ್ಲಿ ರೋ–ಕೊ ಜನಪ್ರಿಯತೆ ಪ್ರಮುಖ ಪಾತ್ರವಹಿಸಲಿದೆ ಎಂಬುದನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ವೇಳಾಪಟ್ಟಿ
ಮೊದಲ ಪಂದ್ಯ: ಜನವರಿ 11ರಂದು – ವಡೋದರ
ಎರಡನೇ ಪಂದ್ಯ: ಜನವರಿ 14ರಂದು – ರಾಜ್ಕೋಟ್
ಮೂರನೇ ಪಂದ್ಯ: ಜನವರಿ 18ರಂದು – ಇಂದೋರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.