
ಲಿಯೊನೆಲ್ ಮೆಸ್ಸಿ ಹಾಗೂ ಕೋಲ್ಕತ್ತದ ಸಾಲ್ಟ್ ಲೇಕ್ ಕ್ರೀಡಾಂಗಣ
ಕೃಪೆ: ಪಿಟಿಐ
ಕೋಲ್ಕತ್ತ: ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಲಿಯೊನೆಲ್ ಮೆಸ್ಸಿ ಅವರು ಭಾಗವಹಿಸಿದ್ದ ಕಾರ್ಯಕ್ರಮದ ವೈಫಲ್ಯವು ವ್ಯಾಪಕ ಪರಿಣಾಮ ಉಂಟುಮಾಡಲಿದೆ. ಕೋಲ್ಕತ್ತಕ್ಕೆ ಅರ್ಧಶತಮಾನದವರೆಗೂ ಅಪಖ್ಯಾತಿ ತರಲಿದೆ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಅಧ್ಯಕ್ಷ ಮತ್ತು ಬಿಜೆಪಿ ನಾಯಕ ಕಲ್ಯಾಣ್ ಚೌಬೆ ಭಾನುವಾರ ಹೇಳಿದ್ದಾರೆ.
ಅರ್ಜೆಂಟಿನಾದ ಮೆಸ್ಸಿ ಅವರು 'G.O.A.T Tour of India' ಭಾಗವಾಗಿ ಭಾರತಕ್ಕೆ ಪ್ರವಾಸ ಕೈಗೊಂಡಿದ್ದು, ಡಿಸೆಂಬರ್ 13ರಂದು ಕೋಲ್ಕತ್ತಗೆ ಬಂದಿದ್ದರು. ಅವರು ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಭಾಗಿಯಾಗಿದ್ದ ಕಾರ್ಯಕ್ರಮದ ವೇಳೆ ನೂಕು ನುಗ್ಗಲು ಉಂಟಾಗಿತ್ತು. ವಾಹನದಿಂದ ಇಳಿದು, ಕ್ರೀಡಾಂಗಣ ಪ್ರವೇಶಿಸಿದ ಮೆಸ್ಸಿ ಅವರನ್ನು ಗಣ್ಯರು, ಆಯೋಜಕರು, ರಾಜಕಾರಣಿಗಳು, ಖ್ಯಾತನಾಮರು ಹಾಗೂ ಭದ್ರತಾ ಸಿಬ್ಬಂದಿ ಸುತ್ತುವರಿದಿದ್ದರು.
ರಣಾಂಗಣವಾದ ಕ್ರೀಡಾಂಗಣ
ಬಿಗಿ ಭದ್ರತೆಯೊಂದಿಗೆ ಕ್ರೀಡಾಂಗಣದಲ್ಲಿ ಕೆಲ ದೂರ ನಡೆದು ಬಂದು ಅಭಿಮಾನಿಗಳತ್ತ ಕೈಬೀಸಿದ ಮೆಸ್ಸಿ, ನಿಗದಿತ ಸಮಯಕ್ಕಿಂತ ಮೊದಲೇ ಕ್ರೀಡಾಂಗಣದಿಂದ ನಿರ್ಗಮಿಸಿದ್ದರು. ಇದು ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿತ್ತು.
ರಾತ್ರಿಯಿಡೀ ಕಾದರೂ, ಸಾವಿರಾರು ರೂಪಾಯಿ ಕೊಟ್ಟು ಕ್ರೀಡಾಂಗಣಕ್ಕೆ ಬಂದರೂ ನೆಚ್ಚಿನ ತಾರೆಯನ್ನು ನೋಡಲಾಗಲಿಲ್ಲ ಎಂದು ಆಕ್ರೋಶಗೊಂಡು, ಚೇರು, ಬಾಟಲಿಗಳನ್ನು ಕ್ರೀಡಾಂಗಣದ ಎಸೆದಿದ್ದರು. ದಾಂದಲೆಯೇ ನಡೆದುಹೋಯಿತು. ಕ್ರೀಡಾಂಗಣ ರಣಾಂಗಣವಾಗಿ ಬದಲಾಗಿತ್ತು.
'ದೀರ್ಘಾವಧಿ ಪರಿಣಾಮ'
ಪ್ರಕರಣವನ್ನು 'ಅತ್ಯಂತ ದುರದೃಷ್ಟಕರ' ಎಂದಿರುವ ಚೌಬೆ, 'ಇಂತಹ ಘಟನೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತವೆ' ಎಂದಿದ್ದಾರೆ.
'ಮೆಸ್ಸಿ ಹಾಗೂ ಕ್ರಿಸ್ಟಿಯಾನೊ ರೊನಾಲ್ಡೊ ಅವರು ವಿಶ್ವದ ಶ್ರೇಷ್ಠ ಆಟಗಾರರೆನಿಸಿದ್ದಾರೆ. ಪ್ರಪಂಚದಲ್ಲಿ ಕೋಟ್ಯಂತರ ಜನರು ಅವರನ್ನು ಫಾಲೋ ಮಾಡುತ್ತಿದ್ದಾರೆ. 211 ದೇಶಗಳಲ್ಲಿ ಫುಟ್ಬಾಲ್ ಆಡಲಾಗುತ್ತದೆ. ಜಗತ್ತಿನಲ್ಲಿ ಫುಟ್ಬಾಲ್ ಆಡದ ದೇಶವೇ ಇಲ್ಲ; ಸಣ್ಣ ಸಣ್ಣ ದ್ವೀಪಗಳಲ್ಲಿಯೂ ಫುಟ್ಬಾಲ್ ಆಡುತ್ತಾರೆ. ಮೆಸ್ಸಿ, ರೊನಾಲ್ಡೊ ಎಲ್ಲಿಗೆ ಹೋದರೂ, ಅವರ ಪ್ರತಿಯೊಂದು ನಡೆಯನ್ನೂ ಮಾಧ್ಯಮಗಳು ಅನುಸರಿಸುತ್ತವೆ' ಎಂದು ಹೇಳಿದ್ದಾರೆ.
ಭಾರತವು, ಜಾಗತಿಕ ಕ್ರೀಡಾ ತಾಣವಾಗಿ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಹೊತ್ತಿನಲ್ಲಿ ನಡೆದಿರುವ ಕೋಲ್ಕತ್ತ ಘಟನೆಯು, ದೀರ್ಘಾವಧಿಗೆ ಪರಿಣಾಮ ಬೀರಲಿದೆ ಎಂದು ಚೌಬೆ ಕಳವಳ ವ್ಯಕ್ತಪಡಿಸಿದ್ದಾರೆ.
'ಇದು ಒಬ್ಬ ವ್ಯಕ್ತಿ ಅಥವಾ ಯಾವುದೇ ರಾಜಕೀಯ ಪಕ್ಷಕ್ಕೆ ಆದ ನಷ್ಟವಲ್ಲ. ಇಡೀ ಬಂಗಾಳ ಮತ್ತು ದೇಶಕ್ಕೇ ಆಗಿರುವ ನಷ್ಟ' ಎಂದು ಪ್ರತಿಪಾದಿಸಿದ್ದಾರೆ.
'ಒಂದು ವೇಳೆ ಭಾರತವು, ಪಶ್ಚಿಮ ಬಂಗಾಳದಲ್ಲಿ ಅಂತರರಾಷ್ಟ್ರೀಯ ಪಂದ್ಯ ಆಯೋಜಿಸಲು ಬಿಡ್ ಸಲ್ಲಿಸಿದರೆ, ಹಿನ್ನಡೆಯಾಗಲಿದೆ. ಒಂದು ಕಾರ್ಯಕ್ರಮವನ್ನೇ ಸೂಕ್ತ ರೀತಿಯಲ್ಲಿ ಆಯೋಜಿಸಲು ಸಾಧ್ಯವಾಗದಿರುವುದು ಇಂದಿಗಷ್ಟೇ ಅಲ್ಲ, ಬಂಗಾಳದ ಮೇಲೆ 50 ವರ್ಷಗಳವರೆಗೂ ಪರಿಣಾಮ ಬೀರಲಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
211 ರಾಷ್ಟ್ರಗಳಲ್ಲಿ ದೇಶಕ್ಕೆ ಕೆಟ್ಟಹೆಸರು
ಮುಂದುವರಿದು, ಈ ಹಿಂದೆ ಪೀಲೆ, ಡಿಯಾಗೋ ಮರಡೋನಾ, ಆಲಿವರ್ ಕಾನ್ ಮತ್ತು ಲೋಥರ್ ಮ್ಯಾಥೌಸ್ ಅವರಂತಹ ದಿಗ್ಗಜರು ಕೋಲ್ಕತ್ತಕ್ಕೆ ಭೇಟಿ ನೀಡಿದ್ದಾಗ, ಯಶಸ್ವಿಯಾಗಿ ನಿಭಾಯಿಸಲಾಗಿತ್ತು ಎಂದು ಒತ್ತಿ ಹೇಳಿದ್ದಾರೆ.
'ಹಿಂದಿನ ಎಲ್ಲ ಕಾರ್ಯಕ್ರಮಗಳನ್ನು ಘನತೆಯಿಂದ ಆಯೋಜಿಸಲಾಗಿತ್ತು. ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಗದ್ದಲವನ್ನು ತಪ್ಪಿಸಬಹುದಾಗಿತ್ತು' ಎಂದು ಅಭಿಪ್ರಾಯಪಟ್ಟಿದ್ದಾರೆ.
'ಭಾರತವು 2030ರಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟ ಆಯೋಜಿಸಲಿದೆ. ಫುಟ್ಬಾಲ್ ಅತ್ಯಂತ ಜನಪ್ರಿಯ ಕ್ರೀಡೆಯಾಗಿದ್ದು, ಕೋಲ್ಕತ್ತ ಘಟನೆಯು, ಈ ಆಟವನ್ನು ಆಡುವ 211 ರಾಷ್ಟ್ರಗಳಲ್ಲೂ ದೇಶಕ್ಕೆ ಕೆಟ್ಟಹೆಸರು ತಂದಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು ದೆಹಲಿಗೆ...
ಮೆಸ್ಸಿ, ಕೋಲ್ಕತ್ತ ಭೇಟಿ ಬಳಿಕ ಅದೇ ದಿನ 'ಮುತ್ತಿನ ನಗರಿ' ಹೈದಾರಾಬಾದ್ಗೆ ತೆರಳಿದ್ದರು. ಅಲ್ಲೂ, ಭದ್ರತೆಯ ಆತಂಕವಿತ್ತಾದರೂ ಕಾರ್ಯಕ್ರಮವು ಯಾವುದೇ ಗೊಂದಲಗಳಿಲ್ಲದೇ ಸುಸೂತ್ರವಾಗಿ ನೆರವೇರಿತ್ತು.
ಭಾನುವಾರ ಮುಂಬೈಗೆ ಭೇಟಿ ನೀಡಿದ್ದ ಪುಟಿನ್, ಭಾರತದ ಕ್ರೀಡಾ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಸುನಿಲ್ ಚೆಟ್ರಿ ಅವರನ್ನು ಭೇಟಿಯಾಗಿದ್ದರು.
ಪ್ರವಾಸದ ಕೊನೇ ದಿನವಾದ ಇಂದು ನವದೆಹಲಿಗೆ ತೆರಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಅರ್ಜೆಂಟಿನಾದವರೇ ಆದ ರೊಡ್ರಿಗೊ ಡಿ ಪೌಲ್ ಹಾಗೂ ಉರುಗ್ವೆಯ ಸೂಪರ್ಸ್ಟಾರ್ ಲೂಯಿಸ್ ಸೂರೆಜ್ ಅವರೂ ಮೆಸ್ಸಿ ಜೊತೆಗಿದ್ದಾರೆ.