ADVERTISEMENT

ಮೀರಾಬಾಯಿಗೆ ವಿರಾಟ್ ವಿಶೇಷ ಸಂದೇಶ; ಸ್ಪರ್ಧಿಗಳಿಗೆ ದ್ರಾವಿಡ್ ಜಯಕಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜುಲೈ 2021, 10:42 IST
Last Updated 26 ಜುಲೈ 2021, 10:42 IST
ಮೀರಾಬಾಯಿ ಚಾನು
ಮೀರಾಬಾಯಿ ಚಾನು   

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಅವರಿಗೆ ಅಭಿನಂದನೆ ಸಲ್ಲಿಸಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿಶೇಷ ಸಂದೇಶ ರವಾನಿಸಿದ್ದಾರೆ.

ಈ ವೇಳೆಟೋಕಿಯೊ ಮಹಾಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಭಾರತೀಯ ಸ್ಪರ್ಧಿಗಳನ್ನು ಮಾಜಿ ನಾಯಕ ರಾಹುಲ್ ದ್ರಾವಿಡ್ ಹುರಿದುಂಬಿಸಿದ್ದಾರೆ.

ಈ ಎರಡೂ ವಿಡಿಯೊಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

'ಇಡೀ ದೇಶದ ನಿರೀಕ್ಷೆಗಳ ಭಾರವನ್ನು ಹೊತ್ತುಕೊಂಡು ಅದನ್ನು ಹೇಗೆ ಗೆಲುವಾಗಿ ಪರಿವರ್ತಿಸಬೇಕೆಂಬುದು ಮೀರಾಬಾಯಿ ಚಾನು ಅವರಿಗೆ ತಿಳಿದಿದೆ' ಎಂದು ವಿರಾಟ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ರಾಹುಲ್ ದ್ರಾವಿಡ್ ತಮ್ಮ ಸಂದೇಶದಲ್ಲಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಭಾರತೀಯ ಸ್ಪರ್ಧಿಗಳನ್ನು ಹುರಿದುಂಬಿಸೋಣ ಎಂದು ಮನವಿ ಮಾಡಿದ್ದಾರೆ. 'ಚಿಯರ್ ಫಾರ್ ಇಂಡಿಯಾ' ಅಭಿಯಾನದ ಭಾಗವಾಗಿ ರಾಹುಲ್ ಭಾರತೀಯ ಸ್ಪರ್ಧಿಗಳನ್ನು ಹುರಿದುಂಬಿಸಿದ್ದಾರೆ.

ದ್ರಾವಿಡ್ ಪ್ರಸ್ತುತ ಲಂಕಾ ಪ್ರವಾಸದಲ್ಲಿದ್ದು, ಭಾರತದ ಯುವ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದ್ರಾವಿಡ್ ಮಾರ್ಗದರ್ಶನದಲ್ಲಿ ಏಕದಿನ ಸರಣಿಯಲ್ಲಿ ಗೆಲುವು ದಾಖಲಿಸಿರುವ ಶಿಖರ್ ಧವನ್ ಪಡೆಯು, ಟ್ವೆಂಟಿ-20 ಸರಣಿಯಲ್ಲೂ ಗೆಲುವಿನೊಂದಿಗೆ ಶುಭಾರಂಭ ಮಾಡಿಕೊಂಡಿದೆ.

ಅತ್ತ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ, ಆಗಸ್ಟ್ ತಿಂಗಳಿನಿಂದ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.