ಶುಭಾಂಶು ಶುಕ್ಲಾ
(ರಾಯಿಟರ್ಸ್ ಚಿತ್ರ)
ಫ್ಲಾರಿಡಾ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ಪ್ರಯಾಣ ಬೆಳೆಸಿರುವ ಎರಡನೇ ಭಾರತೀಯ ಎನಿಸಿರುವ ಗಗನಯಾತ್ರಿ ಶುಭಾಂಶು ಶುಕ್ಲಾ ಇದನ್ನು ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದಾರೆ.
'ಆ್ಯಕ್ಸಿಯಂ–4' ಅಂತರಿಕ್ಷ ಕಾರ್ಯಕ್ರಮದ ಭಾಗವಾಗಿ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಇಂದು (ಜೂನ್ 25) ಮಧ್ಯಾಹ್ನ 12.01ಕ್ಕೆ (ಭಾರತೀಯ ಕಾಲಮಾನ) ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಆ ಮೂಲಕ 39 ವರ್ಷದ ಶುಭಾಂಶು ಶುಕ್ಲಾ ಅಂತರಿಕ್ಷಯಾನ ಕೈಗೊಂಡಿರುವ ಭಾರತದ ಎರಡನೇ ಗಗನಯಾನಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
1984ರಲ್ಲಿ ಭಾರತದ ರಾಕೇಶ್ ಶರ್ಮಾ ಅವರು ರಷ್ಯಾದ ಗಗನನೌಕೆಯಲ್ಲಿ ಗಗನಯಾನ ಕೈಗೊಂಡಿದ್ದರು. 41 ವರ್ಷಗಳ ಬಳಿಕ, ಭಾರತದ ಮತ್ತೊಬ್ಬ ಗಗನಯಾನಿ ಬಾಹ್ಯಾಕಾಶಕ್ಕೆ ತೆರಳಿದ್ದಾರೆ.
ಸ್ಪೇಸ್ಎಕ್ಸ್ನ 'ಫಾಲ್ಕನ್–9' ರಾಕೆಟ್ ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಚಿಮ್ಮಿತು. ಈ ಸಂದರ್ಭದಲ್ಲಿ ವಿಶೇಷ ಸಂದೇಶ ರವಾಣಿಸಿರುವ ಶುಭಾಂಶು, 'ನಮಸ್ಕಾರ ದೇಶವಾಸಿಗಳೇ, 41 ವರ್ಷಗಳ ನಂತರ ನಾವು ಬಾಹ್ಯಾಕಾಶ ತಲುಪುತ್ತಿದ್ದೇವೆ' ಎಂದು ಹೇಳಿದ್ದಾರೆ.
'ನನ್ನ ಹೆಗಲ ಮೇಲೆ ತ್ರಿವರ್ಣ ಧ್ವಜವಿದೆ. ತ್ರಿವರ್ಣ ಧ್ವಜವು ನಾವು ನಿಮ್ಮೆಲ್ಲರೊಂದಿಗೆ ಇದ್ದೇನೆ ಎಂಬ ಸಂದೇಶವನ್ನು ಸಾರುತ್ತದೆ. ಇದು ಐಎಸ್ಎಸ್ಗೆ ನನ್ನ ಪ್ರಯಾಣದ ಆರಂಭ ಮಾತ್ರವಲ್ಲ. ಭಾರತದ ಮಾನವಸಹಿತ ಅಂತರಿಕ್ಷಯಾನದ ಪ್ರಾರಂಭವೂ ಆಗಿದೆ' ಎಂದು ಹೇಳಿದ್ದಾರೆ.
'ನಾವು ಭೂಮಿಯ ಸುತ್ತ ಸೆಕೆಂಡಿಗೆ 7.5 ಕಿ.ಮೀ. ವೇಗದಲ್ಲಿ ಸುತ್ತುತ್ತಿದ್ದೇವೆ' ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.