ADVERTISEMENT

ಹಳೆ ತೆರಿಗೆ ಪದ್ಧತಿ ರದ್ದತಿ ಇಲ್ಲ‌: ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟನೆ

ಪಿಟಿಐ
Published 4 ಫೆಬ್ರುವರಿ 2025, 16:00 IST
Last Updated 4 ಫೆಬ್ರುವರಿ 2025, 16:00 IST
ನಿರ್ಮಲಾ ಸೀತಾರಾಮನ್ –ಪಿಟಿಐ ಚಿತ್ರ
ನಿರ್ಮಲಾ ಸೀತಾರಾಮನ್ –ಪಿಟಿಐ ಚಿತ್ರ   

ನವದೆಹಲಿ: ‘ಹಳೆಯ ತೆರಿಗೆ ಪದ್ಧತಿಯನ್ನು ರದ್ದುಪಡಿಸುವ ಯಾವುದೇ ಪ್ರಸ್ತಾವವು ಸರ್ಕಾರದ ಮುಂದಿಲ್ಲ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು. 

‘ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ಅನುಕೂಲ ಕಲ್ಪಿಸಲು ಆದಾಯ ತೆರಿಗೆ ಕಡಿತಕ್ಕೆ ಕ್ರಮಕೈಗೊಂಡಿದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇಂತಹ ಟೀಕೆಗಳಿಗೆ ಅರ್ಥವೂ ಇಲ್ಲ’ ಎಂದರು.

ADVERTISEMENT

ವಾರ್ಷಿಕ ₹12 ಲಕ್ಷದವರೆಗೆ ಆದಾಯ ಹೊಂದಿರುವವರ ಆದಾಯ ತೆರಿಗೆ ಹೊರೆಯು ಹೊಸ ತೆರಿಗೆ ಪದ್ಧತಿ ಅಡಿ 2025–26ನೇ ಆರ್ಥಿಕ ವರ್ಷದಿಂದ (ಏಪ್ರಿಲ್‌ 1) ಸೊನ್ನೆಗೆ ಇಳಿಯಲಿದೆ. ವೇತನದಾರ ವರ್ಗದವರಿಗೆ ಸ್ಟ್ಯಾಂಡರ್ಡ್‌ ಡಿಡಕ್ಷನ್‌ನ ಸೌಲಭ್ಯವಿದೆ. ಹಾಗಾಗಿ, ಈ ವರ್ಗದವರಿಗೆ ವಾರ್ಷಿಕ ₹12.75 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಹೊರೆ ಇರುವುದಿಲ್ಲ.

2025–26ನೇ ಸಾಲಿನ ಬಜೆಟ್‌ನಲ್ಲಿ ಬಂಡವಾಳ ವೆಚ್ಚಕ್ಕೆ ₹11.21 ಲಕ್ಷ ಕೋಟಿ ನಿಗದಿಪಡಿಸಲಾಗಿದೆ. ಇದು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 4.3ರಷ್ಟಿದೆ. ಬಜೆಟ್‌ನಲ್ಲಿ ಬಂಡವಾಳ ವೆಚ್ಚವನ್ನು ಕಡಿತಗೊಳಿಸಿಲ್ಲ ಎಂದು ನಿರ್ಮಲಾ ಸ್ಪಷ್ಟಪಡಿಸಿದರು.

2024–25ರಲ್ಲಿ ಬಂಡವಾಳ ವೆಚ್ಚವನ್ನು ಪರಿಷ್ಕರಿಸಿದ್ದ ಸರ್ಕಾರವು, ₹10.18 ಲಕ್ಷ ಕೋಟಿ ನಿಗದಿ‍ಪಡಿಸಿತ್ತು.

ಜಿಎಸ್‌ಟಿ ಕಡಿತ: ಶೀಘ್ರ ನಿರ್ಧಾರ

‘148 ವಸ್ತುಗಳ ಮೇಲಿನ ಜಿಎಸ್‌ಟಿ ಕಡಿಮೆಗೊಳಿಸುವ ಹಾಗೂ ನಾಲ್ಕು ಸ್ಲ್ಯಾಬ್‌ಗಳ ಪರಿಷ್ಕರಣೆ ಕಾರ್ಯ ಅಂತಿಮಗೊಂಡಿದೆ. ಶೀಘ್ರವೇ ಜಿಎಸ್‌ಟಿ ಮಂಡಳಿಯು ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದೆ’ ಎಂದು ಸಚಿವೆ ನಿರ್ಮಲಾ ಹೇಳಿದರು. ಪ್ರಸ್ತುತ ಜಿಎಸ್‌ಟಿ ಅಡಿ ಶೇ 5 ಶೇ 12 ಶೇ 18 ಹಾಗೂ ಶೇ 28ರಷ್ಟು ತೆರಿಗೆ ವಿಧಿಸಲಾಗುತ್ತದೆ. ಐಷಾರಾಮಿ ಸರಕುಗಳು ಮೇಲೆ ಶೇ 28ರಷ್ಟು ತೆರಿಗೆ ವಿಧಿಸಿದರೆ ಜೀವನಾವಶ್ಯಕ ಸರಕುಗಳು ಶೇ 5ರ ತೆರಿಗೆ ಸ್ಲ್ಯಾಬ್‌ನಡಿ ಬರುತ್ತವೆ.  ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯಡಿ ತೆರಿಗೆ ಪ್ರಮಾಣ ಸರಳೀಕರಣ ಮತ್ತು ಸ್ಲ್ಯಾಬ್‌ಗಳ ‍‍ಪರಿಷ್ಕರಣೆ ಬಗ್ಗೆ ಆರು ಸಚಿವರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಅಂತಿಮ ವರದಿ ಸಿದ್ಧ‍ಪಡಿಸಿದೆ ಎಂದು ಹೇಳಲಾಗಿದೆ. ‘ಜಿಎಸ್‌ಟಿ ದರ ಸರಳೀಕರಣ ಮತ್ತು ಸ್ಲ್ಯಾಬ್‌ಗಳ ಪರಿಷ್ಕರಣೆ ಬಗ್ಗೆ ಮೂರು ವರ್ಷದಿಂದಲೂ ಪರಾಮರ್ಶೆ ನಡೆದಿದೆ. ಶೀಘ್ರವೇ ಇದಕ್ಕೆ ಅಂತಿಮ ರೂಪ ಸಿಗಲಿದೆ’ ಎಂದರು. 

8ಕ್ಕೆ ಆರ್‌ಬಿಐ ಆಡಳಿತ ಮಂಡಳಿ ಸಭೆ

ಸಚಿವೆ ನಿರ್ಮಲಾ ಅವರು ಫೆಬ್ರುವರಿ 8ರಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಆಡಳಿತ ಮಂಡಳಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಂಸತ್‌ನಲ್ಲಿ ಆಯವ್ಯಯ ಮಂಡನೆಯಾದ ಬಳಿಕ ಹಣಕಾಸು  ಸಚಿವರು ಆರ್‌ಬಿಐನ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡುವುದು ರೂಢಿಗತವಾಗಿ ನಡೆದುಕೊಂಡು ಬಂದಿದೆ. 2025–26ನೇ ಸಾಲಿನ ಬಜೆಟ್‌ನಲ್ಲಿ ಆದಾಯ ತೆರಿಗೆ ಕಡಿತಗೊಳಿಸಿರುವುದು ಸೇರಿ ಪ್ರಮುಖ ಅಂಶಗಳ ಬಗ್ಗೆ ಸಭೆಯಲ್ಲಿ ನಿರ್ಮಲಾ ಅವರು ಪ್ರಸ್ತಾಪಿಸುವ ನಿರೀಕ್ಷೆಯಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.