
ಚಿತ್ರ:ಎಐ
ವರ್ಷದ ಕೊನೆಯ ಹಾಗೂ ಮಹತ್ವದ ಆಚರಣೆಯಾದ ವೈಕುಂಠ ಏಕಾದಶಿಯನ್ನು ಡಿಸೆಂಬರ್ 30ರಂದು ಆಚರಿಸಲಾಗುತ್ತದೆ. ಜ್ಯೋತಿಷ ಶಾಸ್ತ್ರದ ಪ್ರಕಾರ ವೈಕುಂಠ ಏಕಾದಶಿ ಸೋಮವಾರ ಬೆಳಗಿನ ಜಾವ 3:29ರಿಂದ ಆರಂಭವಾಗಿ ಮಂಗಳವಾರ ಮಧ್ಯರಾತ್ರಿ 1:17ರವರೆಗೆ ಇರಲಿದೆ. ಈ ದಿನ ಏನೆಲ್ಲ ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಪುರಾಣ ಕಥೆಗಳ ಪ್ರಕಾರ, ವೈಕುಂಠ ಏಕಾದಶಿಯಂದು ತುಳಸಿ, ಆಹಾರ ಪದಾರ್ಥ ಹಾಗೂ ದನಿಯಾ ಮನೆಗೆ ತರುವುದರಿಂದ ವರ್ಷಪೂರ್ತಿ ಅದೃಷ್ಟ ಹಾಗೂ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ಈ ದಿನ ಬೆಳಿಗ್ಗೆ ಸೂರ್ಯೋದಯಕ್ಕೆ ಮುನ್ನ ಎದ್ದು, ಸ್ನಾನ ಮುಗಿಸಿ, ಶುಭ್ರ ವಸ್ತ್ರ ಧರಿಸಿ ವಿಷ್ಣು ದೇಗುಲಕ್ಕೆ ಉತ್ತರ ದ್ವಾರದ ಮೂಲಕ ದೇವಾಲಯ ಪ್ರವೇಶಿಸಿದರೆ, ಮೋಕ್ಷ ಪ್ರಾಪ್ತಿಯಾಗುವುದರ ಜೊತೆಗೆ ಕೋರಿಕೆಗಳು ಈಡೇರುತ್ತವೆ.
ಈ ಏಕಾದಶಿಯನ್ನು ಶ್ರದ್ಧೆಯಿಂದ ಆಚರಣೆ ಮಾಡಿದರೆ, ವರ್ಷದಲ್ಲಿ ಬರುವ 24 ಏಕಾದಶಿಗಳ ಆಚರಣೆಯ ಫಲ ಲಭಿಸಲಿದೆ ಎಂದು ಪುರಾಣ ಗ್ರಂಥಗಳಲ್ಲಿ ಹೇಳಲಾಗಿದೆ.
ಈ ದಿನ ಅಂಗಡಿಯಿಂದ ಒಂದು ಹೊಸ ಸೀರೆಯನ್ನು ಮನೆಗೆ ತನ್ನಿ. ಮನೆಯಲ್ಲಿ ತುಳಸಿ ಪೂಜೆ ಮಾಡಿ, ತುಳಸಿಗೆ ಬಾಗಿನ ಅರ್ಪಿಸಿ. ಇದರಿಂದ ವಿಷ್ಣು ಹಾಗೂ ಲಕ್ಷ್ಮೀಯ ಕೃಪೆಗೆ ಪಾತ್ರರಾಗುತ್ತೀರಿ.
ದೇವರ ಮುಂದೆ 11, 21 ಅಥವಾ 51 ದೀಪಗಳನ್ನು ಹಚ್ಚುವುದರಿಂದ ನಿರುದ್ಯೋಗ ಸಮಸ್ಯೆ ದೂರವಾಗುತ್ತದೆ. ಮನೆಯಲ್ಲಿನ ಆರ್ಥಿಕ ಸಮಸ್ಯೆ ದೂರವಾಗಿ ಅದೃಷ್ಟ ಲಭಿಸಲಿದೆ. ತುಳಸಿ ಬೀಜಗಳನ್ನು ಹಾಲಿನಲ್ಲಿ ಬೆರೆಸಿ ವಿಷ್ಣು ಹಾಗೂ ಶಿವನಿಗೆ ಅಭಿಷೇಕ ಮಾಡಿದರೆ ನಿಮ್ಮೆಲ್ಲ ಕಷ್ಟಗಳು ಶೀಘ್ರವಾಗಿ ದೂರವಾಗುತ್ತದೆ ಎಂಬ ನಂಬಿಕೆ ಇದೆ.
ವಿಷ್ಣುವಿಗೆ ಪಚ್ಚ ಕರ್ಪೂರ ಪ್ರಿಯವಾದ ವಸ್ತುವಾಗಿದೆ. ಹಾಗಾಗಿ ತಿರುಪತಿಯಲ್ಲಿ ಪ್ರತಿನಿತ್ಯ ವಿಷ್ಣುವಿಗೆ ಪಚ್ಚ ಕರ್ಪೂರ ಹಚ್ಚಲಾಗುತ್ತದೆ. ಏಕಾದಶಿ ದಿನ ಪಚ್ಚ ಕರ್ಪೂರದ ಆರತಿ ಬೆಳಗಿಸುವುದರಿಂದ, ಮನೆಯ ವಾತಾವರಣ ಶುದ್ಧಿಯಾಗುವುದರ ಜೊತೆಗೆ ವಿಷ್ಣುವಿನ ಆಶೀರ್ವಾದವೂ ಲಭಿಸಲಿದೆ.
ವಿಷ್ಣು ದೇವಸ್ಥಾನಕ್ಕೆ ಹೋಗುವಾಗ ಒಂದೆರೆಡು ಏಲಕ್ಕಿ ಹಾಗೂ ನಾಣ್ಯಗಳನ್ನು ತೆಗೆದುಕೊಂಡು ಹೋಗಿ. ಏಲಕ್ಕಿ ಮತ್ತು ನಾಣ್ಯ ಎರಡನ್ನೂ ದೇವರ ಹುಂಡಿಗೆ ಹಾಕುವುದು ಶುಭಕರ.
ವೈಕುಂಠ ಏಕಾದಶಿಯಂದು ಹಳದಿ ಬಣ್ಣದ ಕವಡೆಯನ್ನು ಮನೆಗೆ ತರುವುದರಿಂದ ಲಕ್ಷ್ಮೀಯನ್ನು ಕರೆ ತಂದಂತೆ ಎಂದು ನಂಬಲಾಗಿದೆ. ಈ ಕವಡೆಗಳನ್ನು ಹಾಲಿನಿಂದ ಶುದ್ಧ ಮಾಡಿ, ಬೀರು ಅಥವಾ ದೇವರ ಕೋಣೆಯಲ್ಲಿ ಇಡುವುದರಿಂದ ಲಕ್ಷ್ಮೀ ಶಾಶ್ವತವಾಗಿ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ.
ಇಂದು ವಿಷ್ಣುವಿಗೆ ಏಲಕ್ಕಿ ಮಾಲೆ ಅರ್ಪಿಸುವುದರಿಂದ ನಮ್ಮ ಮನೋಕಾಮನೆಗಳು ಈಡೇರುತ್ತವೆ. ಅಲ್ಲದೇ ವಾಸ್ತುದೋಷ ದೂರವಾಗಿ ಮನೆಯಲ್ಲಿ ಶಾಂತಿ ಹಾಗೂ ಸಮೃದ್ಧಿ ನೆಲೆಸುತ್ತದೆ. ಈ ದಿನ ಸಂಜೆ ಮಣ್ಣಿನ ದೀಪ ಬೆಳಗಿಸುವುದು ಉತ್ತಮ.
ಇಂದು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬಾರದು. ಗಂಡ ಹೆಂಡತಿ ಬ್ರಹ್ಮಚರ್ಯ ಪಾಲನೆ ಮಾಡುವುದು ಒಳ್ಳೆಯದು. ನೀರಿಗೆ ಪಚ್ಚ ಕರ್ಪೂರ ಸೇರಿಸಿ ಮನೆಯನ್ನು ಸ್ವಚ್ಛಗೊಳಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ವೃದ್ಧಿಯಾಗುತ್ತದೆ.
ವೈಕುಂಠ ಏಕಾದಶಿಯ ದಿನ ಭಗವದ್ಗೀತೆ ಪಾರಾಯಣ ಅಥವಾ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಪುಣ್ಯದ ಕೆಲಸ. ಒಂದು ವೇಳೆ ವಿಷ್ಣು ಸಹಸ್ರನಾಮವನ್ನು ಓದಲು ಸಾಧ್ಯವಾಗದೆ ಇರುವವರು, ಈ ಪುಸ್ತಕವನ್ನು ಮುಟ್ಟಿ ನಮಸ್ಕರಿಸಿದರೆ ಸಾಕು. ನಮ್ಮೆಲ್ಲ ಪೂರ್ವ ಜನ್ಮದ ಕರ್ಮಗಳು ಕಳೆಯುತ್ತವೆ ಎಂದು ಹೇಳಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.