
ಬೆಂಗಳೂರು: ಮೆಟ್ರೊ ಮಾರ್ಗಗಳನ್ನು ಹೆಚ್ಚಳ ಮಾಡಿ ವಾಹನ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಮುಂದಾಗಿದೆ. 2027ರ ಡಿಸೆಂಬರ್ ಒಳಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೊ ಸಂಚಾರ ಆರಂಭಗೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬಿಎಂಆರ್ಸಿಎಲ್ ಕಚೇರಿಯಲ್ಲಿ ಮೆಟ್ರೊ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಪ್ರಸ್ತುತ ಮೆಟ್ರೊ ಜಾಲವು 96 ಕಿ.ಮೀ. ಹೊಂದಿದೆ. 2026ರಲ್ಲಿ 41 ಕಿ.ಮೀ ಉದ್ದದ ಮಾರ್ಗಗಳಲ್ಲಿ ಮೆಟ್ರೊ ಕಾರ್ಯಾರಂಭ ಮಾಡಲಿದೆ. 2027ರಲ್ಲಿ 38 ಕಿ.ಮೀ. ಸೇರ್ಪಡೆಗೊಳ್ಳಲಿದೆ. ಗುಲಾಬಿ ಮತ್ತು ನೀಲಿ ಮಾರ್ಗಗಳ ಸೇರ್ಪಡೆಯಿಂದ ಬೆಂಗಳೂರಿನಲ್ಲಿ ಒಟ್ಟು 175 ಕಿ.ಮೀ ಉದ್ದದ ಮೆಟ್ರೊ ಮಾರ್ಗಗಳು ಕಾರ್ಯನಿರ್ವಹಿಸಲಿವೆ ಎಂದು ವಿವರಿಸಿದರು.
‘ಇದರ ಹೊರತಾಗಿ ಮಾಗಡಿ ರಸ್ತೆಯಲ್ಲಿ ತಾವರಕೆರೆವರೆಗೆ, ಹೊಸಕೋಟೆ, ಬಿಡದಿ, ನೆಲಮಂಗಲದವರೆಗೆ ಮೆಟ್ರೊ ವಿಸ್ತರಿಸುವ ಯೋಜನೆ ಹಮ್ಮಿಕೊಂಡಿದ್ದೇವೆ. ಒಂದು ಕಡೆ ಯೋಜನೆ ಕೈಗೆತ್ತಿಕೊಂಡಿದ್ದು, ಉಳಿದ ಕಡೆಗಳಲ್ಲಿ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ’ ಎಂದು ತಿಳಿಸಿದರು.
‘ಈ ವರ್ಷ ಆರಂಭಗೊಂಡಿರುವ ಹಳದಿ ಮಾರ್ಗದಲ್ಲಿ ದಿನಕ್ಕೆ ಸರಾಸರಿ 1 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಮುಂದಿನ ತಿಂಗಳು ಮೆಟ್ರೊ ಮೂರನೇ ಹಂತದ ಯೋಜನೆಯಲ್ಲಿ ಎತ್ತರಿಸಿದ ಕಾರಿಡಾರ್ (ಡಬಲ್ ಡೆಕರ್) ಸೇರಿದಂತೆ ಸುಮಾರು 100 ಕಿ.ಮೀ ಉದ್ದದ ಮೆಟ್ರೊ ಕಾಮಗಾರಿಗೆ ಟೆಂಡರ್ ಕರೆಯಲಾಗುವುದು. ₹ 25,311 ಸಾವಿರ ಕೋಟಿ ವೆಚ್ಚದ ಈ ಕಾಮಗಾರಿಗೆ, ಜೈಕಾದಿಂದ ₹ 15,600 ಕೋಟಿ ಸಾಲ ಪಡೆಯಲಾಗುತ್ತಿದೆ. ₹ 9,700 ಕೋಟಿ ವೆಚ್ಚದ ಎತ್ತರಿಸಿದ ಕಾರಿಡಾರ್ಗೆ ಜನವರಿಯಲ್ಲಿ ಟೆಂಡರ್ ಕರೆಯಲಾಗುವುದು’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.