
ವಿಧಾನಸೌಧ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿರುವ ಐದು ನಗರ ಪಾಲಿಕೆಗಳಲ್ಲಿರುವ ಮುಖ್ಯ–ಉಪ ಮುಖ್ಯ ರಸ್ತೆಗಳು ಹಾಗೂ ವಾರ್ಡ್ ಅಭಿವೃದ್ಧಿಗೆ ಕ್ರಮವಾಗಿ ₹1,241.57 ಕೋಟಿ ಮತ್ತು ₹1,055 ಕೋಟಿ ಮೊತ್ತದ ಕ್ರಿಯಾಯೋಜನೆಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ನಗರ ಪಾಲಿಕೆಗಳ ವಿವಿಧ ವಾರ್ಡ್ ರಸ್ತೆ, ಚರಂಡಿ ಅಭಿವೃದ್ಧಿ, ನಿರ್ವಹಣೆ ಮತ್ತು ಮೂಲಸೌಕರ್ಯಗಳ ಕಾಮಗಾರಿಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ. 2025–26ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ರಾಜ್ಯ ಸರ್ಕಾರದಿಂದ ₹1,055 ಕೋಟಿ ಅನುದಾನ ಒದಗಿಸಲು ಸಮ್ಮತಿಸಲಾಗಿದೆ.
ಈ ಕಾಮಗಾರಿಗಳನ್ನು ₹10 ಕೋಟಿಗೆ ಕಡಿಮೆ ಇರದಂತೆ ಪ್ಯಾಕೇಜ್ ಮಾಡಿ, ಕೆಟಿಪಿಪಿ ಕಾಯ್ದೆಯಂತೆ ಅಲ್ಪಾವಧಿ ಟೆಂಡರ್ ಕೈಗೊಂಡು ಕಾಮಗಾರಿ ನಡೆಸಬೇಕು. ಈ ಕಾಮಗಾರಿಗಳು ದೀರ್ಘಾವಧಿ ಬಾಳಿಕೆಯುಳ್ಳ ಆಸ್ತಿ ಸೃಜನೆ ಸ್ವರೂಪದ್ದಾಗಿದ್ದು, ಉತ್ತಮ ಗುಣಮಟ್ಟ ಕಾಯ್ದುಕೊಳ್ಳಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ನಿರ್ದಿಷ್ಟ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಲಾಗಿದೆ.
₹900 ಕೋಟಿ ಅನುಮೋದಿತ ಕ್ರಿಯಾ ಯೋಜನೆಯಲ್ಲಿ ಎಸ್ಸಿಎಸ್ಪಿ–ಟಿಎಸ್ಪಿ ಕಾಯ್ದೆ ಪ್ರಕಾರ, ಕಾಮಗಾರಿಗಳನ್ನು ಗುರುತಿಸಿ, ಅನುಷ್ಠಾನಗೊಳಿಸುವುದು ಜಿಬಿಎ ಮುಖ್ಯ ಆಯುಕ್ತರ ಜವಾಬ್ದಾರಿಯಾಗಿದೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ಆಯ್ಕೆಯಾದ ರಸ್ತೆ, ಚರಂಡಿ, ಉದ್ಯಾನ ಸೇರಿದಂತೆ ಮೂಲಸೌಕರ್ಯ ಕಾಮಗಾರಿಗಳಾಗಿರುವುದರಿಂದ ಎಸ್ಸಿಎಸ್ಪಿ–ಟಿಎಸ್ಪಿ ಕಾಯ್ದೆ ಪ್ರಕಾರ ಕಾಮಗಾರಿಯನ್ನು ವಿಂಗಡಿಸಬೇಕು ಎಂದು ಹೇಳಲಾಗಿದೆ.
ಮೂಲಸೌಕರ್ಯ: ವಿಶೇಷ ಮೂಲಸೌಕರ್ಯ ಬಂಡವಾಳ ಬೆಂಬಲ ಯೋಜನೆಯಡಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿನ ಮುಖ್ಯ–ಉಪ ಮುಖ್ಯ ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ₹1,241.57 ಕೋಟಿ ಅಂದಾಜು ಮೊತ್ತದ ಕ್ರಿಯಾ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ವಿವರ ನೀಡಿದರು.
ಆಯಾ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ವಾರ್ಡ್ವಾರು ಅಭಿವೃದ್ಧಿ ಕಾಮಗಾರಿಗಳ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗಿದ್ದು, ಕ್ಷೇತ್ರಗಳ ಮಿತಿ ₹25 ಕೋಟಿ ಮತ್ತು ₹50 ಕೋಟಿಯಾಗಿದೆ. ಶಿವಾಜಿನಗರ ವಿಧಾನಸಭೆ ಕ್ಷೇತ್ರ ಹೊರತುಪಡಿಸಿ ಕಾಂಗ್ರೆಸ್ ಶಾಸಕರ ವಿಧಾನಸಭೆ ಕ್ಷೇತ್ರಕ್ಕೆ ತಲಾ ₹50 ಕೋಟಿಯಾಗಿದ್ದರೆ, ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರ ಪದ್ಮನಾಭನಗರ ಕ್ಷೇತ್ರ (₹50 ಕೋಟಿ) ಹೊರತುಪಡಿಸಿ, ಬಿಜೆಪಿ ಶಾಸಕರ ಕ್ಷೇತ್ರಕ್ಕೆ ತಲಾ ₹25 ಕೋಟಿ ಮೊತ್ತದ ಕಾಮಗಾರಿ ಕ್ರಿಯಾಯೋಜನೆಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.