ADVERTISEMENT

ಮಧ್ಯಂತರ ಚುನಾವಣೆ| ಒಳ್ಳೆ ವಿದ್ಯಾರ್ಥಿಗಳು ದಿನಾಲೂ ಓದ್ಬೇಕು:ಮಾಧುಸ್ವಾಮಿ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 12:39 IST
Last Updated 15 ಸೆಪ್ಟೆಂಬರ್ 2019, 12:39 IST
ಜೆ.ಸಿ.ಮಾಧುಸ್ವಾಮಿ
ಜೆ.ಸಿ.ಮಾಧುಸ್ವಾಮಿ   

ತುಮಕೂರು: ಮಧ್ಯಂತರ ಚುನಾವಣೆ ಬರುತ್ತೆ. ಚುನಾವಣೆಗೆ ಸಿದ್ಧರಾಗುತ್ತೇವೆ ಎಂದು ವಿರೋಧ ಪಕ್ಷದವರು ಹೇಳುತ್ತಿದ್ದರೆ ಹೇಳಿಕೊಳ್ಳಲಿ. ಒಳ್ಳೆ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವುದು ತಪ್ಪಲ್ಲ ಎಂದು ಕಾನೂನು ಮತ್ತು ಸಂಸದೀಯ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಭಾನುವಾರ ಸಿದ್ಧಗಂಗಾಮಠದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, 'ಒಂದೆಡೆ ಸರ್ಕಾರ ಬಹಳ ದಿನ ಇರಲ್ಲ ಅಂಥಾ ಹೇಳ್ತಾರೆ. ಮತ್ತೊಂಡೆ 20 ಜೆಡಿಎಸ್, ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರ್ತಾರೆ ಎಂದು ಮಾಧ್ಗಮಗಳಲ್ಲಿ ಬರುತ್ತದೆ. ಏನಾಗುತ್ತೊ ನೋಡೋಣ' ಎಂದರು.

ಸಂಚಾರ ನಿಯಮ ಉಲ್ಲಂಘನೆಗೆ ಕೇಂದ್ರ ಸರ್ಕಾರ ನಿಗದಿಪಡಿಸಿದ ದಂಡ ಪ್ರಮಾಣ ಕಡಿಮೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಒಂದೆರಡು ದಿನಗಳಲ್ಲಿ ಘೋಷಣೆ ಮಾಡಲಾಗುವುದು ಎಂದರು.

ದಂಡ ಹೆಚ್ಚಳ ಉದ್ದೇಶ ಸರ್ಕಾರಕ್ಕೆ ಹೆಚ್ಚಿನ ಆದಾಯ ಗಳಿಕೆ ಉದ್ದೇಶಕ್ಕಲ್ಲ. ಹೆಚ್ಚು ದಂಡ ವಿಧಿಸಿದರೆ ಜನರು ಸಂಚಾರ ನಿಯಮಗಳನ್ನು ಜನರು ಪಾಲಿಸುತ್ತಾರೆ ಎಂಬುದಾಗಿತ್ತು. ಆದರೆ, ಇದಕ್ಕೆ ಜನರಿಂದ ಬೇರೆ ಬೇರೆ ರೀತಿಯ ಪ್ರತಿಕ್ರಿಯೆ, ಆಕ್ಷೇಪ ವ್ಯಕ್ತವಾಗಿದೆ. ಅವರ ಅಭಿಪ್ರಾಯಕ್ಕೆ ನಾವು ಮನ್ನಣೆ ಕೊಡಲೇಬೇಕು. ಹೀಗಾಗಿ ದಂಡ ಪ್ರಮಾಣ ತಗ್ಗಿಸಲು ತೀರ್ಮಾನಿಸಲಾಗಿದೆ ಎಂದರು.

ಹೆಚ್ಷು ದಂಡ ನಿಗದಿಪಡಿಸಿ ವಸೂಲಿ ಮಾಡುವುದು ಎಲ್ಲೊ ಒಂದು ಕಡೆ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡಬಹುದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.

ದೇಶಕ್ಕೆ ಒಂದೇ ಭಾಷೆ ಇರಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಹೇಳಿಕೆ ಗಮನಿಸಿದ್ದೇನೆ. ದೇಶಕ್ಕೆ ಒಂದೇ ಭಾಷೆ ಇದ್ದರೆ ಒಳ್ಳೆಯದು ಎಂದು ಹೇಳಿದ್ದಾರೆಯೇ ಹೊರತು ಪ್ರಾದೇಶಿಕ ಭಾಷೆಗಳು ಬೇಡ ಎಂದಿಲ್ಲ. ಪ್ರಾದೇಶಿಕ ಭಾಷೆಗಳನ್ನು ಬೆಳೆಸಿ ಎಂದು ಹೇಳಿದ್ದಾರೆ ಎಂದರು.

ನಾವು ಕನ್ನಡದವರು. ಕನ್ನಡ ಅಭಿಮಾನಿಗಳು. ಭಾಷೆಯ ಮೇಲೆ ದಾಳಿಯಾದರೆ, ಪ್ರಹಾರ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಮಾಧುಸ್ವಾಮಿ ಹೇಳಿದರು.

ಇನ್ನಷ್ಟು ಓದು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.